ಉಡುಪಿ, ಮಾ. 08: ಉಡುಪಿ ತಾಲೂಕಿನ ಉಪ್ಪೂರು ಗ್ರಾಮದ ಪಿಳ್ಕಳ ಗರಡಿಯಲ್ಲಿ ಇರುವ ಶ್ರೀ ನಾಗದೇವರ ಬನದಲ್ಲಿ ಮಾರ್ಚ್ 9ರಿಂದ 12ರವರೆಗೆ ಭಕ್ತಿಭಾವಪೂರ್ಣವಾಗಿ “ಚತುಃ ಪವಿತ್ರ ನಾಗಮಂಡಲೋತ್ಸವ” ಕಾರ್ಯಕ್ರಮ ನಡೆಯಲಿದೆ.
ಶ್ರೀಮತಿ ಹಾಗೂ ಶ್ರೀ ಗೋಪಿ ರಾಮ ಪೂಜಾರಿ ಮತ್ತು ಕುಟುಂಬಸ್ಥರ ಸೇವಾರ್ಥವಾಗಿ ಈ ಮಹೋತ್ಸವವನ್ನು ಆಯೋಜಿಸಲಾಗಿದ್ದು, ಗ್ರಾಮ ದೇವರ ಕೃಪೆಯಿಂದ ಹಾಗೂ ಕುಟುಂಬದ ದೈವ-ದೇವತೆಗಳ ಆಶೀರ್ವಾದದೊಂದಿಗೆ ಕಾರ್ಯಕ್ರಮ ನಡೆಯಲಿದೆ. ಕುಕ್ಕೆ ಶ್ರೀ ಸುಬ್ರಹ್ಮಣ್ಯ ಮಠದ ಪರಮಪೂಜ್ಯ ಶ್ರೀ ಶ್ರೀ ಶ್ರೀ ವಿದ್ಯಾಪ್ರಸನ್ನ ತೀರ್ಥ ಶ್ರೀಪಾದರ ಆಶೀರ್ವಾದದೊಂದಿಗೆ ಉಪ್ಪರು ಶ್ರೀ ಪದ್ಮನಾಭ ಐತಾಳ ಅವರ ಆಚಾರ್ಯತ್ವದಲ್ಲಿ, ಶ್ರೀಮತಿ ಮತ್ತು ಶ್ರೀ ಸುರೇಶ್ ಮಧ್ಯಸ್ಥ ಕುಟುಂಬಸ್ಥರ ಸಹಭಾಗಿತ್ವದಲ್ಲಿ ಸಕಲ ಧಾರ್ಮಿಕ ವಿಧಿವಿಧಾನಗಳೊಂದಿಗೆ ಶ್ರೀ ವಾಸುಕೀ ಮಹಾನಾಗರಾಜ ದೇವರಿಗೆ ಸಮರ್ಪಿಸಲಾಗುತ್ತಿದೆ.
ನಾಗಪಾತ್ರಿ ಕಲ್ಲಂಗಳದ ಶ್ರೀ ಬಿ.ಎನ್. ರಾಮಚಂದ್ರ ಕುಂಜಿತ್ತಾಯ ಅವರ ಮಾರ್ಗದರ್ಶನದಲ್ಲಿ ಶ್ರೀ ಕೃಷ್ಣ ಪ್ರಸಾದ ವೈದ್ಯ ಮತ್ತು ಬಳಗ ಮುದ್ದೂರು ನಾಗಕನ್ನಿಕೆಯರಾಗಿ ಸೇವೆ ಸಲ್ಲಿಸಲಿದ್ದು, ಶ್ರೀ ಬಾಲಕೃಷ್ಣ ವೈದ್ಯ ಹಾಗೂ ನಟರಾಜ ವೈದ್ಯ ಸಹಕರಿಸಲಿದ್ದಾರೆ. ಶ್ರೀ ನಾಗರಾಜ್ ಭಟ್ ಮಾರ್ಪಳ್ಳಿ (ಉಡುಪಿ) ಅವರ ಮಂಟಪ ಅಲಂಕಾರ ಮತ್ತು ಶ್ರೀ ವಾಮನ ಭಟ್ ಹಾರಕ್ಕಾರು ಅವರ ಪಾಕ ಪ್ರಾವಿಣ್ಯತೆಯೊಂದಿಗೆ ಮಹೋತ್ಸವ ನಡೆಯಲಿದೆ.
ಮಾರ್ಚ್ 9ರಂದು ದೇವತಾ ಪ್ರಾರ್ಥನೆ, ಸ್ಥಳ ಶುದ್ಧಿ, ವಾಸ್ತು ಪೂಜೆ, ವಾಸ್ತು ಬಲಿ ಸೇರಿದಂತೆ ವಿವಿಧ ಧಾರ್ಮಿಕ ವಿಧಿವಿಧಾನಗಳೊಂದಿಗೆ ಕಾರ್ಯಕ್ರಮ ಆರಂಭವಾಗಲಿದೆ. ಮಾರ್ಚ್ 10ರಂದು ಗಣಹೋಮ, ಉಗ್ರಾಣ ಮುಹೂರ್ತ, ಪವಮಾನ ಹೋಮ, ಕೂಷ್ಮಾಂಡ ಹೋಮ, ತಿಲಹೋಮ, ಬ್ರಾಹ್ಮಣ ಆರಾಧನೆ ಮತ್ತು ವಟು ಆರಾಧನೆ ನಡೆಯಲಿದೆ. ಮಧ್ಯಾಹ್ನ 3 ಗಂಟೆಗೆ ಪುತ್ತೂರಿನ ಶ್ರೀ ಭಗವತಿ ದುರ್ಗಾಪರಮೇಶ್ವರಿ ದೇವಸ್ಥಾನದಿಂದ ಹೊರೆಕಾಣಿಕೆ ಹೊರಟು ಪಿಳ್ಕಳ ಗರಡಿ ತಲುಪಲಿದ್ದು, ಬಳಿಕ ಕನ್ನಿಕಾ ಆರಾಧನೆ ನಡೆಯಲಿದೆ. ಸಂಜೆ ದುರ್ಗಾ ನಮಸ್ಕಾರ ಪೂಜೆ ಹಾಗೂ ಸುವಾಸಿನಿ ಆರಾಧನೆ ನಡೆಯಲಿದೆ.
ಮಾರ್ಚ್ 11ರಂದು ಗಣಹೋಮ, 48 ಕಲಶ ಪ್ರತಿಷ್ಠಾ ಪೂರ್ವಕ ಪ್ರಧಾನ ಹೋಮ, ಸಪ್ತರಾತ್ರಿ ಮಂತ್ರ ಹೋಮ ಹಾಗೂ ಪಂಚಾಮೃತ ಪೂಜೆ ನಡೆಯಲಿದೆ. ಮಾರ್ಚ್ 12ರಂದು ಗಣಹೋಮ, ಅಲಂಕಾರ ಪೂಜೆ, ಮಹಾಪೂಜೆ, ನಾಗಮಂಡಲ ಹಾಗೂ ಭಜನಾ ಕಾರ್ಯಕ್ರಮಗಳು ನಡೆಯಲಿವೆ. ಸಂಜೆ ವಿಶೇಷ ಪೂಜೆ ಹಾಗೂ ಆಶೀರ್ವಚನ ನಡೆಯಲಿದ್ದು, ಬಳಿಕ ಹಾಲುಪಾಯಸ ಸೇವೆ, ನಾಗಮಂಡಲ ಪೂಜೆ ಮತ್ತು ಮಂಗಳ ಪ್ರಸಾದ ವಿತರಣೆ ನಡೆಯಲಿದೆ.
ಇದಲ್ಲದೆ ಮಾರ್ಚ್ 10ರಂದು ಸಂಜೆ “ಶ್ರೀ ಕ್ಷೇತ್ರ ಗೋಳಿ ಗರಡಿ ಮಹಾತ್ಮೆ” ಯಕ್ಷಗಾನ ಹಾಗೂ ಮಾರ್ಚ್ 11ರಂದು “ಶಿವದೂತ ಗುಳಿಗೆ” ತುಳು ನಾಟಕ ಪ್ರದರ್ಶನ ನಡೆಯಲಿದೆ.
ಈ ಧಾರ್ಮಿಕ ಕಾರ್ಯಕ್ರಮದಲ್ಲಿ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ದೇವರ ಕೃಪೆಗೆ ಪಾತ್ರರಾಗುವಂತೆ ಆಯೋಜಕರು ಮನವಿ ಮಾಡಿದ್ದಾರೆ.










