ಗಾಂಧೀನಗರ, ಮಾ. 20: ಗುಜರಾತ್ನ ಸೂರತ್ನಲ್ಲಿ ಎಟಿಎಂ ದೋಷದಿಂದಾಗಿ 10,000 ರೂ. ಹಣ ಪಡೆಯಲು ಹೋಗಿದ್ದ ವ್ಯಕ್ತಿಗೆ ಕೊನೆಗೂ ಸುಮಾರು 3 ಲಕ್ಷ ರೂ. ಪರಿಹಾರ ದೊರೆತ ಘಟನೆ ಬೆಳಕಿಗೆ ಬಂದಿದೆ.
ಒಂಬತ್ತು ವರ್ಷಗಳ ದೀರ್ಘ ಹೋರಾಟ, ಅನೇಕ ಇಮೇಲ್ಗಳು ಹಾಗೂ ದೂರುಗಳ ಬಳಿಕ, ಬ್ಯಾಂಕ್ ಆಫ್ ಬರೋಡಾ 10,000 ರೂ.ಗೆ 30 ಪಟ್ಟು ಮೊತ್ತ ಪಾವತಿಸುವಂತೆ ಆದೇಶಿಸಲಾಗಿದೆ.
ಘಟನೆ 2017ರ ಫೆಬ್ರವರಿ 18ರಂದು ನಡೆದಿದೆ. ಸೂರತ್ನ ಉದ್ಹನಾ ಪ್ರದೇಶದ ಗ್ರಾಹಕೊಬ್ಬರು ಎಸ್ಬಿಐ ಎಟಿಎಂನಲ್ಲಿ 10,000 ರೂ. ಹಣ ತೆಗೆಯಲು ಪ್ರಯತ್ನಿಸಿದ್ದರು. ಆದರೆ, ಯಂತ್ರದಿಂದ ಹಣ ಹೊರಬರಲಿಲ್ಲ; ರಸೀದಿಯೂ ಲಭ್ಯವಾಗಲಿಲ್ಲ. ಕೆಲವೇ ಕ್ಷಣಗಳಲ್ಲಿ ಅವರ ಖಾತೆಯಿಂದ 10,000 ರೂ. ಕಡಿತಗೊಂಡಿದೆ ಎಂಬ ಸಂದೇಶ ಬಂದಿತ್ತು.
ಗಾಬರಿಗೊಂಡ ಗ್ರಾಹಕರು ಫೆಬ್ರವರಿ 21ರಂದು ಬ್ಯಾಂಕ್ ಆಫ್ ಬರೋಡಾ ದುಂಭಾಲ್ ಶಾಖೆಗೆ ಲಿಖಿತ ದೂರು ಸಲ್ಲಿಸಿದರು. ನಂತರ 2017ರ ಮಾರ್ಚ್ನಿಂದ ಮೇವರೆಗೆ ಹಲವಾರು ಬಾರಿ ಇಮೇಲ್ ಮೂಲಕವೂ ಮನವಿ ಮಾಡಿದರು. ಆರ್ಬಿಐ ಸೇರಿದಂತೆ ವಿವಿಧ ಅಧಿಕಾರಿಗಳನ್ನು ಸಂಪರ್ಕಿಸಿದ ಅವರು, ಸಿಸಿಟಿವಿ ದೃಶ್ಯಾವಳಿ ಪಡೆಯಲು ಎಸ್ಬಿಐಗೆ ಆರ್ಟಿಐ ಅರ್ಜಿಯನ್ನೂ ಸಲ್ಲಿಸಿದ್ದರು. ಆದರೂ ಸಮರ್ಪಕ ಪ್ರತಿಕ್ರಿಯೆ ಸಿಗದೆ, ಅಂತಿಮವಾಗಿ 2017ರ ಡಿಸೆಂಬರ್ನಲ್ಲಿ ಗ್ರಾಹಕ ನ್ಯಾಯಮಂಡಳಿಯನ್ನು ಸಂಪರ್ಕಿಸಿದರು.
ವಿಚಾರಣೆಯ ವೇಳೆ ಬ್ಯಾಂಕ್ ಆಫ್ ಬರೋಡಾ, ಸಂಬಂಧಿತ ಎಟಿಎಂ ಎಸ್ಬಿಐಗೆ ಸೇರಿದ್ದು ಹಾಗೂ ವಹಿವಾಟು ಯಶಸ್ವಿಯಾಗಿದೆ ಎಂದು ದಾಖಲೆಯಿದೆ, ಆದ್ದರಿಂದ ಜವಾಬ್ದಾರಿ ತಮ್ಮದಿಲ್ಲ ಎಂದು ವಾದಿಸಿತು. ಆದರೆ ಗ್ರಾಹಕ ಆಯೋಗ ಈ ವಾದವನ್ನು ತಳ್ಳಿಹಾಕಿ, ವಹಿವಾಟಿನ ಪುರಾವೆಗಳನ್ನು ಸಲ್ಲಿಸುವುದು ಬ್ಯಾಂಕ್ನ ಕರ್ತವ್ಯ ಎಂದು ಸ್ಪಷ್ಟಪಡಿಸಿತು.
ಆರ್ಬಿಐ ಮಾರ್ಗಸೂಚಿಗಳ ಪ್ರಕಾರ ಐದು ದಿನಗಳೊಳಗೆ ಮೊತ್ತವನ್ನು ಮರುಪಾವತಿಸಬೇಕಾಗಿದ್ದರೂ, ಬ್ಯಾಂಕ್ ಅದನ್ನು ಪಾಲಿಸದಿರುವುದನ್ನು ಗಮನಿಸಿ, ಗ್ರಾಹಕರ ಪರವಾಗಿ ತೀರ್ಪು ನೀಡಲಾಗಿದೆ.







