ಬೆಂಗಳೂರು, ಆಗಸ್ಟ್ 6:ಅಮೇರಿಕದ ಅರಿಜೋನಾ ರಾಜ್ಯದ ಫೀನಿಕ್ಸ್ ಮಹಾನಗರದಲ್ಲಿರುವ ಶ್ರೀ ವೆಂಕಟಕೃಷ್ಣ ಮಂದಿರದಲ್ಲಿ ವಿರಾಜಮಾನರಾಗಿರುವ ಶ್ರೀ ಪದ್ಮಾವತಿ ದೇವಿಗೆ, ಭಕ್ತರೊಬ್ಬರು ಸುಮಾರು ₹2 ಕೋಟಿ ಮೌಲ್ಯದ ಸ್ವರ್ಣ ಕಿರೀಟವನ್ನು ಸಮರ್ಪಿಸುತ್ತಿದ್ದಾರೆ.
ಈ ಕಿರೀಟವನ್ನು ಪರಮಪೂಜ್ಯ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರ ಜನ್ಮ ನಕ್ಷತ್ರದ ಶುಭಸಂದರ್ಭದಲ್ಲಿ, ಸೆಪ್ಟೆಂಬರ್ ತಿಂಗಳಲ್ಲಿ ನಡೆಯುವ ವಿಶೇಷ ಕಾರ್ಯಕ್ರಮದಲ್ಲಿ ದೇವಿಗೆ ಸಮರ್ಪಿಸಲಾಗುವುದು.
ಇಂದು ಬೆಂಗಳೂರಿನ ಗೋವರ್ಧನ ಕ್ಷೇತ್ರದಲ್ಲಿ, ಪರಮಪೂಜ್ಯ ಶ್ರೀಪಾದರು ಈ ಸ್ವರ್ಣ ಕಿರೀಟವನ್ನು ವಿಶೇಷ ಪೂಜೆಯೊಂದಿಗೆ ಬಾಲಕೃಷ್ಣನಿಗೆ ಸಮರ್ಪಿಸಿ, ಬಳಿಕ ಅದನ್ನು ಫೀನಿಕ್ಸ್ ಶ್ರೀ ವೆಂಕಟಕೃಷ್ಣ ಮಂದಿರದಲ್ಲಿ ಶ್ರೀ ಪದ್ಮಾವತಿ ದೇವಿಗೆ ಅರ್ಪಿಸುವ ಸಲುವಾಗಿ ಸಂಬಂಧಿತ ಭಕ್ತರಿಗೆ ಹಸ್ತಾಂತರಿಸಿದರು.

ಅಮೇರಿಕದಲ್ಲಿ ಪರಮಪೂಜ್ಯ ಶ್ರೀಪಾದರು ಸ್ಥಾಪಿಸಿರುವ ಹನ್ನೊಂದು ದೇವಸ್ಥಾನಗಳಲ್ಲಿ ಮೊದಲನೆಯದು ಹಾಗೂ 2000 ರಲ್ಲಿ ಸ್ಥಾಪನೆಯಾದ ಪ್ರಥಮ ದೇವಸ್ಥಾನ ಎಂಬ ಹೆಗ್ಗಳಿಕೆಗೆ ಫೀನಿಕ್ಸ್ನ ಶ್ರೀ ವೆಂಕಟಕೃಷ್ಣ ಮಂದಿರ ಪಾತ್ರವಾಗಿದೆ.
ಇಂದು ಈ ಕ್ಷೇತ್ರವು ಉತ್ತರ ಅಮೆರಿಕಾದ ಭಾರತೀಯರ ಪ್ರಮುಖ ಆಧ್ಯಾತ್ಮಿಕ ಕೇಂದ್ರಗಳಲ್ಲಿ ಒಂದಾಗಿ ಬೆಳೆಯುತ್ತಿದೆ
ಇದೇ ಕ್ಷೇತ್ರದಲ್ಲಿ ನಾಲ್ಕು ವರ್ಷಗಳ ಹಿಂದೆ ಶ್ರೀ ವೆಂಕಟೇಶ್ವರ ಸ್ವಾಮಿಗೆ ಸುಮಾರು ₹4 ಕೋಟಿ ಮೌಲ್ಯದ ಸ್ವರ್ಣ ಕಿರೀಟವನ್ನು ಭಕ್ತರು ಸಮರ್ಪಿಸಿದ್ದರು.
ಇದೀಗ ಶ್ರೀ ಪದ್ಮಾವತಿ ದೇವಿಗೆ ಸಮರ್ಪಿಸಲಾಗುತ್ತಿರುವ ಈ ಸ್ವರ್ಣ ಕಿರೀಟವು ಆ ಮಹತ್ವದ ಸೇವೆಯ ಮತ್ತೊಂದು ಸುವರ್ಣ ಅಧ್ಯಾಯವಾಗಿದೆ.
ಈ ಸೇವೆಯನ್ನು ಶ್ರೀಮಠದ ಭಕ್ತರೊಬ್ಬರು ಅಪಾರ ಭಕ್ತಿ, ಶ್ರದ್ಧೆ ಹಾಗೂ ಸಮರ್ಪಣಾಭಾವದಿಂದ ನೆರವೇರಿಸುತ್ತಿದ್ದು, ಶ್ರೀಮಠದ ವಿದೇಶಿ ಧಾರ್ಮಿಕ ಚಟುವಟಿಕೆಗಳ ಇತಿಹಾಸದಲ್ಲಿ ಇದೊಂದು ಮಹತ್ವದ ಮೈಲಿಗಲ್ಲಾಗಿದೆ.
ಇದಲ್ಲದೆ, ಫೀನಿಕ್ಸ್ ಶ್ರೀ ವೆಂಕಟಕೃಷ್ಣ ಕ್ಷೇತ್ರಕ್ಕಾಗಿ ಈಗಾಗಲೇ ನಾಲ್ಕು ಎಕರೆ ವಿಶಾಲ ಜಾಗವನ್ನು ಪಡೆದುಕೊಳ್ಳಲಾಗಿದ್ದು, ಪರಮಪೂಜ್ಯ ಶ್ರೀಪಾದರ ಶಿಷ್ಯರೂ, ಅಲ್ಲಿನ ಪ್ರಧಾನ ಅರ್ಚಕರೂ ಆದ ಶ್ರೀ ಕಿರಣ್ ಆಚಾರ್ಯ ಅವರ ನೇತೃತ್ವದಲ್ಲಿ ಆಗಮಶಾಸ್ತ್ರದ ನಿಯಮಾನುಸಾರ ಭವ್ಯ, ವೈಭವೋಪೇತ ಹಾಗೂ ಬೃಹತ್ ದೇವಸ್ಥಾನದ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದೆ.
ಮುಂಬರುವ ದಿನಗಳಲ್ಲಿ ಈ ಕ್ಷೇತ್ರವು ವಿಶ್ವದ ಪ್ರಮುಖ ವೈಷ್ಣವ ಆಧ್ಯಾತ್ಮಿಕ ಕೇಂದ್ರಗಳಲ್ಲಿ ಒಂದಾಗಿ ರೂಪುಗೊಳ್ಳುವ ನಿರೀಕ್ಷೆಯಿದೆ.
ಈ ಸಂದರ್ಭದಲ್ಲಿ ಶ್ರೀಮಠದ ಅಂತಾರಾಷ್ಟ್ರೀಯ ಕಾರ್ಯದರ್ಶಿಗಳಾದ ಶ್ರೀ ಪ್ರಸನ್ನಾಚಾರ್ಯರು,
ಗೋವರ್ಧನ ಕ್ಷೇತ್ರದ ವ್ಯವಸ್ಥಾಪಕರಾದ ಶ್ರೀ ಕುಂಜಾರರು, ಸುಗುಣ ಸಂಧ್ಯಾ ಗುರುಕುಲದ ಕಾರ್ಯದರ್ಶಿ ಶ್ರೀ ಅಭಿಷೇಕ್ ಹಾಗೂ ಅನೇಕ ಭಕ್ತರು ಉಪಸ್ಥಿತರಿದ್ದರು.






