ಉಳ್ಳಾಲ, ಮಾ. 11: ಕೆಲಸಕ್ಕೆ ತೆರಳಿ ಮನೆಗೆ ಮರಳದೇ ನಾಪತ್ತೆಯಾಗಿದ್ದ ಯುವಕನ ಮೃತದೇಹ ಸೋಮೇಶ್ವರ ಕೆರೆಯಲ್ಲಿ ಬುಧವಾರ ಬೆಳಗ್ಗೆ ಪತ್ತೆಯಾಗಿದೆ.
ಕೊಣಾಜೆ ಗ್ರಾಮದ ಮುಚ್ಚಿಲಕೋಡಿ ಮನೆ ನಿವಾಸಿ ದಿನೇಶ್ ಶೆಟ್ಟಿಗಾರ್ ಅವರ ಪುತ್ರ ವಿವೇಕ್ ಶೆಟ್ಟಿಗಾರ್ (32) ಮೃತ ವ್ಯಕ್ತಿಯಾಗಿದ್ದಾರೆ.
ವಿವೇಕ್ ಮಂಗಳೂರಿನ ಕದ್ರಿ ಸಮೀಪದ ಮೊರ್ಟಾಸ್ ಸಂಸ್ಥೆಯಲ್ಲಿ ಉದ್ಯೋಗದಲ್ಲಿದ್ದರು. ಅವರು ಪ್ರತಿದಿನ ಬೆಳಿಗ್ಗೆ ಸುಮಾರು 11 ಗಂಟೆಗೆ ಕೆಲಸಕ್ಕೆ ತೆರಳಿ ರಾತ್ರಿ 9 ಗಂಟೆಯ ವೇಳೆಗೆ ಮನೆಗೆ ವಾಪಸ್ಸಾಗುವುದು ರೂಢಿಯಾಗಿತ್ತು. ಮಾ. 9ರಂದು ಸಹ ಎಂದಿನಂತೆ ಕೆಲಸಕ್ಕೆ ತೆರಳಿದ್ದ ಅವರು ರಾತ್ರಿ ಸುಮಾರು 9.30ರ ವೇಳೆಗೆ ತಾಯಿಗೆ ದೂರವಾಣಿ ಮೂಲಕ ಸಂಪರ್ಕಿಸಿ ದೇವಸ್ಥಾನಕ್ಕೆ ಹೋಗುತ್ತಿರುವುದಾಗಿ ತಿಳಿಸಿ, ಮನೆಗೆ ಬರಲು ತಡವಾಗಬಹುದು, ತನ್ನಿಗಾಗಿ ಕಾಯಬೇಡಿ ಎಂದು ತಿಳಿಸಿದ್ದಾರೆ.
ಆದರೆ ರಾತ್ರಿ ತಡವಾದರೂ ಮನೆಗೆ ವಾಪಸ್ಸಾಗದ ಹಿನ್ನೆಲೆ ಕುಟುಂಬಸ್ಥರು ಅವರ ಮೊಬೈಲ್ಗೆ ಹಲವಾರು ಬಾರಿ ಕರೆ ಮಾಡಿದರೂ ಸಂಪರ್ಕ ಸಾಧ್ಯವಾಗಲಿಲ್ಲ. ಮರುದಿನ ಮಾ. 10ರಂದು ಸಹ ಮೊಬೈಲ್ ಸಂಪರ್ಕ ಲಭ್ಯವಾಗದೇ ಇದ್ದ ಕಾರಣ ಅವರು ಕೆಲಸ ಮಾಡುತ್ತಿದ್ದ ಕಂಪೆನಿಯನ್ನು ಸಂಪರ್ಕಿಸಿದಾಗ, ಸಂಸ್ಥೆ ಬಂದ್ ಆಗಿರುವುದಾಗಿ ತಿಳಿದುಬಂದಿತು. ಈ ಹಿನ್ನೆಲೆಯಲ್ಲಿ ಕೊಣಾಜೆ ಪೊಲೀಸ್ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಾಗಿತ್ತು.
ಇದೀಗ ಬುಧವಾರ ಬೆಳಗ್ಗೆ ಸೋಮೇಶ್ವರ ಕೆರೆಯಲ್ಲಿ ವಿವೇಕ್ ಶೆಟ್ಟಿಗಾರ್ ಅವರ ಮೃತದೇಹ ಪತ್ತೆಯಾಗಿದೆ. ಘಟನಾ ಸ್ಥಳದ ಸಮೀಪದಲ್ಲೇ ಸೋಮೇಶ್ವರ ರಥದ ಕೊಠಡಿ ಬಳಿ ಅವರ ಸ್ಕೂಟರ್ ನಿಲ್ಲಿಸಿದ್ದಲ್ಲದೆ, ಮೊಬೈಲ್ ಫೋನ್ ಮತ್ತು ಚಪ್ಪಲಿಗಳು ಅಲ್ಲೇ ಇರುವುದಾಗಿ ತಿಳಿದುಬಂದಿದೆ.
ವಿವೇಕ್ ಸುಮಾರು ಎಂಟು ತಿಂಗಳ ಹಿಂದೆ ಪತ್ನಿಯಿಂದ ವಿಚ್ಛೇದನ ಪಡೆದಿದ್ದರು ಎನ್ನಲಾಗಿದೆ. ಉಳ್ಳಾಲ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.







