ಬಂಟ್ವಾಳ, ಫೆ. 18 : ಆರಂಬೋಡಿ ಗ್ರಾಮದ ಉಪ್ಪಿರಕ್ಕೆ ಕೆಲಸಕ್ಕೆ ತೆರಳಿದ್ದ ಕರ್ಪೆ ಗ್ರಾಮದ ಯುವಕನೋರ್ವ ಯಕ್ಷಗಾನಕ್ಕೆ ಹೋಗುವುದಾಗಿ ತಿಳಿಸಿ ಬಳಿಕ ಮನೆಗೆ ಮರಳದೆ ನಾಪತ್ತೆಯಾಗಿರುವ ಘಟನೆ ಬೆಳಕಿಗೆ ಬಂದಿದೆ.
ಕರ್ಪೆ ಗ್ರಾಮದ ನಿವಾಸಿ ನಿಶಾಂತ್ ಶೆಟ್ಟಿ (34) ಕಾಣೆಯಾದವರು. ಫೆಬ್ರವರಿ 16ರಂದು ಬೆಳಗ್ಗೆ 7 ಗಂಟೆಗೆ ಉಪ್ಪಿರಕ್ಕೆ ಅಡಿಕೆ ಸುಲಿಯಲು ನೆರೆಮನೆಯ ರಾಜೇಶ್ ಅವರೊಂದಿಗೆ ತೆರಳಿದ್ದರು. ಅದೇ ದಿನ ಸಂಜೆ ತಮ್ಮ ನಿತಿನ್ ಶೆಟ್ಟಿ ಅವರಿಗೆ ದೂರವಾಣಿ ಕರೆ ಮಾಡಿ ಯಕ್ಷಗಾನಕ್ಕೆ ತೆರಳಿ ಫೆಬ್ರವರಿ 17ರ ಸಂಜೆ ಮನೆಗೆ ಬರುವುದಾಗಿ ತಿಳಿಸಿದ್ದಾರೆ.
ಆದರೆ ನಿಗದಿತ ಸಮಯಕ್ಕೆ ಮನೆಗೆ ಆಗಮಿಸದ ಹಿನ್ನೆಲೆಯಲ್ಲಿ ಕುಟುಂಬಸ್ಥರು ಮೊಬೈಲ್ಗೆ ಸಂಪರ್ಕಿಸಲು ಯತ್ನಿಸಿದಾಗ ಅದು ಸ್ವಿಚ್ ಆಫ್ ಆಗಿರುವುದು ಕಂಡುಬಂದಿದೆ. ನಂತರ ಸಂಬಂಧಿಕರು ಹಾಗೂ ಪರಿಚಿತರ ಮನೆಗಳಲ್ಲಿ ಹುಡುಕಾಟ ನಡೆಸಿದರೂ ಯಾವುದೇ ಸುಳಿವು ದೊರಕಿಲ್ಲ.
ಈ ಸಂಬಂಧ ಕುಟುಂಬಸ್ಥರು ನೀಡಿದ ದೂರಿನ ಮೇರೆಗೆ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.







