ಉಡುಪಿ, ಫೆ. 19: “ಸುರಕ್ಷಿತ ತಟ – ಸಮೃದ್ಧ ಭಾರತ” ಎಂಬ ಘೋಷವಾಕ್ಯದೊಂದಿಗೆ ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆ (ಸಿಐಎಸ್ಎಫ್) ಹಮ್ಮಿಕೊಂಡಿರುವ ಕೋಸ್ಟಲ್ ಸೈಕ್ಲೋಥಾನ್–2026 ಬುಧವಾರ ಉಡುಪಿ ಜಿಲ್ಲೆ ಹಾದು ದಕ್ಷಿಣ ಕನ್ನಡದತ್ತ ಮುಂದುವರಿಯಿತು. ವಂದೇ ಮಾತರಂ ಗೀತೆಯ 150ನೇ ವರ್ಷಾಚರಣೆ ಅಂಗವಾಗಿ ಈ ರಾಷ್ಟ್ರೀಯ ಜಾಗೃತಿ ಅಭಿಯಾನ ಆಯೋಜಿಸಲಾಗಿದೆ.
ಒಟ್ಟು 130 ಸೈಕ್ಲಿಸ್ಟ್ಗಳು ಭಾಗವಹಿಸಿರುವ ಈ ಯಾತ್ರೆಯಲ್ಲಿ 65 ಮಂದಿ ಮಹಿಳೆಯರು ಸೇರಿದ್ದಾರೆ. ಎರಡು ತಂಡಗಳಾಗಿ ಕರಾವಳಿ ರಾಜ್ಯಗಳಲ್ಲಿ ಸೈಕಲ್ ಮೂಲಕ ಸಂಚರಿಸುತ್ತಿರುವುದಾಗಿ ಅಭಿಯಾನದ ಮುಖ್ಯಸ್ಥ ಹಾಗೂ ಸಿಐಎಸ್ಎಫ್ ಡೆಪ್ಯುಟಿ ಕಮಾಂಡೆಂಟ್ ಸಂದೀಪ್ ಚಕ್ರವರ್ತಿ ತಿಳಿಸಿದ್ದಾರೆ.
ಜ.28ರಂದು ಗುಜರಾತ್ನ ಲಖ್ಪತ್ ಮತ್ತು ಪಶ್ಚಿಮ ಬಂಗಾಳದ ಬಕ್ಖಾಲಿಯಿಂದ ಪ್ರಾರಂಭವಾದ ಸೈಕ್ಲೋಥಾನ್ 9 ರಾಜ್ಯಗಳಲ್ಲಿ 6,550 ಕಿ.ಮೀ.ಗೂ ಅಧಿಕ ದೂರ ಕ್ರಮಿಸಿ ಫೆ.22ರಂದು ಕೇರಳದ ಕೊಚ್ಚಿಯಲ್ಲಿ ಸಮಾಪ್ತಿಗೊಳ್ಳಲಿದೆ. ಗುಜರಾತ್ನಿಂದ ಪ್ರಾರಂಭವಾದ ಪಶ್ಚಿಮ ಕರಾವಳಿ ತಂಡ ಮಹಾರಾಷ್ಟ್ರ, ದಿಯು, ಗೋವಾ ದಾಟಿ ಉತ್ತರ ಕನ್ನಡ ಮೂಲಕ ಉಡುಪಿ ಜಿಲ್ಲೆಗೆ ಪ್ರವೇಶಿಸಿತು.
ಶಿರೂರಿನಿಂದ ಆರಂಭವಾದ ರ್ಯಾಲಿ ಬ್ರಹ್ಮಾವರ ತಲುಪಿದಾಗ ಬ್ರಹ್ಮಾವರ ಸ್ಪೋರ್ಟ್ಸ್ ಕ್ಲಬ್ ಪದಾಧಿಕಾರಿಗಳು ಹಾಗೂ ಎನ್ಸಿಸಿ ವಿದ್ಯಾರ್ಥಿಗಳು ಸ್ವಾಗತಿಸಿದರು. ಆಶ್ರಯ ಹೋಟೆಲ್ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಮತ್ತು ಯುವ ಸಬಲೀಕರಣ ಹಾಗೂ ಕ್ರೀಡಾ ಇಲಾಖೆ ಸಹಯೋಗದಲ್ಲಿ ಅಭಿನಂದನಾ ಮತ್ತು ಸಂವಾದ ಕಾರ್ಯಕ್ರಮ ನಡೆಯಿತು.
ಈ ವೇಳೆ ಮಾತನಾಡಿದ ಸಂದೀಪ್ ಚಕ್ರವರ್ತಿ, ಕರಾವಳಿ ಭದ್ರತೆ ಕುರಿತ ಜಾಗೃತಿ ಮೂಡಿಸುವುದರ ಜೊತೆಗೆ ಮಹಿಳಾ ಸಬಲೀಕರಣದ ಸಂದೇಶವನ್ನು ಜನರಿಗೆ ತಲುಪಿಸುವುದು ಅಭಿಯಾನದ ಉದ್ದೇಶ ಎಂದರು. ಜನರಿಂದ ಉತ್ತಮ ಸ್ಪಂದನೆ ವ್ಯಕ್ತವಾಗುತ್ತಿರುವುದಾಗಿ ತಿಳಿಸಿದರು.
ತ್ರಾಸಿ, ಕುಂದಾಪುರ, ಉಡುಪಿ, ಕಾಪು ಮಾರ್ಗವಾಗಿ ಹೆಜಮಾಡಿ ಮೂಲಕ ತಂಡ ದಕ್ಷಿಣ ಕನ್ನಡ ಜಿಲ್ಲೆ ಪ್ರವೇಶಿಸಿತು. ಕಾರ್ಯಕ್ರಮದಲ್ಲಿ ಸಿಐಎಸ್ಎಫ್ ಹಾಗೂ ಸ್ಥಳೀಯ ಸಂಘಟನೆಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು.







