ಶಂಕರನಾರಾಯಣ: ಬಸ್ಸಿಗೆ ಕಾಯುತ್ತಾ ಸಿಮೆಂಟ್ ಬೆಂಚ್ ಮೇಲೆ ಕುಳಿತಿದ್ದ ಮಹಿಳೆಗೆ ಕಾರೊಂದು ಡಿಕ್ಕಿ ಹೊಡೆದ ಪರಿಣಾಮ ಮಹಿಳೆ ಮೃತಪಟ್ಟ ಘಟನೆ ಶಂಕರನಾರಾಯಣದಲ್ಲಿ ನಡೆದಿದೆ.
ಮೃತರನ್ನು ತಾರೇಮರನ ಜೆಡ್ಡು ನಿವಾಸಿ ಮಂಜುಳಾ ಪೂಜಾರ್ತಿ (50) ಎಂದು ಗುರುತಿಸಲಾಗಿದೆ. ಅವರ ಅಣ್ಣ ರಘುರಾಮ ಪೂಜಾರಿ ನೀಡಿದ ದೂರಿನಂತೆ, ಮಂಜುಳಾ ಅವರು ಮೇ 23ರಂದು ಉಳ್ಳೂರಿನ ಗೇರು ಬೀಜ ಕಾರ್ಖಾನೆಯಲ್ಲಿ ಕೆಲಸ ಮುಗಿಸಿ ದೈವದ ಮನೆಯ ಪೂಜೆಯ ನಿಮಿತ್ತ ತನ್ನ ಪಾಲಿನ ಹಣವನ್ನು ನೀಡಲು ಪಿರ್ಯಾದಿದಾರರ ಮನೆಗೆ ಬಂದಿದ್ದರು.
ಬಳಿಕ ಮನೆಗೆ ತೆರಳಲು ಬಸ್ಸಿಗೆ ಕಾಯುತ್ತಾ ಸಿಮೆಂಟ್ ಬೆಂಚ್ ಮೇಲೆ ಕುಳಿತಿದ್ದ ವೇಳೆ ಸಂಜೆ ಸುಮಾರು 4 ಗಂಟೆಗೆ ಕಾರನ್ನು ಚಾಲಕ ಪ್ರಣಯ ಶೆಟ್ಟಿ ಅಂಪಾರು ಕಡೆಯಿಂದ ಶಂಕರನಾರಾಯಣ ಕಡೆಗೆ ಅತೀವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಏಕಾಏಕಿ ರಸ್ತೆಯ ಬಲಭಾಗಕ್ಕೆ ತಿರುಗಿಸಿದ್ದಾನೆ ಎನ್ನಲಾಗಿದೆ.
ಈ ವೇಳೆ ಕಾರು ಬಸ್ಸಿಗೆ ಕಾಯುತ್ತಿದ್ದ ಮಂಜುಳಾ ಅವರಿಗೆ ಡಿಕ್ಕಿ ಹೊಡೆದ ಪರಿಣಾಮ ಎಡ ಕಾಲು ಹಾಗೂ ಕುತ್ತಿಗೆ ಭಾಗಕ್ಕೆ ಗಂಭೀರ ಗಾಯಗಳಾಗಿದ್ದು, ಅವರು ಮಾತನಾಡುವ ಸ್ಥಿತಿಯಲ್ಲಿರಲಿಲ್ಲ ಎಂದು ದೂರಿನಲ್ಲಿ ತಿಳಿಸಲಾಗಿದೆ.
ತಕ್ಷಣ ಸ್ಥಳೀಯರ ಸಹಾಯದಿಂದ ಅಂಬ್ಯುಲೆನ್ಸ್ ಮೂಲಕ ಕುಂದಾಪುರ ಸರಕಾರಿ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ, ಪರೀಕ್ಷಿಸಿದ ವೈದ್ಯರು ಮಂಜುಳಾ ಅವರು ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ.
ಈ ಕುರಿತು ಶಂಕರನಾರಾಯಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.







