ಕಾಪು, ಮಾ. 07: ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಉಳಿಯಾರಗೋಳಿ ಸಮೀಪದ ದಂಡತೀರ್ಥ ಮತ್ತು ಕೋತಲಕಟ್ಟೆ ಭಾಗಗಳಲ್ಲಿ ಕೇವಲ ಹದಿನೈದು ನಿಮಿಷಗಳ ಅಂತರದಲ್ಲಿ ಸಂಭವಿಸಿದ ಎರಡು ಪ್ರತ್ಯೇಕ ರಸ್ತೆ ಅಪಘಾತಗಳಲ್ಲಿ ನಾಲ್ಕು ವಾಹನಗಳು ಹಾನಿಗೊಳಗಾಗಿದ್ದು, ಶಾಲಾ ಬಾಲಕನೂ ಸೇರಿದಂತೆ ಮೂವರು ಗಾಯಗೊಂಡ ಘಟನೆ ಶುಕ್ರವಾರ ಸಂಜೆ ನಡೆದಿದೆ.
ದಂಡತೀರ್ಥದ ಬಳಿ ಬೈಕ್ ಒಂದು ಕಾರಿಗೆ ಢಿಕ್ಕಿ ಹೊಡೆದ ಪರಿಣಾಮ ನಿಯಂತ್ರಣ ತಪ್ಪಿದ ಬೈಕ್ ಪ್ಲೇ ಸ್ಕೂಲ್ನಿಂದ ಮಗುವನ್ನು ಕರೆದುಕೊಂಡು ಹೋಗಲು ಬಸ್ಗಾಗಿ ಕಾಯುತ್ತಿದ್ದ ತಾಯಿ-ಮಗುವಿನತ್ತ ದೌಡಾಯಿಸಿದೆ. ಈ ವೇಳೆ ಸ್ಥಳೀಯ ಶಾಲೆಯ ಎಲ್ಕೆಜಿ ವಿದ್ಯಾರ್ಥಿ ಗೌರವ್ ಹಾಗೂ ಬೈಕ್ ಸವಾರರಾದ ಪಶು ಸಂಜೀವಿನಿ ಸಿಬ್ಬಂದಿ ಮಹೇಶ್ ಗಂಭೀರವಾಗಿ ಗಾಯಗೊಂಡಿದ್ದಾರೆ. ಸ್ಥಳೀಯರು ತಕ್ಷಣವೇ ಗಾಯಾಳುಗಳನ್ನು ಉಡುಪಿ ಆಸ್ಪತ್ರೆಗೆ ಸಾಗಿಸಿದ್ದು, ಅಪಘಾತದಲ್ಲಿ ಕಾರು ಹಾಗೂ ಬೈಕ್ ಹಾನಿಗೊಂಡಿವೆ.
ಇನ್ನೊಂದು ಘಟನೆಯು ಕೋತಲಕಟ್ಟೆ ಬಳಿ ಸಂಭವಿಸಿದ್ದು, ಉಡುಪಿಯತ್ತ ಸಾಗುತ್ತಿದ್ದ ಕಾರು ಹಾಗೂ ರಿಕ್ಷಾ ಮುಖಾಮುಖಿ ಢಿಕ್ಕಿ ಹೊಡೆದುಕೊಂಡಿವೆ. ಪರಿಣಾಮವಾಗಿ ಎರಡೂ ವಾಹನಗಳು ಜಖಂಗೊಂಡಿದ್ದು, ರಿಕ್ಷಾ ಚಾಲಕನ ತಲೆಗೆ ಗಾಯವಾಗಿದೆ. ಢಿಕ್ಕಿಯ ತೀವ್ರತೆಗೆ ರಿಕ್ಷಾ ರಸ್ತೆಗೆ ಬಿದ್ದು ಅದರಲ್ಲಿದ್ದ ಮಾವಿನಕಾಯಿಗಳು ರಸ್ತೆ ತುಂಬ ಚೆಲ್ಲಾಪಿಲ್ಲಿಯಾಗಿವೆ. ಗಾಯಾಳುವನ್ನು ಉಡುಪಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಘಟನೆ ಕುರಿತು ಕಾಪು ಪೊಲೀಸರು ಎರಡೂ ಸ್ಥಳಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.







