ಕಾಪು: ಕೆಲಸಕ್ಕೆ ತೆರಳದೆ ಮನೆಯಲ್ಲಿಉಳಿದಿದ್ದ ವ್ಯಕ್ತಿಯೊಬ್ಬರು ನಾಪತ್ತೆಯಾದ ಬಳಿಕ, ಪಕ್ಕದ ಮನೆಯ ಬಳಿಯ ಬಾವಿಯಲ್ಲಿ ಮೃತದೇಹವಾಗಿ ಪತ್ತೆಯಾದ ಘಟನೆ ಏಣಗುಡ್ಡೆ ಗ್ರಾಮದಲ್ಲಿ ನಡೆದಿದೆ.
ಏಣಗುಡ್ಡೆ ಗ್ರಾಮದ ಪದ್ಮನಾಭ ಆರ್. ಕೋಟ್ಯಾನ್ (57) ಅವರು ಸೆ.11ರಂದು ಕೆಲಸಕ್ಕೆ ತೆರಳದೆ ಮನೆಯಲ್ಲಿಯೇ ಇದ್ದರು. ಅವರ ಅಣ್ಣ ಶ್ರೀನಿವಾಸ ಕೋಟ್ಯಾನ್ (59) ಅವರು ಸಂಜೆ 6.30ರ ಸುಮಾರಿಗೆ ಮನೆಗೆ ಬಂದಾಗ, ಪದ್ಮನಾಭ ಅವರು ಹೊರಗಡೆ ಹೋಗಿರುವುದಾಗಿ ಮನೆಯವರು ತಿಳಿಸಿದ್ದಾರೆ.
ರಾತ್ರಿ 8.30ರ ವೇಳೆಯಾದರೂ ಪದ್ಮನಾಭ ಮನೆಗೆ ಮರಳದ ಹಿನ್ನೆಲೆಯಲ್ಲಿ, ಅವರು ಸಾಮಾನ್ಯವಾಗಿ ತೆರಳುತ್ತಿದ್ದ ಅಕ್ಕಪಕ್ಕದ ಮನೆಗಳಲ್ಲಿ ವಿಚಾರಿಸಿದರೂ ಯಾವುದೇ ಮಾಹಿತಿ ದೊರೆಯಲಿಲ್ಲ. ಬಳಿಕ ಅವರ ಮೊಬೈಲ್ಗೆ ಕರೆ ಮಾಡಲು ಮುಂದಾದಾಗ ಮೊಬೈಲ್ ಮನೆಯಲ್ಲೇ ಇರುವುದು ಪತ್ತೆಯಾಗಿದೆ. ಕುಟುಂಬಸ್ಥರು, ಸಂಬಂಧಿಕರು ಹಾಗೂ ನೆರೆಹೊರೆಯವರಲ್ಲಿ ವಿಚಾರಿಸಿದರೂ ಯಾವುದೇ ಸುಳಿವು ಸಿಕ್ಕಿರಲಿಲ್ಲ.
ಈ ಕುರಿತು ಕಾಪು ಪೊಲೀಸ್ ಠಾಣೆಯಲ್ಲಿ ಕಾಣೆಯಾದ ಪ್ರಕರಣ ಸಂಖ್ಯೆ 110/2026, ಕಲಂ 00MP ಅಡಿಯಲ್ಲಿ ಪ್ರಕರಣ ದಾಖಲಾಗಿತ್ತು.
ನಂತರ ಹುಡುಕಾಟ ನಡೆಸಿದ ವೇಳೆ ಸೆ.12ರಂದು ಸಂಜೆ 6 ಗಂಟೆಗೆ ಪಕ್ಕದ ಮನೆಯ ಬಳಿಯಿರುವ ಬಾವಿಯಲ್ಲಿ ಪದ್ಮನಾಭ ಆರ್. ಕೋಟ್ಯಾನ್ ಅವರ ಮೃತದೇಹ ಪತ್ತೆಯಾಗಿದೆ.
ಈ ಕುರಿತು ಕಾಪು ಪೊಲೀಸ್ ಠಾಣೆಯಲ್ಲಿ ಯುಡಿಆರ್ ಸಂಖ್ಯೆ 27/2026, ಕಲಂ 194 BNSS ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.







