ಉಡುಪಿ, ಮಾ. 16: ಕಳೆದ ಕೆಲವು ದಿನಗಳಿಂದ ಕಾಣಿಸಿಕೊಂಡಿರುವ ಅನಿಲ ಸಿಲಿಂಡರ್ ಕೊರತೆ ಜಿಲ್ಲೆಯ ಹಲವಾರು ಹೊಟೇಲ್ಗಳಿಗೆ ಈಗಾಗಲೇ ಹೊಡೆತ ನೀಡಿದ್ದು, ಸಮಸ್ಯೆ ಮುಂದುವರಿದರೆ ಸೋಮವಾರ ಇನ್ನಷ್ಟು ಹೊಟೇಲ್ಗಳು ಬಾಗಿಲು ಮುಚ್ಚುವ ಸಾಧ್ಯತೆ ಎದುರಾಗಿದೆ. ಆದರೆ ಶಾಲೆಗಳ ಬಿಸಿಯೂಟ ಯೋಜನೆ, ಅಂಗನವಾಡಿ ಮಕ್ಕಳಿಗೆ ಸಿದ್ಧ ಆಹಾರ, ಆಸ್ಪತ್ರೆಗಳ ಕ್ಯಾಂಟೀನ್ ಸೇವೆಗಳಿಗೆ ತೊಂದರೆ ಉಂಟಾಗುವ ಸಾಧ್ಯತೆ ಕಡಿಮೆ ಎನ್ನಲಾಗಿದೆ.
ಸರಕಾರದ ಮಾರ್ಗಸೂಚಿಯಂತೆ ಆಸ್ಪತ್ರೆಗಳು, ಶಾಲೆಗಳು, ಅಂಗನವಾಡಿಗಳು, ಹಾಸ್ಟೆಲ್ಗಳು ಸೇರಿದಂತೆ ಅಗತ್ಯ ಸೇವೆಗಳಿಗೆ ಆದ್ಯತೆ ನೀಡುವಂತೆ ಅನಿಲ ಏಜೆನ್ಸಿಗಳಿಗೆ ಸೂಚನೆ ನೀಡಲಾಗಿದೆ. ಅದರಂತೆ ಸಿಲಿಂಡರ್ ಪೂರೈಕೆ ಪ್ರಕ್ರಿಯೆ ಮುಂದುವರಿದಿದ್ದು, ಶಾಲಾ ಮಕ್ಕಳ ಬಿಸಿಯೂಟ ಹಾಗೂ ಹಾಸ್ಟೆಲ್ಗಳ ಊಟ ವ್ಯವಸ್ಥೆಗೆ ಅಡಚಣೆ ಉಂಟಾಗುವುದಿಲ್ಲ ಎಂದು ಆಹಾರ ಇಲಾಖೆ ಮೂಲಗಳು ತಿಳಿಸಿವೆ.
ಆದರೆ ವಾಣಿಜ್ಯ ಬಳಕೆಯ ಗ್ಯಾಸ್ ಪೂರೈಕೆ ಸ್ವಲ್ಪ ವಿಳಂಬವಾಗುತ್ತಿರುವ ಹಿನ್ನೆಲೆಯಲ್ಲಿ ಕೆಲವು ಶಾಲೆಗಳು ಮತ್ತು ಹಾಸ್ಟೆಲ್ಗಳಲ್ಲಿ ಆತಂಕದ ವಾತಾವರಣವಿದೆ. ಹಿಂದಿನಂತೆ ಸುಲಭವಾಗಿ ಸಿಲಿಂಡರ್ ದೊರೆಯದಿದ್ದರೂ, ನಿತ್ಯದ ಬಿಸಿಯೂಟ ವ್ಯವಸ್ಥೆ ನಿರ್ವಹಿಸಲು ಬೇಕಾದಷ್ಟು ಅನಿಲ ಪೂರೈಕೆ ಲಭ್ಯವಾಗಲಿದೆ ಎಂದು ಮೂಲಗಳು ಸ್ಪಷ್ಟಪಡಿಸಿವೆ.
ಜಿಲ್ಲಾಡಳಿತವು ಈಗಾಗಲೇ ಅನಿಲ ಏಜೆನ್ಸಿಗಳೊಂದಿಗೆ ಸಭೆ ನಡೆಸಿ, ಶಾಲೆ, ಅಂಗನವಾಡಿ, ಹಾಸ್ಟೆಲ್, ಆಸ್ಪತ್ರೆಗಳು ಸೇರಿದಂತೆ ಸಾರ್ವಜನಿಕರಿಗೆ ಅಗತ್ಯವಿರುವ ಸಂಸ್ಥೆಗಳಿಗೆ ಆದ್ಯತೆ ಮೇರೆಗೆ ಸಿಲಿಂಡರ್ ಪೂರೈಕೆ ಮಾಡಬೇಕೆಂದು ಸೂಚಿಸಿದೆ. ಇದಕ್ಕೆ ಅನುಗುಣವಾಗಿ ಅನಿಲ ಸರಬರಾಜು ಸಂಸ್ಥೆಗಳೂ ಸಂಬಂಧಿತ ನಿರ್ದೇಶನಗಳನ್ನು ನೀಡಿವೆ ಎಂದು ಏಜೆನ್ಸಿ ಮೂಲಗಳು ಹೇಳಿವೆ.
ಇದರಿಂದ ಸದ್ಯದ ಪರಿಸ್ಥಿತಿಯಲ್ಲಿ ವಾಣಿಜ್ಯ ಬಳಕೆಯ ಸಿಲಿಂಡರ್ಗಳು ಹೊಟೇಲ್ಗಳಿಗೆ ದೊರೆಯುವುದು ಕಷ್ಟವಾಗಿದೆ. ಲಭ್ಯವಿರುವ ಸಿಲಿಂಡರ್ಗಳನ್ನು ಸರ್ಕಾರ ಸೂಚಿಸಿದ ಸಂಸ್ಥೆಗಳಿಗೆ ಮೊದಲು ನೀಡಬೇಕಾದ ಕಾರಣ ಹೊಟೇಲ್ಗಳಿಗೆ ಪೂರೈಕೆ ಕುರಿತು ಸ್ಪಷ್ಟ ನಿರ್ದೇಶನಗಳಿಲ್ಲ ಎಂದು ಏಜೆನ್ಸಿ ಮಾಲಕರು ತಿಳಿಸಿದ್ದಾರೆ. ಪರಿಣಾಮವಾಗಿ ಹಲವಾರು ಹೊಟೇಲ್ಗಳು ಪರ್ಯಾಯ ಇಂಧನ ಮಾರ್ಗಗಳತ್ತ ಮುಖ ಮಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದ್ದು, ಹೊಟೇಲ್ ಊಟದ ಮೇಲೆ ಅವಲಂಬಿತವಾಗಿರುವ ಜನರಿಗೆ ಕೂಡ ಸಮಸ್ಯೆ ಉಂಟಾಗುವ ಸಾಧ್ಯತೆ ಇದೆ.







