ಮಂಗಳೂರು, ಮಾ. 05: ಗ್ರಾಹಕರೊಬ್ಬರ ಬ್ಯಾಂಕ್ ಖಾತೆಯಿಂದ ಅನಧಿಕೃತವಾಗಿ ಹಣ ವಿತ್ಡ್ರಾ ಮಾಡಿರುವ ಕುರಿತು ಕದ್ರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ದೂರು ನೀಡಿದ ವ್ಯಕ್ತಿ ಪಂಪ್ವೆಲ್ನ ಯೂನಿಯನ್ ಬ್ಯಾಂಕ್ ಶಾಖೆಯಲ್ಲಿ ಖಾತೆ ಹೊಂದಿದ್ದಾರೆ. ಫೆಬ್ರವರಿ 28ರಂದು ತನ್ನ ಮೊಬೈಲ್ನಲ್ಲಿದ್ದ ಸಿಮ್ ಕಾರ್ಡ್ ಕಾರ್ಯನಿರ್ವಹಿಸುತ್ತಿಲ್ಲ ಎಂಬುದು ಗಮನಕ್ಕೆ ಬಂದ ಹಿನ್ನೆಲೆಯಲ್ಲಿ ಅವರು ಏರ್ಟೆಲ್ ಕಚೇರಿಗೆ ತೆರಳಿ ಅದೇ ಸಂಖ್ಯೆಯ ಹೊಸ ಸಿಮ್ ಪಡೆದುಕೊಂಡಿದ್ದರು.
ಕಚೇರಿಯಲ್ಲಿ ತಿಳಿಸಿದಂತೆ ಸುಮಾರು ನಾಲ್ಕು ಗಂಟೆಗಳ ಬಳಿಕ ಆ ಸಿಮ್ ಅನ್ನು ಮೊಬೈಲ್ಗೆ ಅಳವಡಿಸಿ ಗೂಗಲ್ ಪೇ ಆಪ್ ಅನ್ನು ಆಕ್ಟಿವೇಟ್ ಮಾಡುವ ವೇಳೆ ಒಟಿಪಿ ಬಂದಿತ್ತು. ಆದರೆ ಆ ಒಟಿಪಿಯನ್ನು ಅವರು ಬಳಸಿಲ್ಲವೆಂದು ತಿಳಿಸಿದ್ದಾರೆ.
ಮಾರ್ಚ್ 2ರಂದು ಮುಂಜಾನೆ ವೇಳೆ ಅವರ ಮೊಬೈಲ್ಗೆ ಬ್ಯಾಂಕ್ ಖಾತೆಯಿಂದ ಹಂತ ಹಂತವಾಗಿ ಹಣ ಕಡಿತವಾಗಿರುವ ಕುರಿತು ಸಂದೇಶಗಳು ಬಂದಿದ್ದವು. ತಕ್ಷಣವೇ ಅವರು ಬ್ಯಾಂಕ್ಗೆ ಭೇಟಿ ನೀಡಿ ಖಾತೆಯನ್ನು ಸ್ಥಗಿತಗೊಳಿಸುವಂತೆ ಮನವಿ ಮಾಡಿದ್ದಾರೆ.
ಬಳಿಕ ಫೆಬ್ರವರಿ 27ರಿಂದ ಮಾರ್ಚ್ 2ರವರೆಗೆ ಬ್ಯಾಂಕ್ ಸ್ಟೇಟ್ಮೆಂಟ್ ಪಡೆದು ಪರಿಶೀಲಿಸಿದಾಗ, ಅವರ ಖಾತೆಯಿಂದ ಒಟ್ಟು 1.98 ಲಕ್ಷ ರೂ.ಗಳನ್ನು ಅನಧಿಕೃತವಾಗಿ ವಿತ್ಡ್ರಾ ಮಾಡಿರುವುದು ಬೆಳಕಿಗೆ ಬಂದಿದೆ. ಈ ಸಂಬಂಧ ಕದ್ರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ.






