ಉಡುಪಿ : ನಾಲ್ಕು ಲೇಬರ್ ಕೋಡ್ಗಳ ವಿರೋಧಿಸಿ, ಸಾಮ್ರಾಜ್ಯಶಾಹಿ ಯುಎಸ್ ಯುದ್ಧ ನೀತಿ ಹಾಗೂ ಬೆಲೆಯೇರಿಕೆ ವಿರುದ್ಧ 2026ರ ಮೇ ದಿನಾಚರಣೆಯನ್ನು ಮೇ 01ರಂದು ಉಡುಪಿಯಲ್ಲಿ ಸಾವಿರಾರು ಕಾರ್ಮಿಕರ ಬ್ರಹತ್ ಮೆರವಣಿಗೆಯೊಂದಿಗೆ ಆಚರಿಸಲಾಗುತ್ತದೆ.
ಅಂದು ಬೆಳಿಗ್ಗೆ 9.15ಕ್ಕೆ ಉಡುಪಿ ಹಳೆ ಕೆಎಸ್ಆರ್ಟಿಸಿ ಬಸ್ ನಿಲ್ದಾಣದ ಬಳಿಯಿಂದ ಮೆರವಣಿಗೆ ಆರಂಭವಾಗಲಿದೆ. ಜಿಲ್ಲೆಯ ವಿವಿಧ ಗ್ರಾಮಗಳಿಂದ ಆಗಮಿಸುವ ಕಟ್ಟಡ ಕಾರ್ಮಿಕರು, ಬೀಡಿ ಕಾರ್ಮಿಕರು, ಕ್ಯಾಶು ಕಾರ್ಮಿಕರು, ಅಂಗನವಾಡಿ ನೌಕರರು, ಮೀನುಗಾರರು, ಸೆಕ್ಯುರಿಟಿ ಕಾರ್ಮಿಕರು, ಆಟೋರಿಕ್ಷಾ ಚಾಲಕರು, ಜನರಲ್ ವರ್ಕರ್ಸ್ ಹಾಗೂ ಅಕ್ಷರ ದಾಸೋಹ ನೌಕರರು ಮೆರವಣಿಗೆಯಲ್ಲಿ ಭಾಗವಹಿಸಲಿದ್ದಾರೆ.
ಬಳಿಕ ಬೆಳಿಗ್ಗೆ 11 ಗಂಟೆಗೆ ಸಾರ್ವಜನಿಕ ಸಭೆ ನಡೆಯಲಿದ್ದು, ಮಧ್ಯಾಹ್ನ 12.30ಕ್ಕೆ ಸಮಾರೋಪಗೊಳ್ಳಲಿದೆ. ಸಭೆಯನ್ನು ಉದ್ದೇಶಿಸಿ ಸಿಐಟಿಯು ರಾಜ್ಯ ಹಿರಿಯ ಉಪಾಧ್ಯಕ್ಷ ಬಾಲಕೃಷ್ಣ ಶೆಟ್ಟಿ ಮಾತನಾಡಲಿದ್ದಾರೆ. ವಿವಿಧ ಸಂಘಟನೆಗಳ ಮುಖಂಡರು ಸಹ ವೇದಿಕೆಯಲ್ಲಿ ಭಾಗವಹಿಸಿ ಮಾತನಾಡಲಿದ್ದಾರೆ.
ಕಾರ್ಕಳದಲ್ಲಿ ಮೇ ದಿನಾಚರಣೆ ಕಾರ್ಕಳದ ಬಂಡಿಮಠ ಬಸ್ ನಿಲ್ದಾಣದ ಬಳಿ ಬೆಳಿಗ್ಗೆ 10 ಗಂಟೆಗೆ ಮೇ ದಿನಾಚರಣೆ ನಡೆಯಲಿದೆ. ಅಕ್ಷರ ದಾಸೋಹ, ಕಟ್ಟಡ, ಲೇಮಿನ ಹಾಗೂ ಬೀಡಿ ಕಾರ್ಮಿಕರು ಭಾಗವಹಿಸಲಿದ್ದಾರೆ.
ಇದೇ ವೇಳೆ ಬ್ರಹ್ಮಾವರದಲ್ಲಿ ಮಧ್ಯಾಹ್ನ 3 ಗಂಟೆಗೆ ಹಾಗೂ ಸಾಲಿಗ್ರಾಮದಲ್ಲಿ ಬೆಳಿಗ್ಗೆ 10 ಗಂಟೆಗೆ ಮೇ ದಿನಾಚರಣೆ ಕಾರ್ಯಕ್ರಮಗಳು ನಡೆಯಲಿವೆ. ಅಂಗನವಾಡಿ, ಆಟೋರಿಕ್ಷಾ, ಅಕ್ಷರ ದಾಸೋಹ, ಬೀಡಿ ಹಾಗೂ ಕಟ್ಟಡ ಕಾರ್ಮಿಕರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದು ಜೆಸಿಟಿಯು ಉಡುಪಿ ಸಂಚಾಲಕ ಕವಿರಾಜ್ ಎಸ್ ಕಾಂಚನ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.







