ಉಡುಪಿ : ಯಕ್ಷಗಾನ ಕಲೆ ಕೇವಲ ಮನೋರಂಜನೆಗೆ ಮಾತ್ರವಲ್ಲ, ಅದರಲ್ಲಿ ಜೀವನ ಪಾಠವಿದೆ. ಹೀಗಾಗಿ ಕಲೆಯ ಪೋಷಣೆ ನಮ್ಮೆಲ್ಲರ ಕರ್ತವ್ಯವಾಗಬೇಕು ಎಂದು ಪರ್ಯಾಯ ಶಿರೂರು ಮಠಾಧೀಶ ಶ್ರೀ ವೇದವರ್ಧನ ತೀರ್ಥರು ಹೇಳಿದರು.
ಅವರು ಮಂಗಳವಾರ ಉಡುಪಿ ಶ್ರೀ ಕೃಷ್ಣ ಮಠದ ರಾಜಾಂಗಣದಲ್ಲಿ ಶ್ರೀಕೃಷ್ಣ ಮಠ, ಪರ್ಯಾಯ ಶಿರೂರು ಮಠದ ಆಶ್ರಯದಲ್ಲಿ ತಲ್ಲೂರು ಫ್ಯಾಮಿಲಿ ಟ್ರಸ್ಟ್ ಉಡುಪಿ ಹಾಗೂ ರಸಿಕ ರತ್ನ ವಿಟ್ಲ ಜೋಶಿ ಪ್ರತಿಷ್ಠಾನ ಪರ್ಕಳ ಇವರ ಸಹಕಾರದಲ್ಲಿ ಹಮ್ಮಿಕೊಂಡ ಪರ್ಕಳ ಶ್ರೀ ಮಿತ್ರ ಯಕ್ಷಗಾನ ಮಂಡಳಿ ಸರಳೆಬೆಟ್ಟು ಮಣಿಪಾಲ ಇದರ 44ನೇ ವಾರ್ಷಿಕೋತ್ಸವ ಹಾಗೂ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದರು.
ಸಮಾಜದ ಸಾಧಕರನ್ನು ಗುರುತಿಸಿ ಸನ್ಮಾನ ಮಾಡಬೇಕು. ಇದು ಅನ್ಯರಿಗೆ ಪ್ರೇರಣೆಯಾಗುತ್ತದೆ. ಕಲೆಯ ರಕ್ಷಣೆಯ ಜೊತೆಗೆ ಕಲಾವಿದರ ಬೆಳವಣಿಗೆಗೂ ಕೊಡುಗೆ ನೀಡುತ್ತಿರುವ ಶ್ರೀ ಮಿತ್ರ ಯಕ್ಷಗಾನ ಮಂಡಳಿ ಅಭಿನಂದನಾರ್ಹ ಎಂದು ಶ್ರೀಗಳು ತಿಳಿಸಿದರು.
ಅಧ್ಯಕ್ಷತೆಯನ್ನು ವಹಿಸಿದ್ದ ಕರ್ನಾಟಕ ಯಕ್ಷಗಾನ ಅಕಾಡೆಮಿ ಅಧ್ಯಕ್ಷ ಡಾ. ತಲ್ಲೂರು ಶಿವರಾಮ ಶೆಟ್ಟಿ ಅವರು ಮಾತನಾಡಿ, ಯಕ್ಷಗಾನ ಕಲೆ ಇಂದು ವಿಶ್ವ ವ್ಯಾಪಿಯಾಗಲು ನಿಸ್ವಾರ್ಥ ಯಕ್ಷಗಾನ ಕಲಾ ಪ್ರೇಮಿಗಳ ಸಹಕಾರವೇ ಕಾರಣವಾಗಿದೆ. ವೈದ್ಯರು, ಶಿಕ್ಷಕರು, ಇಂಜಿನಿಯರ್ ಗಳು ಸೇರಿದಂತೆ ಸುಶಿಕ್ಷಿತ ಮಂದಿ ಯಕ್ಷಗಾನ ಕಲಿತು ಈ ಕಲೆಯ ಗೌರವವನ್ನು ಹೆಚ್ಚಿಸಿದ್ದಾರೆ ಎಂದರು.
ಕಾರ್ಯಕ್ರಮದಲ್ಲಿ ಖ್ಯಾತ ಚಿಂತಕ, ಕಲಾಪೋಷಕ ಬೈಕಾಡಿ ಕೃಷ್ಣಯ್ಯ ಸ್ಮಾರಕ ‘ಯಕ್ಷಶ್ರೀ’ ಪ್ರಶಸ್ತಿಯನ್ನು ತಬಲ ವಿದ್ವಾಂಸ ವಿದ್ವಾನ್ ಮಾಧವ ಆಚಾರ್ಯ ಉಡುಪಿ, ಭಾಗವತ ಗುರು ಅಲೆವೂರು ಮಾಧವ ಶೆಣೈ ಸ್ಮಾರಕ ‘ಯಕ್ಷಮಿತ್ರಶ್ರೀ’ ಪ್ರಶಸ್ತಿಯನ್ನು ಕಲಾವಿದ ಗಣೇಶ್ ಶೆಣೈ ಸಾಲಿಗ್ರಾಮ, ಖ್ಯಾತ ಭಾಗವತ ಗುರು ಗೋರ್ಪಾಡಿ ವಿಠಲ್ ಪಾಟೀಲ್ ಸ್ಮಾರಕ ‘ಯಕ್ಷಕಲಾಶ್ರೀ’ ಪ್ರಶಸ್ತಿ ಯನ್ನು ಕಲಾವಿದ ಕೃಷ್ಣಯ್ಯ ದೇವಾಡಿಗ ಉಪ್ಪುಂದ, ಕಪ್ಪೆಟ್ಟು ಮೇಲ್ಮನೆ ಕೆ. ನಾರಾಯಣ ಶೆಟ್ಟಿ ಸ್ಮಾರಕ ‘ಮಿತ್ರಕಲಾಶ್ರೀ’ ಪ್ರಶಸ್ತಿಯನ್ನು ಹವ್ಯಾಸಿ ಯಕ್ಷಗಾನ ಕಲಾವಿದ ವೆಂಕಟೇಶ್ವರ ಹಾರಾಡಿ, ಪರ್ಕಳ ಮಂಜುನಾಥ ಶೆಣೈ ಸ್ಮಾರಕ ‘ಮಿತ್ರಶ್ರೀ’ ಪ್ರಶಸ್ತಿಯನ್ನು, ಕೊಳಲು ವಾದಕ ಸುಂದರ ಪೂಜಾರಿ ಉಡುಪಿ, ಹೂರ್ಲಾಳಿ ನಾಗೇಶ ವಾಮನ ಶಾನುಭಾಗ್ ಸ್ಮಾರಕ ‘ಕಲಾಶ್ರೀ’ ಪ್ರಶಸ್ತಿಯನ್ನು ದೇವಕಿ ಕೋಟ್ಯಾನ್ ಸರಳೇಬೆಟ್ಟು ಕಲಾಪೋಷಕ ಸರಳೇಬೆಟ್ಟು ಪಾಂಡುರಂಗ ಸಾಮಂತ್ ಸ್ಮಾರಕ ‘ಮಿತ್ರಯಕ್ಷಶ್ರೀ ‘ ಪ್ರಶಸ್ತಿ ಯನ್ನು ಗುರು ವೈ. ಕುಮಾರಸ್ವಾಮಿ ಕಬ್ಬಿನಾಲೆ, ಜಡ್ಡುಮನೆ ರಂಗಪ್ಪ ಪ್ರಭು ಪೆರನಂಕಿಲ ಸ್ಮಾರಕ ‘ಶ್ರೀಮಿತ್ರ’ ಪ್ರಶಸ್ತಿ ಯನ್ನು ಪತ್ರಕರ್ತ ಎಚ್. ಜ್ಞಾನದೇವ ಮಲ್ಯ ಕುಂಜಿಬೆಟ್ಟು, ಕಲಾಪೋಷಕಿ ತೋನ್ಸೆ ಗೀತಾ ಮಂಜುನಾಥ ಪೈ ಸ್ಮಾರಕ “ಶ್ರೀಮಿತ್ರ ವೈಭವ’ ಪ್ರಶಸ್ತಿ ಯನ್ನು ನೀತಾ ಪ್ರಭು ಅಂಬಲಪಾಡಿ, ಚಿಂತಕ ಎಂ.ವಿ. ಪಡಿಯಾರ್ ಸ್ಮಾರಕ ಕಲಾ ಸಾಧಕ ಪುರಸ್ಕಾರವನ್ನು ರಂಗ ಕಲಾವಿದೆ ಶಿಲ್ಪಾ ಜೋಶಿ ಪರ್ಕಳ,ಮೋಹನ್ ಭಟ್ ಮೆಮೋರಿಯಲ್ ಯಕ್ಷ ವೈಭವ ಪ್ರಶಸ್ತಿಯನ್ನು ಸಂಗೀತ ಕಲಾವಿದೆ ಯುಕ್ತಾವತಿ ಆರ್. ಭಂಡಾರಿ ಬ್ರಹ್ಮಗಿರಿ ಹಾಗೂ ಕಲಾಪೋಷಕ ಮುಲ್ಕಿ ಸದಾಶಿವ ಕಾಮತ್ ಯಕ್ಷಕಲಾ ಪ್ರಶಸ್ತಿ ಯನ್ನು ಹವ್ಯಾಸಿ ಯಕ್ಷಗಾನ ಕಲಾವಿದ ಅರುಣ್ ಉಡುಪಿ ಅವರಿಗೆ ಪ್ರದಾನ ಮಾಡಲಾಯಿತು.
ಶಿರೂರು ಮಠದ ವ್ಯವಸ್ಥಾಪಕ ವಾಸುದೇವ ಆಚಾರ್ಯ, ಹೆರ್ಗ ವ್ಯವಸಾಯ ಸಹಕಾರಿ ಸಂಘದ ಅಧ್ಯಕ್ಷ ಹೆರ್ಗ ದಿನಕರ ಶೆಟ್ಟಿ, ನಿವೃತ್ತ ಎಜಿಎಂ ಎಸ್. ಅನಂತ ನಾಯ್ಕ್ , ಸಂಸ್ಥೆಯ ಅಧ್ಯಕ್ಷ ಎಚ್. ಪ್ರಕಾಶ್ ಶಾನುಭಾಗ್, ಸದಾನಂದ ಪ್ರಭು ಪೆರ್ಣoಕಿಲ, ಶ್ರುತಿ ಶೆಣೈ, ನಾರಾಯಣ ಬಿ.ಕೆ., ಸಂಗೀತ ವಿದ್ವಾನ್ ಪಾಡಿಗಾರು ಲಕ್ಷ್ಮೀನಾರಾಯಣ ಉಪಾಧ್ಯಾಯ ಮೊದಲಾದವರು ಉಪಸ್ಥಿತರಿದ್ದರು.
ಪ್ರೊ.ಎಸ್.ವಿ. ಉದಯ ಕುಮಾರ್ ಶೆಟ್ಟಿ ಅಭಿನಂದನಾ ನುಡಿಗನ್ನಡಿದರು.
ಬಾಲಕೃಷ್ಣ ಪ್ರಭು ಕಾರ್ಯಕ್ರಮ ನಿರೂಪಿಸಿದರು. ಭುವನಪ್ರಸಾದ್ ಹೆಗ್ಡೆ ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ಶೈಲೇಂದ್ರ ಶೆಟ್ಟಿ ವಂದಿಸಿದರು. ಸಭಾ ಕಾರ್ಯಕ್ರಮದ ಬಳಿಕ ಸಂಸ್ಥೆಯ ಬಾಲ ಕಲಾವಿದರಿಂದ ಯಕ್ಷಗಾನ ಪ್ರದರ್ಶನ ಕಂಸ ದಿಗ್ವಂಜಯ ಜಯ ಕೃಷ್ಣ ಲೀಲೆ, ಕಂಸವಧೆ ಪ್ರದರ್ಶನ ಗೊಂಡಿತು.







