ಮಂಗಳೂರು, ಮಾ. 07: ಎಸ್ಎಸ್ಎಲ್ಸಿ ಪರೀಕ್ಷೆಯ ಉತ್ತರಪತ್ರಿಕೆಗಳ ಮೌಲ್ಯಮಾಪನ ಪ್ರಕ್ರಿಯೆಯನ್ನು ಇನ್ನಷ್ಟು ಪಾರದರ್ಶಕ ಹಾಗೂ ನಿಷ್ಪಕ್ಷಪಾತಗೊಳಿಸಲು ಪ್ರೌಢಶಿಕ್ಷಣ ಮಂಡಳಿ ಹೊಸ ವ್ಯವಸ್ಥೆ ಜಾರಿಗೆ ತಂದಿದೆ.
ಈಗಿನಿಂದ ಮೌಲ್ಯಮಾಪಕರು ತಾವು ಪರಿಶೀಲಿಸುವ ಉತ್ತರಪತ್ರಿಕೆಗಳು ಯಾವ ಜಿಲ್ಲೆಯಿಂದ ಅಥವಾ ಯಾವ ಪರೀಕ್ಷಾ ಕೇಂದ್ರದಿಂದ ಬಂದಿವೆ ಎಂಬ ಮಾಹಿತಿ ತಿಳಿಯುವುದಿಲ್ಲ. ಪರೀಕ್ಷಾ ಕೇಂದ್ರಗಳಿಂದ ಕಳುಹಿಸುವ ಉತ್ತರಪತ್ರಿಕೆಗಳ ಕಟ್ಟಿನ ಮೇಲೆ ‘ಸಂಕೇತ ಸಂಖ್ಯೆ’ ಮಾತ್ರ ಉಲ್ಲೇಖಿಸಲಾಗುತ್ತದೆ. ಇದಲ್ಲದೆ ಯಾವುದೇ ವಿವರ ಇರದು.
ಹಿಂದಿನ ವರ್ಷಗಳಲ್ಲಿ ಉತ್ತರಪತ್ರಿಕೆಗಳ ಕಟ್ಟಿನ ಮೇಲೆ ಪರೀಕ್ಷಾ ಕೇಂದ್ರದ ಹೆಸರು ಸೇರಿದಂತೆ ವಿವಿಧ ಮಾಹಿತಿಯನ್ನು ನಮೂದಿಸಿ ಕಸ್ಟೋಡಿಯನ್ ಸಹಿ ಹಾಗೂ ಮುದ್ರೆ ಹಾಕಲಾಗುತ್ತಿತ್ತು. ಇದರಿಂದ ಉತ್ತರಪತ್ರಿಕೆಗಳ ಮೂಲ ಜಿಲ್ಲೆ ಸೇರಿದಂತೆ ಕೆಲವು ವಿವರಗಳು ಮೌಲ್ಯಮಾಪಕರಿಗೆ ತಿಳಿಯುತ್ತಿದ್ದವು.
ಈ ಬಾರಿ ಹೊಸ ವ್ಯವಸ್ಥೆ
ಈ ಬಾರಿ ಪರೀಕ್ಷಾ ಕೇಂದ್ರದ ಮುಖ್ಯಸ್ಥರಿಗೆ ಪ್ರತಿಯೊಂದು ಪರೀಕ್ಷೆಯ ದಿನವೇ ಸಂಕೇತ ಸಂಖ್ಯೆಯನ್ನು ನೀಡಲಾಗುತ್ತದೆ. ಅವರು ಲಾಗಿನ್ ಆಗಿ ಆ ಸಂಖ್ಯೆಯನ್ನು ಪಡೆದು ಉತ್ತರಪತ್ರಿಕೆಗಳ ಕಟ್ಟಿನಲ್ಲಿ ದಾಖಲಿಸಬೇಕು. ಜೊತೆಗೆ ಪರೀಕ್ಷೆಯ ವಿಷಯ, ದಿನಾಂಕ, ಪರೀಕ್ಷೆಗೆ ಹಾಜರಾದ ವಿದ್ಯಾರ್ಥಿಗಳ ಸಂಖ್ಯೆ ಹಾಗೂ ಉತ್ತರಪತ್ರಿಕೆಗಳ ಒಟ್ಟು ಸಂಖ್ಯೆಯನ್ನು ಮಾತ್ರ ದಾಖಲಿಸಲು ಅವಕಾಶ ಇರುತ್ತದೆ.
ಈ ರೀತಿ ಸಿದ್ಧಪಡಿಸಿದ ಕಟ್ಟನ್ನು ರೂಟ್ ಅಧಿಕಾರಿಗೆ ಹಸ್ತಾಂತರಿಸಲಾಗುತ್ತದೆ. ಅವರು ಅದನ್ನು ಜಿಲ್ಲಾ ಕೇಂದ್ರಕ್ಕೆ ತಲುಪಿಸಿ ಸ್ಟ್ರಾಂಗ್ ರೂಮ್ನಲ್ಲಿ ಭದ್ರವಾಗಿ ಸಂಗ್ರಹಿಸಲಿದ್ದಾರೆ. ಎಲ್ಲ ಪರೀಕ್ಷೆಗಳು ಮುಗಿದ ಬಳಿಕ ಇಲಾಖೆಯ ಸೂಚನೆಯಂತೆ ಈ ಕಟ್ಟನ್ನು ಮೌಲ್ಯಮಾಪನ ಕೇಂದ್ರಗಳಿಗೆ ರವಾನಿಸಲಾಗುತ್ತದೆ.
ಪರೀಕ್ಷಾ ಫಲಿತಾಂಶ ಪ್ರಕಟವಾದ ಬಳಿಕ ಕೆಲವು ಸಂದರ್ಭಗಳಲ್ಲಿ ಮೌಲ್ಯಮಾಪನದ ಕುರಿತು ಆಕ್ಷೇಪಗಳು ಕೇಳಿಬರುತ್ತಿದ್ದವು. ಯಾವ ಜಿಲ್ಲೆಯ ಉತ್ತರಪತ್ರಿಕೆ ಯಾವ ಜಿಲ್ಲೆಗೆ ಹೋಗಿದೆ ಎಂಬ ಮಾಹಿತಿ ತಿಳಿದಿದ್ದ ಕಾರಣ ಈ ರೀತಿಯ ಅನುಮಾನಗಳು ಉಂಟಾಗುತ್ತವೆ ಎಂಬ ಅಭಿಪ್ರಾಯ ವ್ಯಕ್ತವಾಗಿತ್ತು.
ಈ ಹಿನ್ನೆಲೆ ಈ ಬಾರಿ ಉತ್ತರಪತ್ರಿಕೆಗಳ ಕಟ್ಟಿನಲ್ಲಿ ಯಾವುದೇ ಜಿಲ್ಲೆ ಅಥವಾ ಇತರ ವಿವರಗಳನ್ನು ಬರೆಯಬಾರದು ಎಂದು ಇಲಾಖೆ ಸೂಚನೆ ನೀಡಿದೆ. ಸಂಕೇತ ಸಂಖ್ಯೆ ಮಾತ್ರ ನಮೂದಿಸಲಾಗುತ್ತದೆ ಎಂದು ದಕ್ಷಿಣ ಕನ್ನಡ ಜಿಲ್ಲೆಯ ಡಿಡಿಪಿಐ ಶಶಿಧರ್ ತಿಳಿಸಿದ್ದಾರೆ.
ಅಂಚೆ ಮೂಲಕ ಕಳುಹಿಸುವ ಯೋಜನೆ ಕೈಬಿಟ್ಟು
ದ್ವಿತೀಯ ಪಿಯು ಪರೀಕ್ಷೆಯಂತೆ ಎಸ್ಎಸ್ಎಲ್ಸಿ ಉತ್ತರಪತ್ರಿಕೆಗಳನ್ನೂ ಅಂಚೆ ಮೂಲಕ ಮೌಲ್ಯಮಾಪನ ಕೇಂದ್ರಗಳಿಗೆ ಕಳುಹಿಸುವ ಬಗ್ಗೆ ಇಲಾಖೆ ಆಲೋಚನೆ ನಡೆಸಿತ್ತು. ಆದರೆ ಹೆಚ್ಚಿನ ವೆಚ್ಚ ಹಾಗೂ ಅಂತಿಮ ಹಂತದಲ್ಲಿ ಎದುರಾಗುವ ತೊಂದರೆಗಳ ಕಾರಣ ಈ ಯೋಜನೆಯನ್ನು ಕೈಬಿಡಲಾಗಿದೆ.
ಪ್ರಸ್ತುತ ದ್ವಿತೀಯ ಪಿಯು ಉತ್ತರಪತ್ರಿಕೆಗಳನ್ನು ಪರೀಕ್ಷಾ ಕೇಂದ್ರದ ಸಮೀಪದ ತಾಲೂಕು ಕೇಂದ್ರದಲ್ಲಿರುವ ಅಂಚೆ ಕಚೇರಿ ಮೂಲಕ ಕಳುಹಿಸಲಾಗುತ್ತದೆ. ಕಳೆದ ವರ್ಷದಿಂದ ಆ ಕಟ್ಟಿನ ಮೇಲೂ ಜಿಲ್ಲೆಯ ಹೆಸರು ಸೇರಿದಂತೆ ಯಾವುದೇ ವಿವರಗಳನ್ನು ನಮೂದಿಸುವ ಪದ್ಧತಿ ಇಲ್ಲ.







