ಕಾರ್ಕಳ: ರಾಷ್ಟ್ರೀಯ ಹೆದ್ದಾರಿ–169ರ ಮುರತಂಗಡಿ ಸರ್ವಿಸ್ ರಸ್ತೆಯಲ್ಲಿ ಕಳೆದ 20 ದಿನಗಳಿಂದ ಅಗೆದಿರುವ ರಸ್ತೆ ಮುಚ್ಚದೆ ಬಿಟ್ಟಿರುವುದರಿಂದ ಸ್ಥಳೀಯ ನಾಗರಿಕರು ಹಾಗೂ ವಾಹನ ಸವಾರರು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ.
ಮುರತಂಗಡಿ ಸರ್ವಿಸ್ ರಸ್ತೆಯ ಚೈನೇಜ್ 694.700ರಲ್ಲಿ, ಬ್ಯಾಂಕ್ ಆಫ್ ಬರೋಡಾ ಶಾಖೆಯ ಎದುರು ಕುಡಿಯುವ ನೀರಿನ ಎಚ್ಡಿ ಪೈಪ್ಲೈನ್ ದುರಸ್ತಿಗಾಗಿ ಜೆಸಿಬಿ ಯಂತ್ರದ ಸಹಾಯದಿಂದ ರಸ್ತೆ ಅಗೆದಲಾಗಿತ್ತು. ಪೈಪ್ಲೈನ್ ದುರಸ್ತಿ ಕೆಲಸ ಪೂರ್ಣಗೊಂಡಿದ್ದರೂ, ಅಗೆದಿರುವ ಮಣ್ಣನ್ನು ಇನ್ನೂ ಮುಚ್ಚದೆ ಬಿಟ್ಟಿರುವುದರಿಂದ ವಾಹನ ಸಂಚಾರ ಮತ್ತು ಸಾರ್ವಜನಿಕರ ಓಡಾಟಕ್ಕೆ ತೀವ್ರ ಅಡಚಣೆ ಉಂಟಾಗಿದೆ.
ಖಾಸಗಿ ಜಾಗಕ್ಕೆ ಹೋಗುವ ರಸ್ತೆಯ ಎದುರಲ್ಲಿಯೇ ಅಗೆದಿರುವುದರಿಂದ ಮನೆಗಳಿಗೆ ವಾಹನಗಳು ಹೋಗಲು ಸಾಧ್ಯವಾಗದೇ ನಿವಾಸಿಗಳು ಸಂಕಷ್ಟ ಅನುಭವಿಸುತ್ತಿದ್ದಾರೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ಈ ಕುರಿತು ದಿಲೀಪ್ ಬಿಲ್ಡ್ ಕನ್ ಸಂಸ್ಥೆಯ ಮ್ಯಾನೇಜರ್ ಬಾಲಾಜಿ ಅವರಿಗೆ ಮಾಹಿತಿ ನೀಡಿದರೂ ಇದುವರೆಗೆ ಯಾವುದೇ ಕ್ರಮ ಕೈಗೊಳ್ಳಲಾಗಿಲ್ಲ ಎಂದು ನಾಗರಿಕರು ತಿಳಿಸಿದ್ದಾರೆ.
ಇದಲ್ಲದೆ ಸುಮಾರು 800 ಮೀಟರ್ ಉದ್ದದ ಸರ್ವಿಸ್ ರಸ್ತೆಗೆ ಕೇವಲ ಜಲ್ಲಿ ಹಾಕಿ ಎರಡು ತಿಂಗಳುಗಳಾದರೂ ಇನ್ನೂ ಡಾಮರೀಕರಣ ಮಾಡದಿರುವುದಕ್ಕೆ ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ತಕ್ಷಣ ಅಗೆದಿರುವ ರಸ್ತೆಯನ್ನು ಮಣ್ಣು ತುಂಬಿ ಸರಿಪಡಿಸಿ, ಸರ್ವಿಸ್ ರಸ್ತೆಯನ್ನು ಡಾಮರೀಕರಣ ಮಾಡಬೇಕು. ಇಲ್ಲವಾದರೆ ಸ್ಥಳೀಯರು ರಸ್ತೆಗಿಳಿದು ತೀವ್ರ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ರಾಷ್ಟ್ರೀಯ ಹೆದ್ದಾರಿ ಹೋರಾಟ ಸಮಿತಿಯ ಪ್ರಮುಖರಾದ ಸಾಣೂರು ನರಸಿಂಹ ಕಾಮತ್ ಎಚ್ಚರಿಕೆ ನೀಡಿದ್ದಾರೆ.







