ಮೂಡುಬಿದಿರೆ, ಮಾ.05 : ಬಸ್ಸಿನಲ್ಲಿ ಸಿಕ್ಕ ಸುಮಾರು ₹3 ಲಕ್ಷ ಮೌಲ್ಯದ ಚಿನ್ನದ ಸರವನ್ನು ಅದರ ನಿಜವಾದ ಮಾಲೀಕಿಗೆ ಹಿಂತಿರುಗಿಸಿ ಬಸ್ ಕಂಡಕ್ಟರ್ ಒಬ್ಬರು ಪ್ರಾಮಾಣಿಕತೆ ಮೆರೆದ ಘಟನೆ ಮೂಡುಬಿದಿರೆಯಲ್ಲಿ ನಡೆದಿದೆ.
ವಿಶಾಲ್ ಮೋಟರ್ಸ್ ಬಸ್ಸಿನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಕಂಡಕ್ಟರ್ ರಾಜೇಶ್ ಹೆಗ್ಡೆ ಅವರಿಗೆ ಪ್ರಯಾಣದ ವೇಳೆ ಬಸ್ಸಿನೊಳಗೆ ಚಿನ್ನದ ಸರ ದೊರೆತಿತ್ತು. ಇದನ್ನು ತಮ್ಮ ಬಳಿಯೇ ಇಟ್ಟುಕೊಳ್ಳದೆ ಅವರು ವಾಟ್ಸ್ಆಪ್ ಮೂಲಕ ಈ ಬಗ್ಗೆ ಮಾಹಿತಿ ಹಂಚಿಕೊಂಡಿದ್ದರು.
ಆ ಬಳಿಕ ಪರಿಶೀಲನೆ ನಡೆಸಿದಾಗ ಆ ಚಿನ್ನದ ಸರ ಕುಂದಾಪುರ ಮೂಲದ ನಿಟ್ಟೆ ಕಾಲೇಜಿನ ವಿದ್ಯಾರ್ಥಿನಿ ಸುಧೀಕ್ಷಾ ಅವರದ್ದಾಗಿರುವುದು ತಿಳಿದುಬಂತು. ಬಸ್ಸಿನಲ್ಲಿ ಪ್ರಯಾಣಿಸುವ ಸಂದರ್ಭದಲ್ಲೇ ಆಕೆ ಅಜಾಗರೂಕತೆಯಿಂದ ಸರವನ್ನು ಕಳೆದುಕೊಂಡಿದ್ದರು ಎಂದು ತಿಳಿದುಬಂದಿದೆ.
ಈ ಮಾಹಿತಿ ತಿಳಿದು ಸುಧೀಕ್ಷಾ ಅವರು ಸಂಪರ್ಕಿಸಿ, ಅಗತ್ಯ ವಿವರಗಳನ್ನು ನೀಡಿದ ಬಳಿಕ ಕಂಡಕ್ಟರ್ ರಾಜೇಶ್ ಹೆಗ್ಡೆ ಅವರಿಂದ ತಮ್ಮ ಚಿನ್ನದ ಸರವನ್ನು ಮರಳಿ ಪಡೆದುಕೊಂಡರು. ಈ ವೇಳೆ ಅವರ ಪ್ರಾಮಾಣಿಕತೆಗೆ ಕೃತಜ್ಞತೆ ವ್ಯಕ್ತಪಡಿಸಿದರು.
ಸುಮಾರು ₹3 ಲಕ್ಷ ಮೌಲ್ಯದ ಚಿನ್ನದ ಸರವನ್ನು ಯಾವುದೇ ಲಾಭದಾಸೆ ಇಲ್ಲದೆ ನಿಜವಾದ ಮಾಲೀಕಿಗೆ ಹಸ್ತಾಂತರಿಸಿದ ರಾಜೇಶ್ ಹೆಗ್ಡೆ ಅವರ ಪ್ರಾಮಾಣಿಕ ನಡೆಗೆ ಬಸ್ ಮಾಲೀಕರು ಹಾಗೂ ಸಾರ್ವಜನಿಕ ವಲಯದಿಂದ ಪ್ರಶಂಸೆ ವ್ಯಕ್ತವಾಗಿದೆ.







