ಕಾರ್ಕಳ: ಮಾನವನಿಗೆ ಉತ್ತಮ ಆರೋಗ್ಯವೇ ನಿಜವಾದ ಸಂಪತ್ತು. ನಮ್ಮ ಪ್ರಾಚೀನ ಆಹಾರ ಪದ್ಧತಿ, ಮಿತಾಹಾರ, ನಿಯಮಿತ ವ್ಯಾಯಾಮ, ಯೋಗ ಹಾಗೂ ಸತ್ಚಿಂತನೆಗಳನ್ನು ಜೀವನದಲ್ಲಿ ಅಳವಡಿಸಿಕೊಂಡರೆ ವೃದ್ಧಾಪ್ಯದಲ್ಲಿಯೂ ಉತ್ತಮ ಆರೋಗ್ಯದಿಂದ ಬದುಕಬಹುದು ಎಂದು ಖ್ಯಾತ ವೈದ್ಯ ಹಾಗೂ ಪರಿಸರ ತಜ್ಞ ಡಾ. ಸತ್ಯನಾರಾಯಣ ಭಟ್ ಹೇಳಿದರು.
ಕಾರ್ಕಳ ತಾಲೂಕು ಹಿರಿಯ ನಾಗರಿಕರ ಸಂಘದ ಆಶ್ರಯದಲ್ಲಿ ನಡೆದ ಮಾಹಿತಿ ಕಾರ್ಯಕ್ರಮದಲ್ಲಿ ಅವರು ಆರೋಗ್ಯಕರ ಜೀವನಶೈಲಿಯ ಮಹತ್ವವನ್ನು ವಿವರಿಸಿದರು.
ಇದೇ ಸಂದರ್ಭದಲ್ಲಿ ಖ್ಯಾತ ವಕೀಲ ವಿಜೇಂದ್ರ ಕುಮಾರ್ ಮಾತನಾಡಿ, ಪ್ರತಿಯೊಬ್ಬರೂ ಕಾನೂನು ಅರಿವು ಹೊಂದಿರುವುದು ಅಗತ್ಯ. ಆಸ್ತಿ ಖರೀದಿ-ಮಾರಾಟ, ವಿಲ್ ಬರೆಯುವುದು ಸೇರಿದಂತೆ ವಿವಿಧ ಕಾನೂನು ಸಂಬಂಧಿತ ವಿಚಾರಗಳಲ್ಲಿ ಸರಿಯಾದ ಮಾಹಿತಿ ಹೊಂದಿದ್ದರೆ ಅನಗತ್ಯ ವಿವಾದಗಳಿಂದ ದೂರವಿರಬಹುದು ಎಂದು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷ ಎಂ. ಕಮಲಾಕ್ಷ ಕಾಮತ್ ವಹಿಸಿ ಸ್ವಾಗತಿಸಿದರು. ಜಯರಾಮ ಕಾಮತ್ ಪ್ರಾರ್ಥನೆ ನೆರವೇರಿಸಿದರು. ಪ್ರದೀಪ್ ನಾಯಕ ಹಾಗೂ ಕೇಶವ ನಂಬಿಯಾರ್ ಅತಿಥಿಗಳನ್ನು ಪರಿಚಯಿಸಿದರು. ಸಂಘದ ಕಾರ್ಯದರ್ಶಿ ಜಗದೀಶ ಗೋಖಲೆ ವಂದನಾರ್ಪಣೆ ಸಲ್ಲಿಸಿದರು. ಕಾರ್ಯಕ್ರಮವನ್ನು ಶೈಲಜಾ ಹೆಗಡೆ ನಿರೂಪಿಸಿದರು.







