ಉಡುಪಿ: ಯು.ಕೆ. ದೇಶದಲ್ಲಿ ಉದ್ಯೋಗ ಕೊಡಿಸುವುದಾಗಿ ನಂಬಿಸಿ ವ್ಯಕ್ತಿಯೊಬ್ಬರಿಂದ ₹6.23 ಲಕ್ಷ ಹಣ ಪಡೆದು ವಂಚನೆ ಎಸಗಿದ ಆರೋಪದಲ್ಲಿ ನಾಲ್ವರ ವಿರುದ್ಧ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪಿರ್ಯಾದಿದಾರ ಎನ್.ಆರ್. ಪದ್ಮನಾಭ ಉಪಾಧ್ಯ, ನಿಟ್ಟೂರು, ಉಡುಪಿ ಇವರು ಉದ್ಯೋಗ ಹುಡುಕುತ್ತಿದ್ದ ವೇಳೆ 1ನೇ ಆರೋಪಿತೆ ಆಶ್ಲೆ ಕರ್ನೇಲಿಯೋ ಅವರು 2025ರ ಫೆಬ್ರವರಿ 12ರಂದು ಸಂಪರ್ಕಿಸಿ, ಯು.ಕೆ.ನಲ್ಲಿ ಹೌಸ್ ಕೀಪಿಂಗ್ ಸೂಪರ್ವೈಸರ್ ಉದ್ಯೋಗವಿದ್ದು ವ್ಯವಸ್ಥೆ ಮಾಡಿಕೊಡುವುದಾಗಿ ನಂಬಿಕೆ ಮೂಡಿಸಿದ್ದರೆಂದು ದೂರಿನಲ್ಲಿ ತಿಳಿಸಿದ್ದಾರೆ.
ಬಳಿಕ ತನ್ನ ಸಹಾಯಕಿ ಎಂದು ಪರಿಚಯಿಸಿದ 2ನೇ ಆರೋಪಿ ಸವಿತಾ ಅವರ ಮೊಬೈಲ್ ಸಂಖ್ಯೆಯನ್ನು ನೀಡಿದ್ದು, ವೀಸಾ ಪ್ರಕ್ರಿಯೆಗಾಗಿ ₹2 ಲಕ್ಷ ಪ್ರೊಸೆಸಿಂಗ್ ಶುಲ್ಕ ಪಾವತಿಸುವಂತೆ ತಿಳಿಸಿದ್ದರೆನ್ನಲಾಗಿದೆ. ಅದರಂತೆ ಪಿರ್ಯಾದಿದಾರರು 2025ರ ಮಾರ್ಚ್ 19ರಂದು 2ನೇ ಆರೋಪಿಯ ಬ್ಯಾಂಕ್ ಆಫ್ ಬರೋಡ ಖಾತೆಗೆ ₹2 ಲಕ್ಷ ಜಮಾ ಮಾಡಿದ್ದರು.
ನಂತರ 3ನೇ ಆರೋಪಿ ಪ್ರಕೃತಿ ಹಾಗೂ 4ನೇ ಆರೋಪಿ ಪ್ರಶಾಂತ್ ಅವರು ಕೂಡ ಮೆಡಿಕಲ್ ಪರೀಕ್ಷೆ, ವೀಸಾ ಸ್ಟಾಂಪಿಂಗ್ ಹಾಗೂ ಎಂಬಸಿ ಪ್ರೊಸೆಸಿಂಗ್ ಹೆಸರಿನಲ್ಲಿ ಹಂತ ಹಂತವಾಗಿ ಹಣ ಪಡೆದುಕೊಂಡಿದ್ದು, ಒಟ್ಟು ₹6,23,000 ಹಣ ಹಾಗೂ ಪಾಸ್ಪೋರ್ಟ್ ತಮ್ಮ ವಶಕ್ಕೆ ಪಡೆದಿದ್ದಾರೆ ಎಂದು ಆರೋಪಿಸಲಾಗಿದೆ.
ಆದರೆ ಬಳಿಕ ವೀಸಾ ತಿರಸ್ಕೃತವಾಗಿದೆ ಎಂದು ಹೇಳಿ ಹಣ ಹಾಗೂ ಪಾಸ್ಪೋರ್ಟ್ ವಾಪಸು ನೀಡುವುದಾಗಿ ತಿಳಿಸಿದ್ದರೂ, ನಂತರ ಆರೋಪಿತರು ಫೋನ್ ಸಂಪರ್ಕ ಕಡಿತಗೊಳಿಸಿ ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಈ ಕುರಿತು ಮಾನ್ಯ ನ್ಯಾಯಾಲಯದ ಖಾಸಗಿ ದೂರಿನ ಮೇರೆಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.







