ಸಾಣೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಮುರತಂಗಡಿ ಪರಿಸರದಲ್ಲಿ 800 ಮೀಟರ್ ಸರ್ವಿಸ್ ರಸ್ತೆ ಕಾಮಗಾರಿ ಕಳೆದ ಎರಡು ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದು, ವ್ಯಾಪಕ ಪ್ರತಿಭಟನೆ ಮತ್ತು ತೀವ್ರ ಜನಾಗ್ರಹದ ಕಳೆದ 3 ತಿಂಗಳ ಹಿಂದೆ ಸರ್ವಿಸ್ ರಸ್ತೆಗೆ ಡಾಮರೀಕರಣ ಮಾಡಿದ್ದರು.
ಇದೀಗ ಸರ್ವಿಸ್ ರಸ್ತೆಯ ಮಧ್ಯ ಭಾಗದಲ್ಲಿ ಸುಮಾರು 50 ಮೀಟರ್ ಉದ್ದಕ್ಕೆ ಬಿರುಕು ಬಿಟ್ಟಿದ್ದು, ದಿನಂಪ್ರತಿ ಬ್ಯಾಂಕ್ ಆಫ್ ಬರೋಡ ಸಾಣೂರು ಶಾಖೆ, ಹತ್ತಿರದ ಸಾಣೂರು ವ್ಯವಸಾಯ ಸೇವಾ ಸಹಕಾರಿ ಸಂಘ ಮತ್ತು ಸರಕಾರಿ ಪ್ರಾಥಮಿಕ ಶಾಲೆ ಹಾಗೂ ಮುದ್ದಣ್ಣ ನಗರ ಪರಿಸರಕ್ಕೆ ಓಡಾಡುವ ಜನತೆ, ವಾಹನ ಚಾಲಕರು ರಸ್ತೆ ಕುಸಿಯುವ ಆತಂಕದಲ್ಲಿ ಸಂಚರಿಸುತ್ತಿದ್ದಾರೆ.
ಬ್ಯಾಂಕ್ ಆಫ್ ಬರೋಡ ಕಟ್ಟಡದ ಪಕ್ಕದ ಜಮೀನಿನಲ್ಲಿ ಸರ್ವಿಸ್ ರಸ್ತೆಯ ಬದಿಯಲ್ಲಿಯೇ ತೆರೆದ ಬಾವಿ ಇದ್ದು, ಸುಮಾರು 6 ಅಡಿ ಎತ್ತರಕ್ಕೆ ಮಣ್ಣು ಸುರಿದು ರಸ್ತೆ ನಿರ್ಮಾಣ ಮಾಡಿ ಬದಿ ಕಟ್ಟದೆ ಇರುವುದರಿಂದ , ಮುಂದೆ ಬರಲಿರುವ ಭಾರಿ ಮಳೆಗೆ ರಸ್ತೆ ಕುಸಿದು ದೊಡ್ಡ ಅಪಾಯವಾಗುವ ಸಂಭವವಿದೆ.
ಈ ವರ್ಷ ಜೂನ್ ತಿಂಗಳಿನಲ್ಲಿ ಹೆಚ್ಚೇನು ಮಳೆ ಸುರಿಯದೆ, ಅಷ್ಟೊಂದು ಅಪಾಯ ಸಂಭವಿಸಿಲ್ಲ.
ಆದರೆ ಮುಂದಿನ ದಿನಗಳಲ್ಲಿ ಸುರಿಯುವ ಭಾರಿ ಮಳೆಗೆ ಖಂಡಿತವಾಗಿಯೂ ರಸ್ತೆಯ ಬದಿ ಕುಸಿದು ಇಡೀ ಸರ್ವಿಸ್ ರಸ್ತೆ ಧರಾಶಾಯಿಯಾಗುವ ಆತಂಕದಲ್ಲಿ ಜನತೆ ಪ್ರತಿಭಟನೆಗೆ ಸಿದ್ದರಾಗುತ್ತಿದ್ದಾರೆ.
ಮಳೆ ಕಡಿಮೆ ಇರುವಾಗಲೇ ಕೂಡಲೇ ಎಚ್ಚೆತ್ತು ರಾಷ್ಟ್ರೀಯ ಹೆದ್ದಾರಿ ಇಲಾಖೆ ಮತ್ತು ಗುತ್ತಿಗೆದಾರರು ರಸ್ತೆ ಸರಿಪಡಿಸದಿದ್ದರೆ ಮುಂದೆ ಆಗುವ ಅನಾಹುತಕ್ಕೆ ರಾಷ್ಟ್ರೀಯ ಹೆದ್ದಾರಿ ಇಲಾಖೆ ಹೊಣೆಗಾರರಾಗುತ್ತಾರೆ ಎಂದು ಸಾಣೂರು ರಾಷ್ಟ್ರೀಯ ಹೆದ್ದಾರಿ ಹೋರಾಟ ಸಮಿತಿಯ ಪ್ರಮುಖರಾದ ಸಾಣೂರು ನರಸಿಂಹ ಕಾಮತ್ ರವರು ಮಾಧ್ಯಮದ ಮೂಲಕ ಎಚ್ಚರಿಸಿರುತ್ತಾರೆ.








