ಕುಂದಾಪುರ: ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಮಹಿಳೆಯೊಬ್ಬರ ಚೂಡಿದಾರ್ ಜೇಬಿನಲ್ಲಿದ್ದ ಸುಮಾರು 12 ಗ್ರಾಂ ತೂಕದ, ₹1.5 ಲಕ್ಷ ಮೌಲ್ಯದ ಚಿನ್ನದ ಸರ ಕಳವಾಗಿರುವ ಘಟನೆ ನಡೆದಿದೆ.
ಕಾಸರಗೋಡು ಮೂಲದ ಬೆನ್ನಿ ಥಾಮಸ್ ಅವರು ಜೂ.6ರಂದು ಕುಟುಂಬದೊಂದಿಗೆ ಮಂಗಳೂರಿನಿಂದ ಮಡ್ಯಾಂವ್ಗೆ ರೈಲು ಸಂಖ್ಯೆ 12617ರಲ್ಲಿ ರಾತ್ರಿ 9.30ರ ಸುಮಾರಿಗೆ ಪ್ರಯಾಣಿಸುತ್ತಿದ್ದರು. ಪತ್ನಿ ಸೀಟ್ ಸಂಖ್ಯೆ 7ರ ಬಳಿ ಕುಳಿತು ಕುಟುಂಬದೊಂದಿಗೆ ಪ್ರಯಾಣಿಸುತ್ತಿದ್ದ ವೇಳೆ ಗಾಢ ನಿದ್ರೆಗೆ ಜಾರಿದ್ದರು.
ರೈಲು ನಿಲ್ದಾಣವೊಂದರಲ್ಲಿ ನಿಂತಾಗ ಪ್ರಯಾಣಿಕರು ಇಳಿಯಲು ಹಾಗೂ ಹತ್ತಲು ಓಡಾಡುತ್ತಿದ್ದ ಸಂದರ್ಭದಲ್ಲಿ ಯಾರೋ ಪಿರ್ಯಾದಿದಾರರ ಪತ್ನಿಯ ಚೂಡಿದಾರ್ ಜೇಬನ್ನು ಮುಟ್ಟಿರುವುದಾಗಿ ತಿಳಿದುಬಂದಿದೆ. ಕೆಲವೇ ನಿಮಿಷಗಳ ಬಳಿಕ ಎಚ್ಚರಗೊಂಡು ಪರಿಶೀಲಿಸಿದಾಗ ಜೇಬಿನಲ್ಲಿದ್ದ ಸುಮಾರು 12 ಗ್ರಾಂ ತೂಕದ ಚಿನ್ನದ ಸರ ಕಾಣೆಯಾಗಿರುವುದು ಗಮನಕ್ಕೆ ಬಂದಿದೆ.
ಅಷ್ಟರಲ್ಲಿ ರೈಲು ಕುಂದಾಪುರ ನಿಲ್ದಾಣವನ್ನು ದಾಟಿ ಮುಂದೆ ಸಾಗಿತ್ತು. ಈ ಕುರಿತು ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 49/2026, ಕಲಂ 305(C) BNS ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.






