ಕಾಪು: ಮಗನ ಸಾವಿನ ಹಿನ್ನೆಲೆ ಮಾನಸಿಕ ಖಿನ್ನತೆಗೆ ಒಳಗಾಗಿದ್ದ ವ್ಯಕ್ತಿ ಇಲಿ ಪಾಷಾಣ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಕಾಪು ತಾಲೂಕಿನಲ್ಲಿ ನಡೆದಿದೆ.
ಉಳಿಯಾರಗೋಳಿ ಗ್ರಾಮದ ರವಿಕಲಾ (58) ಅವರ ಗಂಡ ನೀಲಾಧರ ಬಂಗೇರಾ (68) ಮೃತರು. ಮಗನ ಸಾವಿನ ನಂತರ ಅವರು ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದು, ರಾತ್ರಿ ಸಮಯದಲ್ಲಿ ಸರಿಯಾಗಿ ನಿದ್ದೆ ಬಾರದ ಸಮಸ್ಯೆಯಿಂದ ಉಡುಪಿ ಜಿಲ್ಲಾ ಸರಕಾರಿ ಆಸ್ಪತ್ರೆ ಹಾಗೂ ಕಾಪು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.
ಮಾರ್ಚ್ 28ರಂದು ಮಧ್ಯಾಹ್ನ ಸುಮಾರು 3.30ರ ವೇಳೆಗೆ ಮನೆಯಲ್ಲಿದ್ದಾಗ “ನಿನ್ನೆ ರಾತ್ರಿ ನಿದ್ದೆ ಬರಲಿಲ್ಲ, ನಾನು ಸಾಯುತ್ತೇನೆ” ಎಂದು ಹೇಳಿ, ಕೈಯಲ್ಲಿದ್ದ ಇಲಿ ಪಾಷಾಣದ ಟ್ಯೂಬ್ಗಳನ್ನು ತೋರಿಸಿ ಅದನ್ನು ಸೇವಿಸಿದ್ದಾಗಿ ಪತ್ನಿ ರವಿಕಲಾ ಅವರಿಗೆ ತಿಳಿಸಿದ್ದಾರೆ. ತಕ್ಷಣವೇ ಅವರನ್ನು ಉಡುಪಿ ಜಿಲ್ಲಾ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಆದರೆ ಚಿಕಿತ್ಸೆ ಫಲಕಾರಿಯಾಗದೆ ಮಾರ್ಚ್ 29ರಂದು ಬೆಳಿಗ್ಗೆ 4.50ರ ಸುಮಾರಿಗೆ ಅವರು ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದಾರೆ.
ಈ ಸಂಬಂಧ ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಲಾಗಿದೆ.






