
ಶಿರ್ವ: ಮೇ 22: ಆಲದ ಮರವನ್ನು ತುಂಡು ಮಾಡುವ ವೇಳೆ ಮರ ಹಿಂದಕ್ಕೆ ಬಂದು ತಾಗಿ ಕಾರ್ಮಿಕನೊಬ್ಬ ಗಂಭೀರವಾಗಿ ಗಾಯಗೊಂಡ ಘಟನೆ ಪಿಲಾರು ಜಾರಾಂದಾಯ ದೈವಸ್ಥಾನದ ಸಮೀಪ ನಡೆದಿದೆ.
ಲಕ್ಷ್ಮಣ (42) ಹಾಗೂ ಮೊಹಮ್ಮದ್ ಸಾದಿಕ್ ಖಾನ್ ಪಠಾನ್ ಅವರು ಮೇ 20ರಂದು ಬೆಳಿಗ್ಗೆ ಚಂದ್ರಹಾಸ ಶೆಟ್ಟಿ ಅವರಿಗೆ ಸೇರಿದ ಜಾಗದಲ್ಲಿದ್ದ ಆಲದ ಮರವನ್ನು ತುಂಡು ಮಾಡಿ ಕಟ್ಟಿಗೆ ಮಾಡುವ ಕೆಲಸಕ್ಕೆ ತೆರಳಿದ್ದರು. ಸ್ಥಳದ ಮಾಲೀಕರ ಸೂಚನೆಯಂತೆ ಇಬ್ಬರೂ ಕೆಲಸ ಆರಂಭಿಸಿದ್ದು, ಮೊಹಮ್ಮದ್ ಸಾದಿಕ್ ಮರ ಕಡಿಯುವ ಯಂತ್ರದ ಸಹಾಯದಿಂದ ಮರವನ್ನು ತುಂಡು ಮಾಡುತ್ತಿದ್ದರು ಎನ್ನಲಾಗಿದೆ.
ಬೆಳಿಗ್ಗೆ ಸುಮಾರು 9 ಗಂಟೆ ಸುಮಾರಿಗೆ ಮರ ತುಂಡಾಗುವ ವೇಳೆ ಅದರ ಒಂದು ಭಾಗ ಹಿಂದಕ್ಕೆ ಬಂದು ಮೊಹಮ್ಮದ್ ಸಾದಿಕ್ ಅವರ ಎಡಕಾಲಿಗೆ ಬಡಿದ ಪರಿಣಾಮ ಕಾಲು ಮರದ ಅಡಿಯಲ್ಲಿ ಸಿಲುಕಿಕೊಂಡಿದೆ. ಸ್ಥಳದಲ್ಲಿದ್ದವರು ಅವರನ್ನು ಹೊರತೆಗೆದು ಚಿಕಿತ್ಸೆಗಾಗಿ ಮೊದಲು ಉಡುಪಿ ಜಿಲ್ಲಾ ಸರಕಾರಿ ಆಸ್ಪತ್ರೆಗೆ ದಾಖಲಿಸಿದ್ದು, ಬಳಿಕ ಹೆಚ್ಚಿನ ಚಿಕಿತ್ಸೆಗೆ ವೆನ್ಲಾಕ್ ಆಸ್ಪತ್ರೆ ಗೆ ದಾಖಲಿಸಲಾಗಿದೆ.
ಅವಘಡ ಸಂಭವಿಸಲು ಸ್ಥಳದ ಮಾಲೀಕರು ಅಗತ್ಯ ಮುಂಜಾಗ್ರತಾ ಕ್ರಮ ಕೈಗೊಳ್ಳದೇ, ಸುರಕ್ಷತಾ ಸಾಧನಗಳನ್ನು ಒದಗಿಸದೇ ನಿರ್ಲಕ್ಷ್ಯ ತೋರಿರುವುದಾಗಿ ದೂರಿನಲ್ಲಿ ಆರೋಪಿಸಲಾಗಿದೆ.
ಈ ಕುರಿತು ಶಿರ್ವ ಪೊಲೀಸ್ ಠಾಣೆ ಯಲ್ಲಿ ಪ್ರಕರಣ ದಾಖಲಾಗಿದೆ.







