ಮಣಿಪಾಲ್, : ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ (ಮಾಹೆ) ವಿಶ್ವವಿದ್ಯಾಲಯ ಎಂದು ಪರಿಗಣಿತವಾಗಿರುವ ಉತ್ಕೃಷ್ಟ ಸಂಸ್ಥೆಯಲ್ಲಿ ಸುಧಾರಿತ ಐವಿಎಫ್ ತರಬೇತಿ ಪಡೆದ ಆಫ್ರಿಕಾ ಖಂಡದ ಬುರ್ಕಿನಾ ಫಾಸೊ ದೇಶದ ವೈದ್ಯರೊಬ್ಬರು, ತಮ್ಮ ದೇಶದಲ್ಲಿ ಸಂತಾನಹೀನತೆ ಚಿಕಿತ್ಸೆಯ ಸ್ವರೂಪವನ್ನೇ ಬದಲಿಸುತ್ತಿದ್ದಾರೆ. ಭಾರತದ ವೈದ್ಯಕೀಯ ಶಿಕ್ಷಣವು ಜಾಗತಿಕ ಮಟ್ಟದಲ್ಲಿ ಪ್ರಭಾವ ಬೀರುತ್ತಿದೆ ಎನ್ನುವುದಕ್ಕೆ ಇದು ಸಾಕ್ಷಿಯಾಗಿದೆ.
ʼಮೆರ್ಕ್-ಮೋರ್ ದ್ಯಾನ್ ಎ ಮದರ್ʼ ಅಭಿಯಾನದ ಅಡಿಯಲ್ಲಿ ತರಬೇತಿ ಪಡೆದ 13 ಅಂತರಾಷ್ಟ್ರೀಯ ವೈದ್ಯರಲ್ಲಿ ಒಬ್ಬರಾದ ಡಾ. ಪಾಲ್ ಕೌರೊಗೊ ಅವರು, ಈಗ ಭ್ರೂಣವಿಜ್ಞಾನ ಮತ್ತು ಸುಧಾರಿತ ಸಂತಾನೋತ್ಪತ್ತಿ ತಂತ್ರಜ್ಞಾನದಲ್ಲಿ ಪರಿಣತಿ ಪಡೆದಿದ್ದಾರೆ. ಆಫ್ರಿಕಾದ ಅನೇಕ ಭಾಗಗಳಲ್ಲಿ ಇಂದಿಗೂ ಇಂತಹ ತಜ್ಞರ ಕೊರತೆಯಿದ್ದು, ಡಾ. ಪಾಲ್ ಅವರ ಈ ಜ್ಞಾನವು ಅಲ್ಲಿನ ಜನರಿಗೆ ವರದಾನವಾಗಲಿದೆ.
ʼನಮ್ಮ ದೇಶದಲ್ಲಿ ಇಂತಹ ಸಮಸ್ಯೆ ಇರುವವರು ಯಾರ ಬಳಿಯೂ ಹೇಳಿಕೊಳ್ಳಲಾಗದೆ ಸಂಕಟ ಪಡುತ್ತಿದ್ದಾರೆ. ಅಷ್ಟೇ ಅಲ್ಲದೆ, ಅವರಿಗೆ ಚಿಕಿತ್ಸೆ ನೀಡಲು ಅಗತ್ಯವಾದ ಆಸ್ಪತ್ರೆ ಸೌಲಭ್ಯ ಮತ್ತು ತಜ್ಞರ ಕೊರತೆ ಇದೆʼ ಎಂದು ಡಾ. ಪಾಲ್ ಅವರು ಮಣಿಪಾಲದಲ್ಲಿ ನಡೆದ ಪ್ರಮಾಣಪತ್ರ ವಿತರಣಾ ಕಾರ್ಯಕ್ರಮದಲ್ಲಿ ತಿಳಿಸಿದರು.
ʼಕೇವಲ ಆಸ್ಪತ್ರೆ ಕಟ್ಟುವುದು ನನ್ನ ಗುರಿಯಲ್ಲ, ಮಕ್ಕಳಿಲ್ಲದ ದಂಪತಿಗಳ ಬಾಳಿನಲ್ಲಿ ಹೊಸ ಚೈತನ್ಯ ಮೂಡಿಸುವುದು ಮುಖ್ಯ ಆಶಯವಾಗಿದೆ. ನಮ್ಮ ಭಾಗದಲ್ಲಿ ಚಿಕಿತ್ಸೆಯಿಂದ ವಂಚಿತರಾಗಿದ್ದ ಸಾವಿರಾರು ದಂಪತಿ ಕನಸುಗಳನ್ನು ನನಸು ಮಾಡಬೇಕಿದೆ. ಇದಕ್ಕೆ ಸ್ಫೂರ್ತಿ ನೀಡಿದ ಮಾಹೆಗೆ ನಾನು ಕೃತಜ್ಞನಾಗಿದ್ದೇನೆʼ ಎಂಬುದನ್ನು ಡಾ. ಪಾಲ್ ಒತ್ತಿ ಹೇಳಿದರು.
ʼಇಂದಿಗೂ ಸಂತಾನಹೀನತೆಯನ್ನು ಕಳಂಕ ಎನ್ನುವ ರೀತಿಯಲ್ಲಿ ಸಮಾಜ ನೋಡುತ್ತಿದೆ. ಇದರಿಂದಾಗಿ ಮಹಿಳೆಯರು ತಾರತಮ್ಯಕ್ಕೆ ಒಳಗಾಗುತ್ತಿದ್ದಾರೆ. ಜ್ಞಾನದ ಮೂಲಕ ಮಹಿಳೆಯನ್ನು ಸಬಲೀಕರಣ ಮಾಡುವುದೇ ಈ ಕಳಂಕವನ್ನು ದಿಟ್ಟವಾಗಿ ಎದುರಿಸಲು ಇರುವ ದಾರಿ. ಈ ನಿಟ್ಟಿನಲ್ಲಿ ಡಾ. ಪಾಲ್ ಕೌರೊಗೊರಂಥ ವೈದ್ಯರ ಸಾಧನೆ ಅಭಿನಂದನೀಯ ʼ ಎಂದು ಮಾಹೆಯ ಸಹ ಕುಲಾಧಿಪತಿ ಡಾ. ಎಚ್.ಎಸ್. ಬಲ್ಲಾಳ್ ಅಭಿಪ್ರಾಯಪಟ್ಟರು.
ʼಚಿಕಿತ್ಸೆ ನೀಡಲು ಕೇವಲ ತಾಂತ್ರಿಕ ನೈಪುಣ್ಯ ಇದ್ದರೆ ಸಾಕಾಗುವುದಿಲ್ಲ, ಅದರ ಜೊತೆಗೆ ರೋಗಿಗಳ ಬಗ್ಗೆ ಪ್ರೀತಿ ಮತ್ತು ಕಾಳಜಿ ಇರಬೇಕು. ಚಿಕಿತ್ಸೆಯ ಹಾದಿಯುದ್ದಕ್ಕೂ ರೋಗಿಗಳಿಗೆ ಧೈರ್ಯ ಮತ್ತು ಸಾಂತ್ವನ ನೀಡಲು ವೈದ್ಯರು ಸಹಾನುಭೂತಿ ಹಾಗೂ ಮಾನವೀಯ ಮೌಲ್ಯಗಳನ್ನು ಮೈಗೂಡಿಸಿಕೊಳ್ಳಬೇಕುʼ ಎಂದು ಮಾಹೆಯ ಆರೋಗ್ಯ ವಿಜ್ಞಾನಗಳ ಸಹ ಕುಲಪತಿ ಡಾ. ಶರತ್ ರಾವ್ ಹೇಳಿದರು.
ಈ ಬಗ್ಗೆ ಮಾತನಾಡಿದ ಮಾಹೆಯ ರಿಜಿಸ್ಟ್ರಾರ್ ಡಾ. ಗಿರಿಧರ್ ಕಿಣಿ, ‘ಸಂತಾನಹೀನತೆಯನ್ನು ಪರಿಹರಿಸುವಲ್ಲಿ ವೈದ್ಯರಿಗೆ ತರಬೇತಿ ನೀಡುತ್ತಿರುವ ಮಾಹೆಯು ನಿಜವಾಗಿ ಸಮಾಜಪರ ಕೆಲಸ ಮಾಡುತ್ತಿದೆ. ವೈದ್ಯಕೀಯ ಎಂಬುದು ವೃತ್ತಿಯೂ ಹೌದು, ಸೇವೆಯೂ ಹೌದು ಎಂಬುದಕ್ಕೆ ಡಾ. ಪಾಲ್ ಕೌರೊಗೊರಂಥ ವೈದ್ಯರು ಸಾಕ್ಷಿಯಾಗಿದ್ದಾರೆ
ʼ ಎಂದರು.
ʼಆಫ್ರಿಕಾ ಮತ್ತು ಏಷ್ಯಾದ ಸುಮಾರು 300ಕ್ಕೂ ಹೆಚ್ಚು ವೈದ್ಯಕೀಯ ಸಿಬಂದಿಗೆ ವಿಶೇಷ ತರಬೇತಿ ನೀಡಿದ್ದೇವೆ. ಈ ಹಿಂದೆ ಚಿಕಿತ್ಸೆ ಲಭ್ಯವಿರದಿದ್ದ ಹಳ್ಳಿ ಅಥವಾ ನಗರಗಳಲ್ಲಿ ಈಗ ಈ ತರಬೇತಿ ಪಡೆದ ತಜ್ಞರು ಹೊಸ ಕ್ಲಿನಿಕ್ಗಳನ್ನು ತೆರೆದು ಜನರಿಗೆ ಸೇವೆ ನೀಡುತ್ತಿದ್ದಾರೆʼ ಎಂದು ಈ ಯೋಜನೆಯ ಸಂಯೋಜಕರಾದ ಡಾ. ಸತೀಶ್ ಅಡಿಗ ಹೇಳಿದರು.
ಮಾಹೆ ಮತ್ತು ಮೆರ್ಕ್ ಫೌಂಡೇಶನ್ ಸಂಯೋಜನೆಯ ಈ ಯೋಜನೆಯು ಹೊಸ ಹೊಸ ಪ್ರದೇಶಗಳಿಗೆ ತಲುಪುತ್ತಿದ್ದು, ಸಂತಾನೋತ್ಪತ್ತಿ ಕ್ಷೇತ್ರದಲ್ಲಿ ಕಂಡುಬರುತ್ತಿರುವ ಗಂಭೀರ ಕೊರತೆಗಳನ್ನು ನೀಗಿಸುವುದು ಈ ಅಭಿಯಾನದ ಪ್ರಮುಖ ಗುರಿಯಾಗಿದೆ.







