ಉಡುಪಿ, ಫೆ. 09:ಉಡುಪಿ ಜಿಲ್ಲೆಯಲ್ಲಿ ಚಿರತೆಗಳ ಹಾವಳಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಈಗಾಗಲೇ ಮನೆಗಳ ಆವರಣ ಹಾಗೂ ತೋಟಗಳಲ್ಲಿ ಚಿರತೆ ಸಂಚರಿಸಿದ ದೃಶ್ಯಗಳು ಜನರಲ್ಲಿ ಭೀತಿಯನ್ನು ಮೂಡಿಸಿದ್ದವು. ಈ ನಡುವೆ, ಆತ್ರಾಡಿ ಸಮೀಪದ ಕಬ್ಯಾಡಿ ಪ್ರದೇಶದಲ್ಲಿ ಚಿರತೆಯೊಂದು ಕಾಂಪೌಂಡ್ ಮೇಲೆ ಏರಿ ಕುಳಿತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಡುತ್ತಿದೆ.
ಕಬ್ಯಾಡಿಯ ಬಾಲಕೃಷ್ಣ ನಾಯಕ್ ಎಂಬುವವರ ಕಾಂಪೌಂಡ್ ನಲ್ಲಿ ಚಿರತೆ ಪ್ರತ್ಯಕ್ಷಗೊಂಡಿದೆ. ಅದೇ ಮಾರ್ಗದಲ್ಲಿ ಕಾರಿನಲ್ಲಿ ತೆರಳುತ್ತಿದ್ದ 80 ಬಡಗಬೆಟ್ಟು ಗ್ರಾಮ ಪಂಚಾಯತ್ ಸದಸ್ಯ ಶುಭಕರ್ ಶೆಟ್ಟಿ ಅವರು ಚಿರತೆಯನ್ನ ನೋಡಿದ್ದು, ಅವರು ತಮ್ಮ ಮೊಬೈಲ್ ನಲ್ಲಿ ಚಿರತೆ ಕಾಂಪೌಂಡ್ ನಲ್ಲಿ ಸಂಚರಿಸುತ್ತಿರುವ ದೃಶ್ಯವನ್ನು ಸೆರೆಹಿಡಿದಿದ್ದಾರೆ.
ಸದ್ಯ ಸ್ಥಳೀಯರು ಚಿರತೆ ಸೆರೆ ಹಿಡಿಯುವಂತೆ ಅರಣ್ಯ ಅಧಿಕಾರಿಗಳಿಗೆ ಒತ್ತಾಯಿಸಿದ್ದು, ಅಧಿಕಾರಿಗಳು ಮುಂದಿನ ಕ್ರಮ ಕೈಗೊಳ್ಳಲು ಸಿದ್ಧತೆ ಮಾಡುತ್ತಿದ್ದಾರೆ.







