ಕಡಬ, ಮಾ. 05: ಪತ್ನಿಯನ್ನು ಪ್ರೀತಿಸುತ್ತೇನೆ ಎಂದು ಹೇಳಿ ಪತಿಗೆ ಜೀವ ಬೆದರಿಕೆ ಹಾಕಿ ಚೂರಿಯಿಂದ ಇರಿದು ಕೊಲೆ ಯತ್ನ ನಡೆಸಿದ ಘಟನೆ ಪಡುಬಿದ್ರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಉತ್ತರ ಪ್ರದೇಶ ಮೂಲದ ರಾಕೇಶ್ ಮಿಶ್ರಾ (39) ಗಾಯಗೊಂಡವರು. ಅವರು ಇನ್ನಾ ಗ್ರಾಮದ ಆಶಾ ಶೆಟ್ಟಿ ಎಂಬವರ ಬಾಡಿಗೆ ಮನೆಯಲ್ಲಿ ಪಡುಬಿದ್ರಿಪತ್ನಿ ನಿಶಾ ಮಿಶ್ರಾ ಹಾಗೂ ಮೂವರು ಮಕ್ಕಳೊಂದಿಗೆ ವಾಸವಾಗಿದ್ದು, ಕಾಂಜರಕಟ್ಟೆಯ ಬೈಟ್ಪ್ಲೆಕ್ಸ್ ಕಂಪನಿಯಲ್ಲಿ 2018ರಿಂದ ಉದ್ಯೋಗದಲ್ಲಿದ್ದಾರೆ.
ಮಾ. 3ರ ರಾತ್ರಿ ಕೆಲಸ ಮುಗಿಸಿಕೊಂಡು ಬೈಕ್ನಲ್ಲಿ ಮನೆಗೆ ವಾಪಾಸಾಗುತ್ತಿದ್ದ ವೇಳೆ, ಮಂಜರಪಲ್ಕೆ ನಿವಾಸಿ ಮೋಹನಚಂದ್ರ (26) ರಾಕೇಶ್ ಮಿಶ್ರಾ ಅವರ ಬೈಕ್ನ್ನು ತಡೆದು ನಿಲ್ಲಿಸಿದ್ದಾನೆ. ಬಳಿಕ ತನ್ನ ಮೊಬೈಲ್ನಲ್ಲಿ ಮಿಶ್ರಾ ಅವರ ಪತ್ನಿಯ ಫೋಟೋ ತೋರಿಸಿ, “ನಿನ್ನ ಪತ್ನಿಯನ್ನು ನಾನು ಪ್ರೀತಿಸುತ್ತೇನೆ. ನೀನು ಆಕೆಯನ್ನು ಬಿಡಬೇಕು, ಇಲ್ಲದಿದ್ದರೆ ಜೀವಂತ ಬಿಡುವುದಿಲ್ಲ” ಎಂದು ಬೆದರಿಕೆ ಹಾಕಿದನೆಂದು ತಿಳಿದುಬಂದಿದೆ.
ಇದಕ್ಕೆ ಮಿಶ್ರಾ ವಿರೋಧ ವ್ಯಕ್ತಪಡಿಸಿ ಅಲ್ಲಿಂದ ಹೊರಡಲು ಪ್ರಯತ್ನಿಸಿದಾಗ, ಆರೋಪಿ ತನ್ನ ಬಳಿ ಇದ್ದ ಚೂರಿಯಿಂದ ಅವರ ಕುತ್ತಿಗೆ, ಎಡ ಕೆನ್ನೆಯ ಕೆಳಭಾಗ, ಎಡ ಪಕ್ಕೆಲುಬಿನ ಭಾಗ ಹಾಗೂ ಬಲ ಭುಜದ ಹಿಂಭಾಗಕ್ಕೆ ಇರಿದು ಕೊಲೆ ಯತ್ನ ನಡೆಸಿದ್ದಾನೆ ಎಂದು ತಿಳಿದುಬಂದಿದೆ.
ಗಾಯಗೊಂಡ ಮಿಶ್ರಾ ಬೈಕ್ನಲ್ಲಿ ಮನೆ ತಲುಪಿದ್ದು, ಬಳಿಕ ಅವರ ಪತ್ನಿ ನಿಶಾ ಮಿಶ್ರಾ ಉಡುಪಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಚಿಕಿತ್ಸೆ ಪಡೆದು ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಈ ಕುರಿತು ಪ್ರಕರಣ ದಾಖಲಿಸಿಕೊಂಡ ಪಡುಬಿದ್ರಿ ಪೊಲೀಸರು ತನಿಖೆ ಆರಂಭಿಸಿ, ಘಟನೆ ನಡೆದ ಕೆಲವೇ ಗಂಟೆಗಳಲ್ಲಿ ಆರೋಪಿ ಮೋಹನಚಂದ್ರನನ್ನು ಬಂಧಿಸಿ ವಶಕ್ಕೆ ಪಡೆದಿದ್ದಾರೆ. ಬಂಧನ ಪ್ರಕ್ರಿಯೆ ಪೂರ್ಣಗೊಳಿಸಿದ ಬಳಿಕ ಆರೋಪಿ ಮಾ.4ರಂದು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.





