ಬೈಂದೂರು, ಫೆ. 18:ಸುರಭಿ ಬೈಂದೂರು ಸಾಂಸ್ಕೃತಿಕ, ಸಾಹಿತ್ಯ ಹಾಗೂ ಸೇವಾ ಪ್ರತಿಷ್ಠಾನ ವತಿಯಿಂದ ಫೆಬ್ರವರಿ 19ರಿಂದ 22ರವರೆಗೆ ‘ಸುರಭಿ ಜೈಸಿರಿ 2026’ ಸಾಂಸ್ಕೃತಿಕ ಮಹೋತ್ಸವ ನಡೆಯಲಿದೆ. ಈ ವರ್ಷದ ‘ಸುರಭಿ ಬಿಂದುಶ್ರೀ’ ಪ್ರಶಸ್ತಿಗೆ ಖ್ಯಾತ ರಂಗಭೂಮಿ ಮತ್ತು ಚಲನಚಿತ್ರ ನಟಿ ಉಮಾಶ್ರೀ ಆಯ್ಕೆಯಾಗಿದ್ದಾರೆ ಎಂದು ಸಂಸ್ಥೆಯ ಅಧ್ಯಕ್ಷ ಆನಂದ ಮದ್ದೋಡಿ ತಿಳಿಸಿದ್ದಾರೆ.
₹25 ಸಾವಿರ ನಗದು, ಚಿನ್ನದ ಪದಕ ಹಾಗೂ ಪ್ರಶಸ್ತಿ ಪತ್ರ ಒಳಗೊಂಡ ಈ ಪ್ರಶಸ್ತಿಯನ್ನು ಫೆಬ್ರವರಿ 20ರಂದು ಪ್ರದಾನ ಮಾಡಲಾಗುತ್ತದೆ. ಉದ್ಯಮಿ ಮಾರಣಕಟ್ಟೆ ಕೃಷ್ಣಮೂರ್ತಿ ಮಂಜರು ಅವರು ಉಮಾಶ್ರೀ ಅವರಿಗೆ ಪ್ರಶಸ್ತಿ ಪ್ರದಾನ ಮಾಡುವರು. ಶಾಸಕ ಗುರುರಾಜ ಗಂಟಿಹೊಳೆ ಅಧ್ಯಕ್ಷತೆ ವಹಿಸುವರು. ಇದೇ ದಿನ ಸುರಭಿ ಭರತನಾಟ್ಯ ವಿದ್ಯಾರ್ಥಿಗಳಿಂದ ನಾಟ್ಯೋತ್ಸವ ನಡೆಯಲಿದೆ.
ದಿ. ಹೊಸಾಡು ಸುಬ್ರಾಯ ಶೇರುಗಾರ್ ಸಂಸ್ಮರಣಾರ್ಥವಾಗಿ ನಡೆಯುವ ಈ ಸಾಂಸ್ಕೃತಿಕೋತ್ಸವ ಪ್ರತಿದಿನ ಸಂಜೆ 6 ಗಂಟೆಗೆ ಶಾರದಾ ವೇದಿಕೆಯಲ್ಲಿ ನಡೆಯಲಿದೆ. ಫೆಬ್ರವರಿ 19ರಂದು ಮುಖಂಡ ಪ್ರಮೋದ್ ಮಧ್ವರಾಜ್ ಕಾರ್ಯಕ್ರಮಕ್ಕೆ ಚಾಲನೆ ನೀಡುವರು. ವರಲಕ್ಷ್ಮೀ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ಗೋವಿಂದ ಬಾಬು ಪೂಜಾರಿ ಅಧ್ಯಕ್ಷತೆ ವಹಿಸುವರು. ಬಳಿಕ ಸುರಭಿ ಯಕ್ಷ ಕಲಾವಿದರಿಂದ ‘ಯಕ್ಷ ಸಂಭ್ರಮ’ ನಡೆಯಲಿದೆ.
ಫೆಬ್ರವರಿ 21ರಂದು ಮಂಗಳೂರು ಫಾದರ್ ಮುಲ್ಲರ್ ಆಸ್ಪತ್ರೆಯ ಹೃದ್ರೋಗ ತಜ್ಞ ಡಾ. ಪ್ರಭಾಕರ ಎಚ್. ಅಧ್ಯಕ್ಷತೆಯಲ್ಲಿ ಕಾರ್ಯಕ್ರಮ ನಡೆಯಲಿದ್ದು, ಮಾಜಿ ಮುಖ್ಯಮಂತ್ರಿ ಎಂ. ವೀರಪ್ಪ ಮೊಯಿಲಿ ಸಂಸ್ಮರಣಾ ನುಡಿಗಳನ್ನಾಡುವರು. ಸುರಭಿಯ ನೃತ್ಯ ಕಲಾವಿದರಿಂದ ಜಾನಪದ ಮತ್ತು ನಾಟ್ಯ ವೈಭವ, ಜೊತೆಗೆ ಹಾಸ್ಯ ಕಲಾವಿದ ಪ್ರೊ. ಕೃಷ್ಣ ಗೌಡ ಮತ್ತು ತಂಡದವರಿಂದ ಹಾಸ್ಯೋತ್ಸವ ನಡೆಯಲಿದೆ.
ಫೆಬ್ರವರಿ 22ರಂದು ಸಮಾರೋಪ ಸಮಾರಂಭ ನಡೆಯಲಿದ್ದು, ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ ಭಾಗವಹಿಸಲಿದ್ದಾರೆ. ಮುಖಂಡ ರಮಾನಾಥ ರೈ ಸಮಾರೋಪ ಭಾಷಣ ಮಾಡಲಿದ್ದಾರೆ. ಸುರಭಿ ವಿದ್ಯಾರ್ಥಿಗಳಿಂದ ‘ನಾದ ಗಾನಾಮೃತ’, ‘ಕುಂಚ ಸಂಭ್ರಮ’ ಕಾರ್ಯಕ್ರಮಗಳು ಹಾಗೂ ಮಂಗಳೂರು ಸನಾತನ ತಂಡದಿಂದ ‘ಸನಾತನ ರಾಷ್ಟ್ರಾಂಜಲಿ’ ನಾಟ್ಯ ವೈವಿಧ್ಯ ಪ್ರದರ್ಶನ ನಡೆಯಲಿದೆ.
ಇದೇ ವೇಳೆ ವಿದ್ವಾನ್ ಚಂದ್ರಶೇಖರ ನಾವಡ (ಸುರತ್ಕಲ್) ಅವರಿಗೆ ಗುರುವಂದನೆ ಸಲ್ಲಿಸಲಾಗುವುದು. ಬಾಲ ಪ್ರತಿಭೆಗಳಾದ ಕೃತಿಕಾ ಕೃಷ್ಣ ಗಾಣಿಗ, ತ್ರಿಷಾ ಮತ್ತು ದೀಪ್ತಾ ಡಿ. ಕುಂದರ್ ಅವರಿಗೆ ಗೌರವಾರ್ಪಣೆ ನಡೆಯಲಿದೆ ಎಂದು ಆನಂದ ಮದ್ದೋಡಿ ವಿವರಿಸಿದರು.







