ಕುಂದಾಪುರ, ಮಾ. 11: ಹೆಮ್ಮಾಡಿ ಸಮೀಪದ ಕಬೈಲು ಎಂಬಲ್ಲಿ ಇರುವ ಮನೆಯೊಂದರಲ್ಲಿ ಕನ್ಯಾನ ಗ್ರಾಮದ ಕೊರಗ ಸಮುದಾಯದ ನಾಗ (65) ಅವರನ್ನು ಸುಮಾರು 30 ವರ್ಷಗಳ ಕಾಲ ಜೀತದಾಳಾಗಿ ದುಡಿಸಿಕೊಳ್ಳುತ್ತಾ ಸಂಬಳ ನೀಡದೆ ಹಿಂಸೆ ನೀಡಿದ ಪ್ರಕರಣ ಇದೀಗ ಬೆಳಕಿಗೆ ಬಂದಿದೆ.
ಈ ಸಂಬಂಧ ಹೆಮ್ಮಾಡಿಯ ಕಸ್ಟೈಲ್ ಪ್ರದೇಶದ ಸುಬ್ಬಣ್ಣ ಶೆಟ್ಟಿ ಹಾಗೂ ಅವರ ನಿಧನದ ನಂತರ ಪುತ್ರಿ ರಜನಿ ಶೆಟ್ಟಿ ಮತ್ತು ಪತಿ ಕರುಣಾಕರ ಶೆಟ್ಟಿ ವಿರುದ್ಧ ದೂರು ನೀಡಲಾಗಿದ್ದು, ಅದರ ಆಧಾರದಲ್ಲಿ ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕೊಟ್ಟಿಗೆಯಲ್ಲೇ ವಾಸಕ್ಕೆ ಒತ್ತಾಯ
ನಾಗ ಅವರು ದನ ಕಾಯುವ ಕೆಲಸ ಹಾಗೂ ತೋಟದ ವಿವಿಧ ಕೆಲಸಗಳಿಗಾಗಿ ಈ ಮನೆಗೆ ಸೇರಿಕೊಂಡಿದ್ದು, ದನ-ಎಮ್ಮೆಗಳ ಸೆಗಣಿ ತೆಗೆದುಹಾಕುವುದು, ಮನೆಯ ಶೌಚಾಲಯ ಸ್ವಚ್ಛತೆ ಸೇರಿದಂತೆ ವಿವಿಧ ಕೆಲಸಗಳನ್ನು ಮಾಡಿಸಿಕೊಳ್ಳಲಾಗುತ್ತಿತ್ತು. ಅವರಿಗೆ ವಾಸಿಸಲು ದನಗಳ ಕೊಟ್ಟಿಗೆಯನ್ನೇ ನೀಡಲಾಗಿದ್ದು, ಊಟ, ಪಾತ್ರೆ, ಬಟ್ಟೆ ಇತ್ಯಾದಿಗಳನ್ನು ಅಲ್ಲಿಯೇ ಇಡಬೇಕೆಂದು ಹೇಳಲಾಗುತ್ತಿತ್ತು. ಊಟವನ್ನೂ ಬಾಳೆ ಎಲೆಯಲ್ಲಿ ಕೊಟ್ಟಿಗೆಯಲ್ಲಿಯೇ ಸೇವಿಸುವಂತೆ ಒತ್ತಾಯಿಸಲಾಗುತ್ತಿತ್ತಂತೆ. ಸುಮಾರು ಮೂರು ದಶಕಗಳಿಂದ ಅವರನ್ನು ಬಲವಂತವಾಗಿ ಜೀತದಾಳಾಗಿ ದುಡಿಸಿಕೊಳ್ಳುತ್ತಾ ಹಿಂಸೆ ನೀಡಲಾಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.







