ಸುಬ್ರಹ್ಮಣ್ಯ, ಮಾ. 11: ದೇಶದಲ್ಲಿ ಉಂಟಾಗಿರುವ ಗ್ಯಾಸ್ ಕೊರತೆ ರಾಜ್ಯದ ಶ್ರೀಮಂತ ದೇವಾಲಯಗಳಲ್ಲಿ ಒಂದಾದ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಕ್ಕೂ ಪರಿಣಾಮ ಬೀರಿದೆ. ಗ್ಯಾಸ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾದ ಹಿನ್ನೆಲೆಯಲ್ಲಿ ಮಾ.11ರ ಬುಧವಾರದಿಂದ ಬೆಳಗಿನ ಉಪಹಾರದಲ್ಲಿ ತಾತ್ಕಾಲಿಕ ಬದಲಾವಣೆ ಮಾಡಲಾಗಿದೆ.
ಸಾಮಾನ್ಯವಾಗಿ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಪ್ರತಿದಿನ ಬೆಳಿಗ್ಗೆ ವಿವಿಧ ಬಗೆಯ ಬಿಸಿ ಉಪಹಾರಗಳನ್ನು ಭಕ್ತರಿಗೆ ವಿತರಿಸಲಾಗುತ್ತಿತ್ತು. ಆದರೆ ಗ್ಯಾಸ್ ಪೂರೈಕೆ ಸಮಸ್ಯೆಯಿಂದಾಗಿ ಬೇಯಿಸಿದ ತಿನಿಸುಗಳ ಬದಲು ಅವಲಕ್ಕಿ ಹಾಗೂ ಮೊಸರು ವಿತರಣೆ ಮಾಡಲಾಗುತ್ತಿದೆ ಎಂದು ತಿಳಿದುಬಂದಿದೆ.
ಪ್ರಸ್ತುತ ದೇವಸ್ಥಾನದಲ್ಲಿ ಮುಂದಿನ ಮೂರು ದಿನಗಳಿಗೆ ಸಾಕಾಗುವಷ್ಟು ಗ್ಯಾಸ್ ಸಂಗ್ರಹವಿದೆ. ಆದರೆ ನಂತರವೂ ಪೂರೈಕೆ ಸರಿಯಾಗದಿದ್ದಲ್ಲಿ ಸಮಸ್ಯೆ ಎದುರಾಗುವ ಸಾಧ್ಯತೆ ಇದೆ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಪ್ರತಿದಿನ 20 ಸಿಲಿಂಡರ್ ಗ್ಯಾಸ್ ಪೂರೈಕೆ ಮಾಡುವಂತೆ ಸಂಬಂಧಿತ ಗ್ಯಾಸ್ ಪೂರೈಕೆ ಸಂಸ್ಥೆಗೆ ದೇವಸ್ಥಾನದ ಆಡಳಿತ ಮಂಡಳಿ ಪತ್ರ ಬರೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇನ್ನೂ ಗ್ಯಾಸ್ ಪೂರೈಕೆ ಸರಿಯಾಗದಿದ್ದಲ್ಲಿ ಮಧ್ಯಾಹ್ನದ ಭೋಜನ ಪ್ರಸಾದ ವಿತರಣೆಯಲ್ಲೂ ಕೆಲವು ಬದಲಾವಣೆ ಮಾಡುವ ಕುರಿತು ಚಿಂತನೆ ನಡೆಯುತ್ತಿದೆ. ಬದಲಾವಣೆ ಮಾಡುವ ನಿರ್ಧಾರ ಕೈಗೊಳ್ಳುವದಾದರೆ ದೇವಸ್ಥಾನದ ವತಿಯಿಂದ ಅಧಿಕೃತ ಮಾಹಿತಿ ನೀಡಲಾಗುವುದು ಎಂದು ತಿಳಿದುಬಂದಿದೆ.







