ಮಂಗಳೂರು, ಮಾ. 11: ಪೇಟಾ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ವಜಾಗೊಳಿಸಿ ಕಂಬಳ ಕ್ರೀಡೆಗೆ ಬೆಂಬಲ ವ್ಯಕ್ತಪಡಿಸಿರುವುದು ಕರಾವಳಿ ಭಾಗದ ರೈತ ಸಮುದಾಯದಲ್ಲಿ ಸಂತೋಷ ಮೂಡಿಸಿದೆ ಎಂದು ರಾಜ್ಯ ಕಂಬಳ ಅಸೋಸಿಯೇಷನ್ ಅಧ್ಯಕ್ಷ ಬೆಳಪು ದೇವೀಪ್ರಸಾದ್ ಶೆಟ್ಟಿ ತಿಳಿಸಿದ್ದಾರೆ.
ದೇಶದ ಯಾವುದೇ ಭಾಗದಲ್ಲಿಯೂ ಸಂಸ್ಕೃತಿ ಹಾಗೂ ಸಾಂಪ್ರದಾಯಿಕ ಕ್ರೀಡೆಗಳನ್ನು ನಡೆಸುವ ಹಕ್ಕು ಇದೆ ಎಂದು ಸುಪ್ರೀಂ ಕೋರ್ಟ್ ಸ್ಪಷ್ಟಪಡಿಸಿದೆ. ಈ ತೀರ್ಪಿನೊಂದಿಗೆ ಕಂಬಳ ಕ್ರೀಡೆಗೆ ಮತ್ತಷ್ಟು ಮಾನ್ಯತೆ ದೊರೆತಂತಾಗಿದೆ ಎಂದು ಅವರು ಹೇಳಿದರು.
ಕಂಬಳವನ್ನು ಮೈಸೂರು, ಬೆಂಗಳೂರು, ಶಿವಮೊಗ್ಗ, ಹಾಸನ, ಉತ್ತರ ಕನ್ನಡ ಸೇರಿದಂತೆ ಮುಂಬೈ ಪ್ರದೇಶಗಳಲ್ಲಿಯೂ ಆಯೋಜಿಸುವಂತೆ ಬೇಡಿಕೆಗಳು ಬಂದಿವೆ. ನ್ಯಾಯಾಲಯದ ತೀರ್ಪಿನ ಬೆಳಕಿನಲ್ಲಿ ಈ ಬಗ್ಗೆ ಚರ್ಚಿಸಿ ಮುಂದಿನ ನಿರ್ಧಾರ ಕೈಗೊಳ್ಳಲಾಗುವುದು ಎಂದು ದೇವೀಪ್ರಸಾದ್ ಶೆಟ್ಟಿ ತಿಳಿಸಿದ್ದಾರೆ.
ಇದೇ ವೇಳೆ, ಕಂಬಳವು ತನ್ನ ಮೂಲ ಪರಂಪರೆಯೊಂದಿಗೆ ವಿಶ್ವ ಮಟ್ಟದಲ್ಲಿ ಗುರುತಿಸಿಕೊಳ್ಳುವ ಕನಸಿಗೆ ಸುಪ್ರೀಂ ಕೋರ್ಟ್ ತೀರ್ಪು ಬಲ ನೀಡಿದೆ ಎಂದು ಹಿರಿಯ ಕಂಬಳ ತಜ್ಞ ಗುಣಪಾಲ ಕಡಂಬ ಅಭಿಪ್ರಾಯಪಟ್ಟಿದ್ದಾರೆ.







