ರಾಜ್ಯ ಸರ್ಕಾರದ ಗೃಹ ಲಕ್ಷ್ಮೀ ಯೋಜನೆಯಲ್ಲಿ ಕೋಟ್ಯಾಂತರ ರೂಪಾಯಿ ಭಾರೀ ಅಕ್ರಮ ನಡೆದಿರುವ ಬಗ್ಗೆ ರಾಜ್ಯ ಸರ್ಕಾರ ನೇಮಿಸಿದ ಸಿ ಎ ಜಿ ವರದಿಯಲ್ಲಿ ಬಹಿರಂಗವಾಗಿದ್ದು, ಯೋಜನೆಯಲ್ಲಿ ಅಕ್ರಮ ತಪ್ಪಿಸಲು ರಾಜ್ಯ, ಜಿಲ್ಲೆ ಹಾಗೂ ತಾಲೂಕು ಮಟ್ಟದ ಗ್ಯಾರಂಟಿ ಅನುಷ್ಠಾನ ಸಮಿತಿಗಳು ಸಂಪೂರ್ಣ ವಿಫಲವಾಗಿದ್ದು, ಉಡುಪಿ ತಾಲೂಕು ಗ್ಯಾರಂಟಿ ಅಧ್ಯಕ್ಷ ರಮೇಶ್ ಕಾಂಚನ್ ರಿಗೆ ಸ್ವಲ್ಪವಾದರೂ ನೈತಿಕತೆ ಇದ್ದರೆ ರಾಜೀನಾಮೆ ನೀಡಲಿ ಎಂದು ಉಡುಪಿ ನಗರ ಬಿಜೆಪಿ ಅಧ್ಯಕ್ಷ ದಿನೇಶ್ ಅಮೀನ್ ಆಗ್ರಹಿಸಿದ್ದಾರೆ.
ಗೃಹ ಲಕ್ಷ್ಮೀ ಯೋಜನೆಯಲ್ಲಿ ಸುಮಾರು ರೂ. 225 ಕೋಟಿಗಳಷ್ಟು ಅವ್ಯವಹಾರ ನಡೆದಿದೆ ಎಂದು ಸಿಎಜಿ (CAG) ವರದಿಯಲ್ಲಿ ಬಹಿರಂಗವಾಗಿದೆ. ಬ್ಯಾಂಕ್ ಖಾತೆಯೇ ಇಲ್ಲದ 23,262 ಜನರಿಗೆ ಬರೋಬ್ಬರಿ 46.52 ಕೋಟಿ ರೂ. ಪಾವತಿಯಾಗಿರುವುದು ಮತ್ತು 19,020 ಜನರಿಗೆ ಒಂದೇ ಬ್ಯಾಂಕ್ ಖಾತೆಗೆ ಹಣ ವರ್ಗಾವಣೆಯಾಗಿರುವುದನ್ನು ಸ್ವತಃ ಸಿಎಜಿ (CAG) ವರದಿಯಲ್ಲಿ ಬಹಿರಂಗವಾಗಿದ್ದು ಭಾರೀ ಅಕ್ರಮ ಸಾಬೀತಾಗಿದೆ.
ಕಾಂಗ್ರೆಸ್ನ ನಿರಾಶ್ರಿತ ನಾಯಕರಿಗೆ ಪದವಿ ಕೊಡಲು ಗ್ಯಾರಂಟಿ ಸಮಿತಿ ರಚಿಸಿ ಅದಕ್ಕೆ ನೂರಾರು ಕೋಟಿ ರೂ. ಖರ್ಚು ಮಾಡಿ ಲಕ್ಷಾಂತರ ರುಪಾಯಿ ಸಂಬಳ, ಕಚೇರಿಯನ್ನು ನೀಡಿದ್ದರೂ
ಈ ಸಮಿತಿ ಅಕ್ರಮ ತಡೆದಿಲ್ಲ. ಗ್ಯಾರಂಟಿ ಅನುಷ್ಠಾನ ಸಮಿತಿ ಕಾಂಗ್ರೆಸ್ ಅತೃಪ್ತರ ಜೇಬು ತುಂಬಿಸುವ ಗಂಜಿ ಕೇಂದ್ರವಾಗಿದೆ.
ಉಡುಪಿ ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ರಮೇಶ್ ಕಾಂಚನ್ ಹಾಗೂ ಸದಸ್ಯರು ಕಚೇರಿಗೆ ದೊಡ್ಡ ಬೋರ್ಡ್ ಹಾಕಿ ಕೊಂಡು, ಬಿಟ್ಟಿ ಸಂಬಳ ಪಡೆದು ಕೇವಲ ಪತ್ರಿಕಾ ಹೇಳಿಕೆಗೆ ಸೀಮಿತರಾಗಿ
ಯೋಜನೆಯನ್ನು ಪರಿಣಾಮಕಾರಿಯಾಗಿ ಅನುಷ್ಠಾನ ಮಾಡಲು ವಿಫಲರಾಗಿದ್ದಾರೆ. ಕೇವಲ ಸರ್ಕಾರಿ ಕಾರ್ಯಕ್ರಮದ ಕಾರ್ಯಕ್ರಮಗಳ ಶಿಷ್ಟಾಚಾರ ಪಟ್ಟಿಯಂತೆ ವೇದಿಕೆಯಲ್ಲಿ ಕುಳಿತು ಬಿಟ್ಟಿ ಭಾಷಣಕ್ಕೆ ಸೀಮಿತರಾಗಿ ಜನತೆಯ ಮುಂದೆ ನಗೆಪಾಟಲಿಗೆ ಗುರಿಯಾಗಿದ್ದಾರೆ.
ಸದಾ ಕಾಲ ಪ್ರಧಾನಿ ನರೇಂದ್ರ ಮೋದಿಯವರನ್ನು ಟೀಕಿಸುವ ಚಟ ಹೊಂದಿರುವ ರಮೇಶ್ ಕಾಂಚನ್ ರಿಗೆ ತಮ್ಮದೇ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯನ್ನು ನೆಟ್ಟಗೆ ಅರ್ಹ ಜನತೆಗೆ ತಲುಪಿಸಲು ಸಾಧ್ಯವಾಗಿಲ್ಲ.
ಕಾಂಗ್ರೆಸ್ ನಾಯಕರಿಗೆ ನಿಜವಾಗಿಯೂ ನೈತಿಕತೆ, ಬದ್ಧತೆ ಇದ್ದರೆ ಈ ಅಕ್ರಮದ ಬಗ್ಗೆ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಿ ತೊಲಗಲಿ ಎಂದು ದಿನೇಶ್ ಅಮೀನ್ ಆಗ್ರಹಿಸಿದ್ದಾರೆ.






