ಉಡುಪಿ : ಕರ್ನಾಟಕ ಎಸ್ಎಸ್ಎಲ್ಸಿ 2025-26ರ ಫಲಿತಾಂಶ ಪ್ರಕಟವಾಗಿದ್ದು, ಈ ಬಾರಿ ದಾಖಲೆ ಮಟ್ಟದ ಶೇ.94.10 ಫಲಿತಾಂಶ ದಾಖಲಾಗಿದೆ. ದಕ್ಷಿಣ ಕನ್ನಡ ಜಿಲ್ಲೆ ಪ್ರಥಮ ಸ್ಥಾನ ಪಡೆದುಕೊಂಡರೆ, ಉಡುಪಿ ದ್ವಿತೀಯ ಸ್ಥಾನದಲ್ಲಿದೆ. ಕಲಬುರಗಿ ಜಿಲ್ಲೆ ಕೊನೆಯ ಸ್ಥಾನದಲ್ಲಿದೆ.
ಈ ವರ್ಷ ಒಟ್ಟು 7 ವಿದ್ಯಾರ್ಥಿಗಳು 625ಕ್ಕೆ 625 ಅಂಕಗಳನ್ನು ಗಳಿಸಿ ರಾಜ್ಯಕ್ಕೆ ಕೀರ್ತಿ ತಂದಿದ್ದಾರೆ. ಹಿಂದಿನ 2024-25ನೇ ಸಾಲಿನೊಂದಿಗೆ ಹೋಲಿಸಿದರೆ, ಪೂರ್ಣ ಅಂಕಗಳನ್ನು ಪಡೆದ ವಿದ್ಯಾರ್ಥಿಗಳ ಸಂಖ್ಯೆ ಸ್ವಲ್ಪ ಕಡಿಮೆಯಾಗಿದ್ದರೂ, ಒಟ್ಟಾರೆ ಉತ್ತಮ ಅಂಕಗಳನ್ನು ಗಳಿಸಿದವರ ಸಂಖ್ಯೆ ಗಮನಾರ್ಹವಾಗಿದೆ. ಇದರಿಂದ ರಾಜ್ಯದ ವಿದ್ಯಾರ್ಥಿಗಳ ಸಾಧನೆ ಉನ್ನತ ಮಟ್ಟದಲ್ಲಿಯೇ ಮುಂದುವರಿದಿರುವುದು ಸ್ಪಷ್ಟವಾಗಿದೆ.
ಕುಂದಾಪುರದ ಪ್ರೀತಂ ಜಿ. ಪೂಜಾರಿ 625ಕ್ಕೆ 625 ಅಂಕ ಪಡೆದು ರಾಜ್ಯ ಪ್ರಥಮ ಸ್ಥಾನ
ಕುಂದಾಪುರ ತಾಲೂಕಿನ ಶಂಕರನಾರಾಯಣದಲ್ಲಿರುವ ಮದರ್ ತೆರೇಸಾ ಮೆಮೋರಿಯಲ್ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿ ಪ್ರೀತಂ ಜಿ. ಪೂಜಾರಿ 625ಕ್ಕೆ 625 ಅಂಕಗಳನ್ನು ಪಡೆದು ರಾಜ್ಯ ಪ್ರಥಮ ಸ್ಥಾನ ಪಡೆದ ಏಳು ಮಂದಿಯಲ್ಲಿ ಒಬ್ಬನಾಗಿದ್ದಾನೆ.
ಗ್ರಾಮೀಣ ಹಿನ್ನೆಲೆಯ ಪ್ರೀತಂ, ಖಾಸಗಿ ಬಸ್ ಕಂಡಕ್ಟರ್ ಆಗಿರುವ ಗಣಪತಿ ಪೂಜಾರಿ ಹಾಗೂ ನಾಗರತ್ನ ದಂಪತಿಯ ಪುತ್ರನಾಗಿದ್ದು, ತನ್ನ ಸಾಧನೆಯ ಮೂಲಕ ಕುಟುಂಬ ಮತ್ತು ಊರಿಗೆ ಹೆಮ್ಮೆ ತಂದಿದ್ದಾನೆ.







