ಉಡುಪಿ, ಮಾ. 19: ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಯುದ್ಧದ ಪರಿಣಾಮವಾಗಿ ಶುದ್ಧ ಕುಡಿಯುವ ನೀರನ್ನು ಬಾಟಲಿ ಮೂಲಕ ಪ್ಯಾಕ್ ಮಾಡಿ ಮಾರಾಟ ಮಾಡುವ ಉದ್ಯಮಕ್ಕೆ ಭಾರೀ ಸಂಕಷ್ಟ ಎದುರಾಗಿದೆ.
ಈ ಹಿನ್ನೆಲೆ, ದರ ಏರಿಕೆ ಅನಿವಾರ್ಯವೆಂದು ತೀರ್ಮಾನಿಸಿರುವ ಕರಾವಳಿ ಕರ್ನಾಟಕ ಪ್ಯಾಕೇಜ್ಡ್ ಡ್ರಿಂಕಿಂಗ್ ವಾಟರ್ ಅಸೋಸಿಯೇಷನ್, ಬ್ರಹ್ಮಾವರದಲ್ಲಿ ನಡೆದ ಸಭೆಯಲ್ಲಿ ತತ್ಕ್ಷಣದಿಂದ ಜಾರಿಯಾಗುವಂತೆ ಪ್ರತಿ ಬಾಕ್ಸ್ಗೆ ₹25 ಹೆಚ್ಚಳ ಮಾಡುವ ನಿರ್ಧಾರ ಕೈಗೊಂಡಿದೆ.
ಮುಂದಿನ ದಿನಗಳಲ್ಲಿ ಕಚ್ಚಾ ವಸ್ತುಗಳ ದರದಲ್ಲಿ ಆಗುವ ಏರಿಳಿತಗಳನ್ನು ಗಮನದಲ್ಲಿಟ್ಟುಕೊಂಡು, ಉತ್ತರ ಕನ್ನಡ, ಉಡುಪಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ 64ಕ್ಕೂ ಹೆಚ್ಚು ಫ್ಯಾಕ್ಟರಿ ಮಾಲಕರು ಪರಸ್ಪರ ಚರ್ಚಿಸಿ ದರ ನಿಗದಿ ಮಾಡುವುದಾಗಿ ಸಭೆಯಲ್ಲಿ ಒಪ್ಪಿಗೆ ನೀಡಿದರು.
ಕಚ್ಚಾ ವಸ್ತುಗಳ ಬೆಲೆ ಗಣನೀಯವಾಗಿ ಏರಿಕೆಯಾಗಿರುವುದರ ಜೊತೆಗೆ, ಅವುಗಳ ಕೊರತೆಯೂ ಉಂಟಾಗಿದೆ ಎಂದು ಸಭೆಯಲ್ಲಿ ಅಭಿಪ್ರಾಯ ವ್ಯಕ್ತವಾಯಿತು. ಈಗಾಗಲೇ ಕರಾವಳಿ ಭಾಗದ ಪ್ಯಾಕೇಜ್ಡ್ ಕುಡಿಯುವ ನೀರಿನ ಉದ್ಯಮಗಳು ಅಸ್ತಿತ್ವದ ಹೋರಾಟ ನಡೆಸುತ್ತಿದ್ದು, ದರ ಏರಿಕೆ ಕೈಗೊಳ್ಳದಿದ್ದರೆ ಅನೇಕ ಘಟಕಗಳು ಮುಚ್ಚುವ ಪರಿಸ್ಥಿತಿ ಎದುರಾಗಬಹುದು ಎಂದು ಉದ್ಯಮಿಗಳು ಎಚ್ಚರಿಸಿದ್ದಾರೆ.
ಹೋಟೆಲ್ ಕ್ಷೇತ್ರಕ್ಕೂ ಬಿಸಿ ತಟ್ಟಿದೆ:
ವಾಣಿಜ್ಯ ಬಳಕೆಯ ಎಲ್ಪಿಜಿ ಗ್ಯಾಸ್ ಕೊರತೆಯಿಂದ ಜಿಲ್ಲೆಯ ಹೋಟೆಲ್ ಉದ್ಯಮಕ್ಕೂ ಗಂಭೀರ ಸಮಸ್ಯೆ ಎದುರಾಗಿದೆ. ಜಿಲ್ಲೆಯಲ್ಲಿ ಸುಮಾರು 3,000 ಹೋಟೆಲ್ಗಳು ಕಾರ್ಯನಿರ್ವಹಿಸುತ್ತಿದ್ದು, ಈಗಾಗಲೇ 150ಕ್ಕೂ ಹೆಚ್ಚು ಹೋಟೆಲ್ಗಳು ಗ್ಯಾಸ್ ಲಭ್ಯತೆ ಇಲ್ಲದ ಕಾರಣ ತಾತ್ಕಾಲಿಕವಾಗಿ ಮುಚ್ಚಲ್ಪಟ್ಟಿವೆ.
ಇನ್ನೂ ಕಾರ್ಯನಿರ್ವಹಿಸುತ್ತಿರುವ ಹೋಟೆಲ್ಗಳು ಕಟ್ಟಿಗೆ ಸೇರಿದಂತೆ ಪರ್ಯಾಯ ಇಂಧನಗಳನ್ನು ಬಳಸಿಕೊಂಡು ಆಹಾರ ತಯಾರಿಸುತ್ತಿವೆ. ಗ್ಯಾಸ್ ಬಳಕೆ ಹೆಚ್ಚು ಅಗತ್ಯವಿರುವ ಕಾರಣ, ಸುಮಾರು 40 ಶೇಕಡಾ ಹೋಟೆಲ್ಗಳಲ್ಲಿ ದೋಸೆ ಸೇರಿದಂತೆ ಕೆಲವು ತಿನಿಸುಗಳನ್ನು ತಾತ್ಕಾಲಿಕವಾಗಿ ನಿಲ್ಲಿಸಲಾಗಿದೆ.







