ಏಪ್ರಿಲ್ 15 :ಕರಾಯದಲ್ಲಿ ನಡೆಯುತ್ತಿರುವ ಬ್ರಹ್ಮಕಲಶೋತ್ಸವದ ಅಂಗವಾಗಿ ಪ್ರಜಾಪಿತ ಬ್ರಹ್ಮಕುಮಾರಿಯರು ಈಶ್ವರೀಯ ವಿಶ್ವವಿದ್ಯಾಲಯದ ವತಿಯಿಂದ ಭಾರತದ ಪ್ರಸಿದ್ಧ ದ್ವಾದಶ ಜ್ಯೋತಿರ್ಲಿಂಗ ದರ್ಶನ ಮೇಳವನ್ನು ಭಕ್ತರಿಗೆ ಪರಿಚಯಿಸಲಾಯಿತು.
ಉದ್ಘಾಟನಾ ಸಮಾರಂಭದಲ್ಲಿ ಶ್ರೀ ಶ್ರೀ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ಮಾಣಿಲ ಅವರು ಮಾತನಾಡಿ, ಇಂತಹ ದ್ವಾದಶ ಜ್ಯೋತಿರ್ಲಿಂಗ ದರ್ಶನ ಕಾರ್ಯಕ್ರಮಗಳು ಪ್ರತಿಯೊಂದು ಬ್ರಹ್ಮಕಲಶೋತ್ಸವದಲ್ಲೂ ನಡೆಯಬೇಕು ಎಂದು ಅಭಿಪ್ರಾಯಪಟ್ಟರು. ಸಂಸ್ಥೆಯ ಸೇವಾ ಕಾರ್ಯಗಳನ್ನು ಮೆಚ್ಚಿ ಶುಭ ಹಾರೈಸಿದರು. ತಮ್ಮ ಪೂರ್ವಶ್ರಮದಲ್ಲಿ ರಾಜಯೋಗ ವಿದ್ಯಾರ್ಥಿಯಾಗಿದ್ದನ್ನು ಸ್ಮರಿಸಿ, ರಾಜಯೋಗದ ಮಹತ್ವವನ್ನು ವಿವರಿಸಿದರು.
ಬಳಿಕ ಬೆಳ್ತಂಗಡಿ ಕ್ಷೇತ್ರದ ಶಾಸಕ ಹರೀಶ್ ಪೂಂಜಾ ಅವರು ದೀಪ ಪ್ರಜ್ವಲನೆ ಮೂಲಕ ಹನ್ನೆರಡು ಜ್ಯೋತಿರ್ಲಿಂಗ ದರ್ಶನ ಮೇಳಕ್ಕೆ ಚಾಲನೆ ನೀಡಿ, ಈ ದರ್ಶನದ ಲಾಭವನ್ನು ಎಲ್ಲರೂ ಪಡೆಯಲಿ ಎಂದು ಆಶಿಸಿದರು.
ಕಾರ್ಯಕ್ರಮದಲ್ಲಿ ಪ್ರಮುಖ ಅತಿಥಿಗಳಾಗಿ ಅನಂತಕೃಷ್ಣ ಕುದ್ಧಣ್ಣಾಯ (ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರು), ಸುದರ್ಶನ ಕೊಳ್ಳಿ (ಜೀರ್ಣೋದ್ದಾರ ಸಮಿತಿ ಅಧ್ಯಕ್ಷರು), ಅತುಲ್ ಕುಮಾರ್ ಕೆ.ಎನ್ (ಬ್ರಹ್ಮಕಲೋತ್ಸವ ಸಮಿತಿ ಅಧ್ಯಕ್ಷರು), ದುರ್ಗೇಶ್ ವಿ ಕೆದಿಲಾಯ (ಪ್ರಧಾನ ಕಾರ್ಯದರ್ಶಿ), ಸಾಮ್ರಾಟ್ ಕರ್ಕೇರ (ಕೋಶಾಧಿಕಾರಿ), ಯುವರಾಜ್ ಅನಾರ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ಕಾವಳಕಟ್ಟೆ-ಬಂಟ್ವಾಳ ಸಂಚಾಲಕರಾದ ರಾಜಯೋಗಿನಿ ಬ್ರಹ್ಮಕುಮಾರಿ ಸರೋಜಿನಿಜೀ ಅವರು ಸಹಸ್ರಲಿಂಗಕ್ಕೆ ದೀಪ ಬೆಳಗಿ, ಸಂಸ್ಥೆಯ ಗುರಿ-ಉದ್ದೇಶ, ರಾಜಯೋಗ ಧ್ಯಾನ ಹಾಗೂ ಸಹಜ ರಾಜಯೋಗದ ಬಗ್ಗೆ ಮಾಹಿತಿ ನೀಡಿ ಆಶೀರ್ವಚನ ನೀಡಿದರು.
ಸಂಸ್ಥೆಯ ರಾಜಯೋಗಿ ಮಂಜುನಾಥ ಅವರು ಕಾರ್ಯಕ್ರಮಕ್ಕೆ ಆಗಮಿಸಿದ ಭಕ್ತರನ್ನು ಸ್ವಾಗತಿಸಿ, ದ್ವಾದಶ ಜ್ಯೋತಿರ್ಲಿಂಗ ದರ್ಶನವು ಏಪ್ರಿಲ್ 13ರಿಂದ 25ರವರೆಗೆ ನಡೆಯಲಿದ್ದು, ಕರಾಯ ಮತ್ತು ಸುತ್ತಮುತ್ತಲಿನ ಭಕ್ತರು ಉಚಿತವಾಗಿ ಇದರ ಪ್ರಯೋಜನ ಪಡೆಯಬಹುದು ಎಂದು ತಿಳಿಸಿದರು.






