ಉಡುಪಿ: ಬ್ರಹ್ಮಾವರ ತಾಲೂಕಿನ ಉಪ್ಪೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೊಳಲಗಿರಿ–ಮಣಿಪಾಲ ಸಂಪರ್ಕಿಸುವ ಪ್ರಮುಖ ರಸ್ತೆಯು ಹಲವು ಸಮಸ್ಯೆಗಳಿಂದಾಗಿ ವಾಹನ ಸವಾರರು ಹಾಗೂ ಸಾರ್ವಜನಿಕರಿಗೆ ಅಪಾಯಕಾರಿಯಾಗಿ ಪರಿಣಮಿಸಿದೆ.
ಪರಂಪಳ್ಳಿ–ಶೀಮ್ರಾ ಸೇತುವೆ ಸಮೀಪದ ರಸ್ತೆಯ ಸೇತುವೆ ಬುಡದಲ್ಲಿ ಸುಮಾರು 4–5 ಬೃಹತ್ ಗಾತ್ರದ ಹೊಂಡಗಳು ನಿರ್ಮಾಣವಾಗಿದ್ದು, ಕೆಲವು ಹೊಂಡಗಳು ಸುಮಾರು ಮೂರು ಅಡಿ ಆಳ ಹಾಗೂ ಐದಾರು ಅಡಿ ಅಗಲ ಹೊಂದಿವೆ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಈ ಹೊಂಡಗಳಿಂದಾಗಿ ದ್ವಿಚಕ್ರ ವಾಹನ ಸವಾರರು, ಮಹಿಳೆಯರು, ವಿದ್ಯಾರ್ಥಿಗಳು ಹಾಗೂ ಕೆಎಂಸಿ ಆಸ್ಪತ್ರೆಗೆ ತೆರಳುವ ರೋಗಿಗಳು ಮತ್ತು ಉದ್ಯೋಗಿಗಳು ತೊಂದರೆ ಅನುಭವಿಸುತ್ತಿದ್ದಾರೆ.
ಇದರೊಂದಿಗೆ ರಸ್ತೆಯ ಎರಡೂ ಬದಿಗಳಲ್ಲಿ ಪೊದೆಗಳು ಬೆಳೆದು ರಾಶಿಯಂತಾಗಿದ್ದು, ವಾಹನ ಸವಾರರಿಗೆ ರಸ್ತೆ ಸರಿಯಾಗಿ ಕಾಣದ ಪರಿಸ್ಥಿತಿ ನಿರ್ಮಾಣವಾಗಿದೆ. ಸೇತುವೆಯ ಅಪಾಯಕಾರಿ ತಿರುವಿನಲ್ಲಿಯೂ ನಿರಂತರವಾಗಿ ಅಪಘಾತಗಳು ಸಂಭವಿಸುತ್ತಿವೆ ಎಂದು ಸಾರ್ವಜನಿಕರು ತಿಳಿಸಿದ್ದಾರೆ.
ಪರಂಪಳ್ಳಿ–ಶೀಮ್ರಾ ಸೇತುವೆ ಮೇಲಿರುವ ಬೀದಿ ದೀಪಗಳಿದ್ದರೂ ಸಮರ್ಪಕವಾಗಿ ಬೆಳಗದಿರುವುದರಿಂದ ರಾತ್ರಿ ವೇಳೆ ಸಮಸ್ಯೆ ಮತ್ತಷ್ಟು ಗಂಭೀರವಾಗುತ್ತಿದೆ. ರಸ್ತೆ ಬದಿಯ ಪೊದೆಗಳು, ಅಪಾಯಕಾರಿ ಮರಗಳು ಹಾಗೂ ಬೃಹತ್ ಹೊಂಡಗಳನ್ನು ಕೂಡಲೇ ತೆರವುಗೊಳಿಸಿ, ರಸ್ತೆಗೆ ಶಾಶ್ವತ ಡಾಮರೀಕರಣ ಮಾಡುವಂತೆ ಸಾರ್ವಜನಿಕರು ಆಗ್ರಹಿಸಿದ್ದಾರೆ.
ಈ ಹಿಂದೆ ಸಾಮಾಜಿಕ ಕಾರ್ಯಕರ್ತ ಸತೀಶ್ ಪೂಜಾರಿ ಕೀಳಂಜೆ ಅವರ ಮನವಿಯ ಮೇರೆಗೆ ಉಡುಪಿ ಶಾಸಕ ಯಶ್ಪಾಲ್ ಸುವರ್ಣ ಹಾಗೂ ಜಿಲ್ಲಾಡಳಿತ ಮತ್ತು ಜಿಲ್ಲಾ ಪಂಚಾಯಿತಿ ಅಧಿಕಾರಿಗಳು ಸ್ಪಂದಿಸಿ, ಕೊಳಲಗಿರಿ ಕ್ಯಾಶ್ಯೂ ಫ್ಯಾಕ್ಟರಿಯಿಂದ ಪರಾರಿ ಬೊಬ್ಬರ್ಯ ದೇವಸ್ಥಾನದವರೆಗೆ ರಸ್ತೆ ಅಗಲೀಕರಣ ಮಾಡಿ ಜಲ್ಲಿಕಲ್ಲು ಹಾಕುವ ಕಾಮಗಾರಿ ಕೈಗೊಂಡಿದ್ದರು. ಇದೀಗ ಈ ರಸ್ತೆಗೆ ಶಾಶ್ವತವಾಗಿ ಡಾಮರೀಕರಣ ಮಾಡಬೇಕಾಗಿದೆ ಎಂದು ಅವರು ತಿಳಿಸಿದ್ದಾರೆ.
ಮುಂದಿನ ದಿನಗಳಲ್ಲಿ ಈ ರಸ್ತೆಯ ಅಭಿವೃದ್ಧಿಗಾಗಿ ಸುಮಾರು ₹3 ಕೋಟಿ ಅನುದಾನವನ್ನು ಶಾಸಕರು ಮೀಸಲಿಟ್ಟಿದ್ದಾರೆ ಎಂದು ಮಾಹಿತಿ ನೀಡಿರುವ ಸತೀಶ್ ಪೂಜಾರಿ, ಕಾಮಗಾರಿಯನ್ನು ಶೀಘ್ರವಾಗಿ ಕೈಗೆತ್ತಿಕೊಂಡು ಸಾರ್ವಜನಿಕರ ಸುರಕ್ಷತೆಗೆ ಆದ್ಯತೆ ನೀಡಬೇಕು ಎಂದು ಆಗ್ರಹಿಸಿದ್ದಾರೆ.
ಸಾರ್ವಜನಿಕರು, ಮಹಿಳಾ ವಾಹನ ಸವಾರರು, ಕೆಎಂಸಿ ಉದ್ಯೋಗಿಗಳು ಹಾಗೂ ರೋಗಿಗಳು ಮತ್ತು ವಿದ್ಯಾರ್ಥಿಗಳ ಸುರಕ್ಷತೆಯ ದೃಷ್ಟಿಯಿಂದ ಸಂಬಂಧಪಟ್ಟ ಗ್ರಾಮ ಪಂಚಾಯಿತಿ, ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಕೂಡಲೇ ಎಚ್ಚೆತ್ತುಕೊಂಡು ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸಬೇಕು ಎಂದು ಸಾಮಾಜಿಕ ಕಾರ್ಯಕರ್ತ ಸತೀಶ್ ಪೂಜಾರಿ ಕೀಳಂಜೆ ಒತ್ತಾಯಿಸಿದ್ದಾರೆ.







