ಉಡುಪಿ, ಏ.1: ನಗರದ ಕಲ್ಸಂಕ ಪ್ರದೇಶದಲ್ಲಿರುವ ನಿರ್ಮಾಣ ಹಂತದಲ್ಲಿ ಹಾಳಾಗಿರುವ ‘ಕನಕ ಮಹಲ್’ ಬಹುಮಹಡಿ ಕಟ್ಟಡದಲ್ಲಿ ಸಂಭವಿಸಿದ ಅಪಘಾತದಲ್ಲಿ ವಲಸೆ ಕಾರ್ಮಿಕನೊಬ್ಬ ಗಾಯಗೊಂಡ ಘಟನೆ ಬುಧವಾರ ನಡೆದಿದೆ.
ಗಾಯಾಳುವನ್ನು ಮಲ್ಲಪ್ಪ ಬಸಪ್ಪ (40), ಬೆಳಗಾವಿ ನಿವಾಸಿ ಎಂದು ಗುರುತಿಸಲಾಗಿದೆ. ಇವರು ನಗರದಲ್ಲಿ ಗುತ್ತಿಗೆದಾರರ ಬಳಿ ಕೆಲಸ ಮಾಡುತ್ತಿದ್ದ ವಲಸೆ ಕಾರ್ಮಿಕನಾಗಿದ್ದು, ರಾತ್ರಿ ಸಮಯದಲ್ಲಿ ಪಾಳುಬಿದ್ದ ಕಟ್ಟಡದಲ್ಲೇ ಮಲಗುತ್ತಿದ್ದನು ಎನ್ನಲಾಗಿದೆ.
ನಿದ್ದೆಯ ಮಂಪರಿನಲ್ಲಿ ಮೂತ್ರ ವಿಸರ್ಜನೆಗಾಗಿ ತೆರಳುತ್ತಿದ್ದ ವೇಳೆ ಅಜಾಗರೂಕತೆಯಿಂದ ಕಟ್ಟಡದ ಲಿಪ್ಟ್ ಗುಂಡಿಗೆ ಬಿದ್ದಿದ್ದು, ಇದರಿಂದ ಕಾಲಿಗೆ ಮುರಿತ ಉಂಟಾಗಿದೆ ಎಂದು ಗಾಯಾಳು ತಿಳಿಸಿದ್ದಾನೆ.
ಘಟನೆಯ ಬಗ್ಗೆ ಮಾಹಿತಿ ಪಡೆದ ಸಮಾಜಸೇವಕ ನಿತ್ಯಾನಂದ ಒಳಕಾಡುವರು ತಕ್ಷಣ ಸ್ಥಳಕ್ಕೆ ಧಾವಿಸಿ ಗಾಯಾಳುವನ್ನು ರಕ್ಷಿಸಿ ಅಜ್ಜರಕಾಡು ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದಾರೆ. ಗಾಯಾಳು ಇದೀಗ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಗಾಯಾಳುವಿನ ಕುಟುಂಬದವರು ಶೀಘ್ರವಾಗಿ ಉಡುಪಿ ಜಿಲ್ಲಾಸ್ಪತ್ರೆಯನ್ನು ಸಂಪರ್ಕಿಸಲು ತಿಳಿಸಲಾಗಿದೆ.







