ಮಂಗಳೂರು, ಮಾ. 17: ದಕ್ಷಿಣ ಕನ್ನಡ ಜಿಲ್ಲೆಯ ಹಲವು ಭಾಗಗಳಲ್ಲಿ ಸೋಮವಾರ ಸಂಜೆ ಗುಡುಗು–ಮಿಂಚಿನೊಂದಿಗೆ ಮಳೆ ಸುರಿದಿದೆ. ಬೆಳ್ತಂಗಡಿ, ಧರ್ಮಸ್ಥಳ, ಪುತ್ತೂರು ಹಾಗೂ ಬಂಟ್ವಾಳ ಪ್ರದೇಶಗಳಲ್ಲಿ ಮಳೆಯ ತೀವ್ರತೆ ಹೆಚ್ಚಾಗಿ ಕಂಡುಬಂದಿದ್ದು, ಗಾಳಿಯೂ ಜೋರಾಗಿ ಬೀಸಿತು. ನಗರ ಸೇರಿದಂತೆ ಜಿಲ್ಲೆಯ ಕೆಲವಡೆ ರಾತ್ರಿ ವೇಳೆಯಲ್ಲೂ ತುಂತುರು ಮಳೆ ಮುಂದುವರಿಯಿತು.
ಮಾರ್ಚ್ ಆರಂಭದಲ್ಲೇ ಜಿಲ್ಲೆಯಲ್ಲಿ ತಾಪಮಾನ 40 ಡಿಗ್ರಿ ಸೆಲ್ಸಿಯಸ್ ಮೀರಿದ ಹಿನ್ನೆಲೆ, ಉರಿಯುವ ಬಿಸಿಲಿನಿಂದ ಜನತೆ ಸಂಕಷ್ಟ ಅನುಭವಿಸುತ್ತಿದ್ದರು. ಬಿಸಿಗಾಳಿಗೆ ಒದ್ದಾಡುತ್ತಿದ್ದ ಜನರಿಗೆ ಈ ಮಳೆ ತಂಪಿನ ಅನುಭವ ನೀಡಿತು.
ಇನ್ನೊಂದೆಡೆ, ಭಾರೀ ಮಳೆಯ ಪರಿಣಾಮವಾಗಿ ಮಂಗಳೂರು ನಗರ, ಪುತ್ತೂರು ಮತ್ತು ಬಂಟ್ವಾಳ ತಾಲ್ಲೂಕಿನ ಕೆಲವು ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಿ ಸಾರ್ವಜನಿಕರು ತೊಂದರೆ ಅನುಭವಿಸಿದರು.







