ಕಾರ್ಕಳ, ಮಾ. 14: ಕಾರ್ಕಳ ಪುರಸಭಾ ವ್ಯಾಪ್ತಿಯ ಆನೆಕೆರೆ ಪ್ರದೇಶದಲ್ಲಿರುವ ಕುಡಿಯುವ ನೀರಿನ ಬಾವಿಯಲ್ಲಿ ಹಾವು ಮೀನು (ಪೂ ಮೀನು) ಸತ್ತು ಹಲವು ದಿನಗಳಾದರೂ ಅದನ್ನು ಗಮನಿಸದಿರುವುದು ಸ್ಥಳೀಯರಲ್ಲಿ ಆಶ್ಚರ್ಯ ಹುಟ್ಟಿಸಿದೆ.
ಆನೆಕೆರೆ ಬಸದಿ ಕಡೆಗೆ ಪ್ರತಿದಿನವೂ ನೂರಾರು ಯಾತ್ರಾರ್ಥಿಗಳು ಸಂಚರಿಸುತ್ತಿದ್ದು, ಬಾವಿಯಿಂದ ಉಂಟಾದ ದುರ್ವಾಸನೆಯ ಕಾರಣದಿಂದಾಗಿ ಮೂಗು ಮುಚ್ಚಿಕೊಂಡೇ ತೆರಳುವ ಪರಿಸ್ಥಿತಿ ನಿರ್ಮಾಣವಾಗಿತ್ತು.
ಸ್ಥಳೀಯ ಟೆಂಪೋ ಚಾಲಕರು ಈ ಸಮಸ್ಯೆಯನ್ನು ಕಾರ್ಕಳ ಪುರಸಭೆಯ ಮಾಜಿ ಸದಸ್ಯ ಪ್ರಕಾಶ್ ರಾವ್ ಅವರಿಗೆ ದೂರವಾಣಿ ಮೂಲಕ ತಿಳಿಸಿದ ಬಳಿಕ, ಅವರು ತಕ್ಷಣ ಸ್ಥಳಕ್ಕೆ ಭೇಟಿ ನೀಡಿ ಕುಡಿಯುವ ನೀರಿನ ಅಗತ್ಯವನ್ನು ಗಮನದಲ್ಲಿಟ್ಟುಕೊಂಡು ಬಾವಿಯಲ್ಲಿ ಸತ್ತಿದ್ದ ಮೀನನ್ನು ಹೊರತೆಗೆದು ಸ್ವಚ್ಛಗೊಳಿಸುವ ಕಾರ್ಯಕ್ಕೆ ಮುಂದಾದರು.
ಪುರಸಭೆಯಿಂದ ತಕ್ಷಣ ಕ್ರಮ ಕೈಗೊಳ್ಳದ ಹಿನ್ನೆಲೆ, ರಾತ್ರಿ ವೇಳೆಯಲ್ಲಿಯೇ ಪುರಸಭಾ ಕಾರ್ಮಿಕ ಆನಂದ ಬಂಡಿಮಠ ಅವರೊಂದಿಗೆ ಸೇರಿ ಮೀನನ್ನು ಹೊರತೆಗೆದು ಸಮಸ್ಯೆ ಪರಿಹರಿಸಿದ ಕಾರ್ಯವನ್ನು ಸ್ಥಳೀಯರು ಪ್ರಶಂಸಿಸಿದ್ದಾರೆ.
ಸ್ಥಳೀಯ ಆಡಳಿತದ ಅಧಿಕಾರಿಗಳು ಹೆಡ್ ಕ್ವಾಟ್ರಸ್ನಲ್ಲಿ ಇದ್ದರೂ ಇಂತಹ ಸಮಸ್ಯೆಗಳ ಬಗ್ಗೆ ತಕ್ಷಣ ಸ್ಪಂದಿಸುವ ವ್ಯವಸ್ಥೆ ಮಾಡಬೇಕಾಗಿದೆ. ಇಲ್ಲವಾದರೆ ಸಾರ್ವಜನಿಕರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವ ಸಾಧ್ಯತೆ ಇದೆ ಎಂದು ಸ್ಥಳೀಯರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಇನ್ನಾದರೂ ಇಂತಹ ಸಾರ್ವಜನಿಕ ಸಮಸ್ಯೆಗಳಿಗೆ ಪುರಸಭೆ ಶೀಘ್ರವಾಗಿ ಸ್ಪಂದಿಸುವಂತೆ ಕ್ರಮ ಕೈಗೊಳ್ಳಬೇಕು ಎಂಬ ಆಗ್ರಹವೂ ಕೇಳಿಬರುತ್ತಿದೆ.







