ಉಡುಪಿ, ಫೆ.21: ಸಂಚಾರ ನಿಯಮ ಉಲ್ಲಂಘನೆ ಆರೋಪದ ಹೆಸರಿನಲ್ಲಿ ಹಣ ಪಾವತಿಸಲು ಒತ್ತಾಯಿಸಿದ ಸೈಬರ್ ವಂಚಕರ ಜಾಲಕ್ಕೆ ನ್ಯಾಯವಾದಿಯೊಬ್ಬರು ತಲೆಬಾಗದೇ, ಸಮಯೋಚಿತ ಕ್ರಮದಿಂದ ಪಾರಾದ ಘಟನೆ ಬೆಳಕಿಗೆ ಬಂದಿದೆ.
ಅವರ ಮೊಬೈಲ್ಗೆ ಕಾರಿನ ನೋಂದಣಿ ಸಂಖ್ಯೆಯನ್ನು ಉಲ್ಲೇಖಿಸಿ, 4 ಸಾವಿರ ರೂ. ದಂಡವನ್ನು ತಕ್ಷಣ ಪಾವತಿಸಬೇಕೆಂದು ಸಂದೇಶ ಬಂದಿತ್ತು. ಸಂದೇಶದ ವಿಶ್ವಾಸಾರ್ಹತೆ ಕುರಿತು ಅನುಮಾನಗೊಂಡ ಅವರು ತಮ್ಮ ಪುತ್ರನೊಂದಿಗೆ ಪರಿಶೀಲನೆ ನಡೆಸಿದಾಗ ಯಾವುದೇ ಸಂಚಾರ ನಿಯಮ ಉಲ್ಲಂಘನೆ ನಡೆದಿಲ್ಲ ಎಂಬುದು ಸ್ಪಷ್ಟವಾಯಿತು.
ಇದರಿಂದ ಶಂಕೆಗೊಂಡ ನ್ಯಾಯವಾದಿ ತಕ್ಷಣವೇ ತಮ್ಮ ಖಾತೆ ಇರುವ ಬ್ಯಾಂಕ್ ಶಾಖೆಗಳಿಗೆ ಸಂಪರ್ಕಿಸಿ, ಮುನ್ನೆಚ್ಚರಿಕಾ ಕ್ರಮವಾಗಿ ಖಾತೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸುವಂತೆ ವಿನಂತಿಸಿದರು. ಬ್ಯಾಂಕ್ ಅಧಿಕಾರಿಗಳು ಕೂಡಲೇ ಸ್ಪಂದಿಸಿ ಅಗತ್ಯ ಕ್ರಮ ಕೈಗೊಂಡರು.
ವಂಚಕರು ಕಳುಹಿಸಿದ ಲಿಂಕ್ ಪರಿಶೀಲಿಸಿದಾಗ ಅದು ‘ಎಪಿಕೆ’ ಫೈಲ್ ಆಗಿರುವುದು ತಿಳಿದುಬಂದಿದೆ. ಆ ಲಿಂಕ್ ತೆರೆಯಲಾಗಿದ್ದರೆ ಖಾತೆಯಿಂದ ಹಣ ಅನಧಿಕೃತವಾಗಿ ವರ್ಗಾವಣೆಯಾಗುವ ಸಾಧ್ಯತೆ ಇತ್ತೆಂದು ನ್ಯಾಯವಾದಿ ಆನಂದ ಮಡಿವಾಳ ತಿಳಿಸಿದ್ದಾರೆ.
ಸಾರ್ವಜನಿಕರು ಇಂತಹ ಸಂದೇಶಗಳಿಗೆ ತಕ್ಷಣ ಪ್ರತಿಕ್ರಿಯಿಸದೇ, ಮಾಹಿತಿಯನ್ನು ಪರಿಶೀಲಿಸಿ ಬ್ಯಾಂಕ್ ಹಾಗೂ ಸಂಬಂಧಿತ ಅಧಿಕಾರಿಗಳನ್ನು ಸಂಪರ್ಕಿಸುವಂತೆ ಅವರು ಮನವಿ ಮಾಡಿದ್ದಾರೆ.







