ಬಂಟ್ವಾಳ, ಫೆ. 18: ರಾಯಿ ಸಮೀಪದ ಕೈತ್ರೋಡಿ ಕ್ವಾರ್ಟರ್ಸ್ನಲ್ಲಿ ವಿದ್ಯುತ್ ಮೀಟರ್ ರೀಡರ್ ಮೇಲೆ ಸಾಕು ನಾಯಿದಾಳಿ ನಡೆದಿದ್ದು, ಬಲ ಕೈಗೆ ಗಂಭೀರ ಗಾಯವಾದ ಘಟನೆ ಸೋಮವಾರ ನಡೆದಿದೆ.
ಮೂಲತಃ ಮುಡಿಪು ನಿವಾಸಿಯಾದ ಮೆಸ್ಕಾಂ ಮೀಟರ್ ರೀಡರ್ ಸಿಬ್ಬಂದಿ ಮೇಲ್ವಿಚಾರಕ ಸಂಪತ್ ಆರ್. ಶೆಟ್ಟಿ ಅವರು ಮನೆಗಳ ಮೀಟರ್ ರೀಡಿಂಗ್ ಕಾರ್ಯ ಮುಗಿಸಿ ಮುಖ್ಯರಸ್ತೆಯಲ್ಲಿ ನಿಲ್ಲಿಸಿದ್ದ ಬೈಕ್ ಕಡೆಗೆ ತೆರಳುತ್ತಿದ್ದ ವೇಳೆ ಈ ದುರ್ಘಟನೆ ಸಂಭವಿಸಿದೆ. ಮನೆಯೊಂದರಲ್ಲಿ ಕಟ್ಟಿ ಹಾಕಿದ್ದ ನಾಯಿ ಸಂಕೋಲೆ ಸಮೇತ ಏಕಾಏಕಿ ಓಡಿ ಬಂದು ದಾಳಿ ನಡೆಸಿದ್ದು, ಬಲ ಕೈಯ ಮಾಂಸ ಕಿತ್ತು ಗಂಭೀರವಾಗಿ ಗಾಯಗೊಳಿಸಿದೆ.
ಸ್ಥಳೀಯರು ತಕ್ಷಣ ಧಾವಿಸಿ ನಾಯಿಯನ್ನು ಓಡಿಸಿ, ರಕ್ತಸ್ರಾವವಾಗುತ್ತಿದ್ದ ಸಂಪತ್ ಅವರನ್ನು ಸಮೀಪದ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆದೊಯ್ದು ಪ್ರಥಮ ಚಿಕಿತ್ಸೆ ನೀಡಿಸಿದರು. ಬಳಿಕ ಸಿದ್ಧಕಟ್ಟೆ ಮೆಸ್ಕಾಂ ಎಂಜಿನಿಯರ್ ಯೋಗೀಶ್ ಅವರ ಸಹಕಾರದಿಂದ ಹೆಚ್ಚಿನ ಚಿಕಿತ್ಸೆಗೆ ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಯಿತು. ಕೈಗೆ ಶಸ್ತ್ರಚಿಕಿತ್ಸೆ ನಡೆಸಲಾಗಿದ್ದು, ಮಂಗಳವಾರ ಆರೋಗ್ಯ ಸ್ಥಿತಿ ಸುಧಾರಿಸಿದೆ ಎಂದು ತಿಳಿದುಬಂದಿದೆ.
ಬಂಟ್ವಾಳ ಉಪವಿಭಾಗ–2 ವ್ಯಾಪ್ತಿಯ ವಾಮದಪದವು, ಸಿದ್ಧಕಟ್ಟೆ, ರಾಯಿ, ವಗ್ಗ, ಕಕ್ಯಪದವು ಹಾಗೂ ಬಂಟ್ವಾಳ ಪೇಟೆ ಪ್ರದೇಶಗಳಲ್ಲಿ ಒಟ್ಟು 17 ಮಂದಿ ಹೊರಗುತ್ತಿಗೆ ಆಧಾರಿತ ಮೀಟರ್ ರೀಡರ್ಗಳು ಕಾರ್ಯನಿರ್ವಹಿಸುತ್ತಿದ್ದಾರೆ. ರಾಯಿ ಪ್ರದೇಶದ ಮೀಟರ್ ರೀಡರ್ ಗೈರಾಗಿದ್ದ ಹಿನ್ನೆಲೆ ಮೇಲ್ವಿಚಾರಕ ಸಂಪತ್ ಅವರೇ ರೀಡಿಂಗ್ಗೆ ತೆರಳಿದ್ದರು.
ಹೊರಗುತ್ತಿಗೆ ಆಧಾರಿತ, ಅಸಂಘಟಿತ ಕಾರ್ಮಿಕರ ಸುರಕ್ಷತೆ ಹಾಗೂ ಸಮಸ್ಯೆಗಳ ಕುರಿತು ಮೆಸ್ಕಾಂ ಮೌನ ವಹಿಸಿದೆ ಎಂದು ಸಿಬ್ಬಂದಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಸಂಪತ್ ಅವರ ಶಸ್ತ್ರಚಿಕಿತ್ಸೆಗೆ ಇದುವರೆಗೆ ಸುಮಾರು ₹30 ಸಾವಿರ ವೆಚ್ಚವಾಗಿದೆ ಎಂದು ಮೂಲಗಳು ತಿಳಿಸಿವೆ.







