ಉಡುಪಿ, ಫೆ. 09 : ಹೆಚ್ಚಿನ ಲಾಭಾಂಶದ ಆಸೆ ತೋರಿಸಿ ಹೂಡಿಕೆ ಮಾಡಿಸುವ ನೆಪದಲ್ಲಿ ವ್ಯಕ್ತಿಯೊಬ್ಬರಿಂದ ಲಕ್ಷಾಂತರ ರೂಪಾಯಿ ಮೋಸ ಪಡೆದಿರುವ ಘಟನೆ ವರದಿಯಾಗಿದೆ.
ಸುರತ್ಕಲ್ ನಿವಾಸಿ ಇರ್ಫಾನ್ ಎಂಬವರು ಉಡುಪಿ ಜಿಲ್ಲೆಯ ವಿವಿಧ ಬ್ಯಾಂಕ್ಗಳಲ್ಲಿ ಖಾತೆಗಳನ್ನು ಹೊಂದಿದ್ದು, ಕಳೆದ ವರ್ಷದ ಆಗಸ್ಟ್ ತಿಂಗಳಲ್ಲಿ ಅವರಿಗೆ ಅನಾಮಧೇಯ ವ್ಯಕ್ತಿಗಳಿಂದ ಆನ್ಲೈನ್ ಮೂಲಕ ದೂರವಾಣಿ ಕರೆಗಳು ಬಂದಿವೆ. ಕರೆ ಮಾಡಿದವರು ತಮ್ಮನ್ನು ವಿಶಾಲ್ ರಾವ್ ಎಂದು ಪರಿಚಯಿಸಿಕೊಂಡು, ಹೂಡಿಕೆಯಿಂದ ಅಧಿಕ ಲಾಭ ದೊರೆಯುತ್ತದೆ ಎಂದು ನಂಬಿಸಿದ್ದಾರೆ.
ಆರೋಪಿಯ ಸೂಚನೆಯಂತೆ ಇರ್ಫಾನ್ ಅವರು ಲಾಗಿನ್ ಐಡಿ ಸೃಷ್ಟಿಸಿ, ಆ.3ರಿಂದ ನ.29ರವರೆಗೆ ವಿವಿಧ ಖಾತೆಗಳಿಗೆ ಹಂತ ಹಂತವಾಗಿ ಒಟ್ಟು 14,07,025 ರೂ.ಗಳನ್ನು ವರ್ಗಾವಣೆ ಮಾಡಿದ್ದಾರೆ. ಆದರೆ ಹೂಡಿಕೆ ಮಾಡಿದ ಮೊತ್ತವೂ ಅಲ್ಲದೆ ಯಾವುದೇ ಲಾಭಾಂಶವೂ ವಾಪಸ್ ನೀಡದೇ ಆರೋಪಿಗಳು ಮೋಸ ಮಾಡಿದ್ದಾರೆ ಎನ್ನಲಾಗಿದೆ.
ಈ ಸಂಬಂಧ ಇರ್ಫಾನ್ ಅವರು ದೂರು ದಾಖಲಿಸಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.







