ಸುರತ್ಕಲ್ ಫೆ. 07: ರಾಷ್ಟ್ರೀಯ ಹೆದ್ದಾರಿಯ ಪಾವಂಜೆ ಭಾಗದಲ್ಲಿ ಶುಕ್ರವಾರ ಸಂಜೆ ಸಂಭವಿಸಬಹುದಾಗಿದ್ದ ಭೀಕರ ದುರಂತವು ಕ್ಷಣಮಾತ್ರದಲ್ಲಿ ತಪ್ಪಿದೆ. ಜನಜಂಗುಳಿ ಮಧ್ಯೆ ನುಗ್ಗಿದ ಲಾರಿಯಿಂದ ಮಹಿಳೆಯೊಬ್ಬರು ಲಾರಿಯಡಿ ಸಿಲುಕಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಪಾವಂಜೆ ನಿವಾಸಿ ಹಾಗೂ ವಾಣಿ ಶಾಲೆಯ ಸಿಬ್ಬಂದಿಯಾಗಿರುವ ಕುಸುಮ (42) ಗಾಯಾಳು.
ಶುಕ್ರವಾರ ಸಂಜೆ ಪಾವಂಜೆ ಬಸ್ ನಿಲ್ದಾಣದ ಬಳಿ ವಿದ್ಯಾರ್ಥಿಗಳು ಹಾಗೂ ಮಹಿಳೆಯರು ಸೇರಿದಂತೆ ಹಲವರು ಬಸ್ ನಿರೀಕ್ಷೆಯಲ್ಲಿ ನಿಂತಿದ್ದರು. ಈ ವೇಳೆ ಉಡುಪಿ ದಿಕ್ಕಿನಿಂದ ಅತಿವೇಗವಾಗಿ ಬಂದ ಲಾರಿ, ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಯ ಬ್ಯಾರಿಕೇಡ್ಗಳನ್ನು ದಾಟಿ ನೇರವಾಗಿ ಜನರತ್ತ ನುಗ್ಗಿದೆ.
ಲಾರಿ ನುಗ್ಗುತ್ತಿರುವುದನ್ನು ಗಮನಿಸಿದ ವಿದ್ಯಾರ್ಥಿಗಳು ಮತ್ತು ಪ್ರಯಾಣಿಕರು ತಕ್ಷಣವೇ ಚದುರಿ ಓಡಿದ ಪರಿಣಾಮ, ದೊಡ್ಡ ಅನಾಹುತ ತಪ್ಪಿದೆ. ಆದರೆ ಮಹಿಳೆಯೊಬ್ಬರು ಲಾರಿಯಡಿ ಸಿಲುಕಿ ಗಂಭೀರ ಗಾಯಗೊಂಡಿದ್ದು, ಸ್ಥಳದಲ್ಲಿ ಆತಂಕದ ವಾತಾವರಣ ನಿರ್ಮಾಣವಾಯಿತು.
ಚಾಲಕನ ವಿರುದ್ಧ ಸಾರ್ವಜನಿಕರ ಆಕ್ರೋಶ:
ಅಪಘಾತದ ಬಳಿಕ ಲಾರಿಯಿಂದ ಕೆಳಗಿಳಿದ ಚಾಲಕ ಸಂಪೂರ್ಣ ಪಾನಮತ್ತನಾಗಿರುವುದು ಕಂಡುಬಂದಿದೆ. ಇದರಿಂದ ರೊಚ್ಚಿಗೆದ್ದ ನೂರಾರು ಸಾರ್ವಜನಿಕರು ಚಾಲಕನ ಮೇಲೆ ಹಲ್ಲೆಗೆ ಮುಂದಾಗಿ, “ಚಾಲಕನನ್ನು ನಮ್ಮ ವಶಕ್ಕೆ ಒಪ್ಪಿಸಿ” ಎಂದು ಪೊಲೀಸರೊಂದಿಗೆ ಗಲಾಟೆ ನಡೆಸಿದರು. ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದ್ದು, ಪೊಲೀಸರು ಹರಸಾಹಸ ಪಟ್ಟು ಚಾಲಕನನ್ನು ಸಾರ್ವಜನಿಕರ ಆಕ್ರೋಶದಿಂದ ರಕ್ಷಿಸಿ, ವಶಕ್ಕೆ ಪಡೆದು ಕರೆದೊಯ್ದಿದ್ದು ಕೇಸು ದಾಖಲಿಸಿದ್ದಾರೆ.
ಮಗಳನ್ನು ಕಾಪಾಡಿದ ತಾಯಿ :
ಲಾರಿ ಏಕಾಏಕಿ ನಿಲ್ದಾಣಕ್ಕೆ ನುಗ್ಗುತ್ತಿರುವುದನ್ನು ಕಂಡ ಕುಸುಮ ಅವರು ಪಕ್ಕದಲ್ಲಿ ನಿಂತಿದ್ದ ಮಗಳನ್ನು ಪಕ್ಕಕ್ಕೆ ದೂಡಿದ್ದಾರೆ. ಆದರೆ ತಮಗೆ ಮಾತ್ರ ತಪ್ಪಿಸಿಕೊಳ್ಳಲು ಸಾಧ್ಯವಾಗದೆ ಚಕ್ರದಡಿ ಸಿಲುಕಿ ಗಂಭೀರ ಗಾಯಗೊಂಡರು.







