ಬಾಗಲಕೋಟೆ, ಫೆ. 20: ನಗರದಲ್ಲಿ ನಡೆದ ಶಿವಾಜಿ ಜಯಂತಿ ಭಾವಚಿತ್ರ ಮೆರವಣಿಗೆಯ ವೇಳೆ ಉಂಟಾದ ಕಲ್ಲು ಹಾಗೂ ಚಪ್ಪಲಿ ತೂರಾಟ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ಎಂಟು ಆರೋಪಿಗಳನ್ನು ಬಂಧಿಸಿದ್ದಾರೆ. ಪ್ರಕರಣದ ಕುರಿತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿದ್ಧಾರ್ಥ್ ಗೋಯಲ್ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.
ಬುಧವಾರ ಸಂಜೆ ಸಂಭವಿಸಿದ ಈ ಘಟನೆಯ ಕುರಿತು ಸುಮೋಟೋ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ. ಸಿಸಿಟಿವಿ ದೃಶ್ಯಾವಳಿಗಳ ಪರಿಶೀಲನೆಯ ಆಧಾರದಲ್ಲಿ ನವನಗರ ನಿವಾಸಿ ತನ್ವೀರ್ ಸೇರಿ ಒಟ್ಟು ಎಂಟು ಮಂದಿಯನ್ನು ಬಂಧಿಸಲಾಗಿದೆ. ತನ್ವೀರ್ ಹೊರತುಪಡಿಸಿ ಇತರರು ಕಲ್ಲು ತೂರಾಟದಲ್ಲಿ ನೇರವಾಗಿ ಭಾಗಿಯಾಗಿಲ್ಲ ಎಂದು ಆತನೇ ಒಪ್ಪಿಕೊಂಡಿರುವುದಾಗಿ ಎಸ್ಪಿ ತಿಳಿಸಿದ್ದಾರೆ.
ಘಟನೆ ಪೂರ್ವ ಯೋಜಿತವಾಗಿರಲಿಲ್ಲ ಮತ್ತು ಡಿಜೆ ಸಂಬಂಧಿತ ವಿಚಾರದಿಂದ ಗಲಾಟೆ ಉಂಟಾಗಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ. ರಾತ್ರಿ ಸುಮಾರು 10.06 ಗಂಟೆ ವೇಳೆಗೆ ಕಲ್ಲು ತೂರಾಟ ನಡೆದಿದ್ದು, ಈ ವೇಳೆ ಎಸ್ಪಿ ಸೇರಿದಂತೆ ಇಬ್ಬರು ಪೊಲೀಸ್ ಕಾನ್ಸ್ಟೇಬಲ್ಗಳಿಗೆ ಗಾಯಗಳಾಗಿವೆ.
ಮಸೀದಿಯೊಳಗಿನ ಶೂ ರ್ಯಾಕ್ ನಿರ್ಮಾಣಕ್ಕೆ ಬಳಸಿದ್ದ ಕಲ್ಲುಗಳನ್ನು ತೆಗೆದುಕೊಂಡು ತೂರಾಟ ನಡೆಸಲಾಗಿದೆ. ಮಸೀದಿಯೊಳಗೆ ರಾಡ್ ಅಥವಾ ಇತರೆ ಯಾವುದೇ ಅಸ್ತ್ರಗಳಿರಲಿಲ್ಲ ಎಂದು ಎಸ್ಪಿ ತಿಳಿಸಿದರು.
ಘಟನೆ ಹಿನ್ನೆಲೆ ಸಾರ್ವಜನಿಕ ಶಾಂತಿ ಕಾಪಾಡುವ ಉದ್ದೇಶದಿಂದ ಬಿಎನ್ಎಸ್ 163ರಡಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ನಗರದಲ್ಲಿ ಭದ್ರತಾ ಕ್ರಮಗಳನ್ನು ಕಟ್ಟು ನಿಟ್ಟಾಗಿ ಕೈಗೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.







