ಮಂಗಳೂರು ಫೆ. 03:ಮಕ್ಕಳ ಜೀವನದ ಭವಿಷ್ಯಕ್ಕೆ ಭದ್ರ ಅಡಿಪಾಯವಾಗಿರುವ ಎಸೆಸೆಲ್ಸಿ ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶ ಸಾಧಿಸುವ ಗುರಿಯೊಂದಿಗೆ ಅನೇಕ ಶಾಲೆಗಳು ನೂತನ ಕಾರ್ಯತಂತ್ರಗಳನ್ನು ಅಳವಡಿಸಿಕೊಳ್ಳುತ್ತಿವೆ. ಮಕ್ಕಳ ಕಲಿಕೆಗೆ ಉತ್ತೇಜನ ನೀಡುವ ಹಲವು ವಿಭಿನ್ನ ಪ್ರಯತ್ನಗಳು ನಡೆಯುತ್ತಿದ್ದು, ಇದರ ಭಾಗವಾಗಿ ಮಂಗಳೂರು ಹೊರವಲಯದ ಒಂದು ಸರಕಾರಿ ಶಾಲೆ ಎಸೆಸೆಲ್ಸಿ ವಿದ್ಯಾರ್ಥಿಗಳಿಗಾಗಿ ವಿಶಿಷ್ಟವಾಗಿ ‘ರಾತ್ರಿ ಶಾಲೆ’ ಪರಿಕಲ್ಪನೆಯನ್ನು ಜಾರಿಗೆ ತಂದಿದೆ.
ಬೈಕಂಪಾಡಿಯ ಮೀನಕಳಿಯ ಸರಕಾರಿ ಪ್ರೌಢ ಶಾಲೆಯಲ್ಲಿ ಇಂತಹ ವಿನೂತನ ಪರಿಕಲ್ಪನೆಯೊಂದು ಜಾರಿಗೆ ಬಂದಿದೆ. ಇಲ್ಲಿ ಬೆಳಗ್ಗೆ 8.15ರ ಸುಮಾರಿಗೆ ಶಾಲೆಗೆ ಬರುವ ಎಸೆಸೆಲ್ಸಿ ಮಕ್ಕಳು ಮನೆಗೆ ವಾಪಸಾ ಗುವುದು ರಾತ್ರಿ 9ರ ಸುಮಾರಿಗೆ.
ಬೈಕಂಪಾಡಿಯ ಮೀನಕಳಿಯ ಸರ ಕಾರಿ ಪ್ರೌಢಶಾಲೆಯಲ್ಲಿ 8ರಿಂದ 10ನೇ ತರಗತಿವರೆಗೆ 171 ಮಕ್ಕಳಿದ್ದಾರೆ. 11 ಶಿಕ್ಷಕರಿದ್ದಾರೆ. ಈ ಪೈಕಿ ಎಸೆಸೆಲ್ಸಿಯಲ್ಲಿ 45 ಮಕ್ಕಳು (34 ಕನ್ನಡ ಮಾಧ್ಯಮ, 11 ಆಂಗ್ಲ ಮಾಧ್ಯಮ) ಕಲಿಯುತ್ತಿದ್ದಾರೆ. ಇಷ್ಟೂ ಮಕ್ಕಳ ಪೈಕಿ ಶೇ.95ರಷ್ಟು ಮಂದಿ ಉತ್ತರ ಕರ್ನಾಟಕ ಭಾಗದ ಕಾರ್ಮಿಕರ ಮಕ್ಕಳು. ಮೀನುಗಾರಿಕೆ ದಕ್ಕೆ, ಮಂಗಳೂರು ಪಾಲಿಕೆ ಸಹಿತ ವಿವಿಧ ಕಡೆಗೆ ಕೆಲಸಕ್ಕೆ ಹೋಗುವವರ ಮಕ್ಕಳು ಇಲ್ಲಿ ಕಲಿಯುತ್ತಿದ್ದಾರೆ. ಕೆಲಸಕ್ಕೆ ಹೋದ ಹೆತ್ತವರು ವಾಪಸ್ ಮನೆಗೆ ಬರುವಾಗ ರಾತ್ರಿ ಆಗುತ್ತದೆ. ಆದರೆ ಸಂಜೆ 4ರ ಸುಮಾರಿಗೆ ಶಾಲೆ ಬಿಟ್ಟ ಮಕ್ಕಳು ಹತ್ತಿರದ ಬೀಚ್ನಲ್ಲಿ ಆಡುವುದು ಅಥವಾ ಇತರ ಕಡೆಯಲ್ಲಿ ತಿರುಗಾಡುತ್ತಿದ್ದರು. ಓದುವ ಮನಸ್ಸು ಮತ್ತು ವ್ಯವಸ್ಥೆ ಇರಲಿಲ್ಲ.
ಹೆತ್ತವರು ಕೂಡ ಇದರ ಬಗ್ಗೆ ನಿಗಾ ವಹಿಸಲು ಆಗುತ್ತಿರಲಿಲ್ಲ. ಕೆಲವು ಮನೆಯಲ್ಲಿ ವಿದ್ಯುತ್ ವ್ಯವಸ್ಥೆಯೂ ಇಲ್ಲ. ಇದಕ್ಕಾಗಿ ಅನುಷ್ಠಾನವಾದದ್ದು ಮಕ್ಕಳ ಭವಿಷ್ಯ ರೂಪಿಸುವ ಶಾಲೆಯಲ್ಲಿಯೇ ಹೆಚ್ಚುವರಿ ಕಲಿಕೆ!
ಕಳೆದ ವರ್ಷ ಶೇ.100 ಫಲಿತಾಂಶ.
ಕಳೆದ ವರ್ಷದಿಂದ ಈ ಯೋಜನೆ ಜಾರಿಗೆ ಬಂದಿದೆ. ಮಕ್ಕಳು ಶ್ರಮವಹಿಸಿ ವಿದ್ಯಾಭ್ಯಾಸ ಮಾಡಿದ ಕಾರಣದಿಂದ ಕಳೆದ ವರ್ಷ 40 ವಿದ್ಯಾರ್ಥಿಗಳು ಕೂಡ ಅಧಿಕ ಅಂಕಗಳೊಂದಿಗೆ ಉತ್ತೀರ್ಣರಾಗಿದ್ದಾರೆ. ಅದರಲ್ಲಿಯೂ, ಸರಕಾರಿ ಶಾಲೆಗಳ ಪೈಕಿ ಆಂಗ್ಲ ಮಾಧ್ಯಮ ವಿಭಾಗದಲ್ಲಿ ವಿನೋದ್ ಚಂದಪ್ಪನವರ್ ಎಂಬ ವಿದ್ಯಾರ್ಥಿ 625ಕ್ಕೆ 612 ಅಂಕ ಪಡೆದು ದಕ್ಷಿಣ ಕನ್ನಡ ಜಿಲ್ಲೆಯಲ್ಲಿಯೇ ದಾಖಲೆ ಬರೆದಿದ್ದರು!
ರಜೆ ಇಲ್ಲ; ಕಲಿಕೆಯೇ ಎಲ್ಲ!
ಬೆಳಗ್ಗೆ 5 ಗಂಟೆಗೆ ಮಕ್ಕಳು ಎದ್ದು ತನ್ನ ಗೆಳೆಯರಿಗೆ ಕರೆ ಮಾಡಿ ಎಬ್ಬಿಸಿ 6.30 ವರೆಗೆ ಮನೆಯಲ್ಲಿಯೂ ಅಭ್ಯಾಸ ಮಾಡುತ್ತಾರೆ. ಬಳಿಕ ಶಾಲೆಗೆ ಬರುವವರು ರಾತ್ರಿ 9ರವರೆಗೆ ಆಟೋಟದ ಜತೆಗೆ ಕಲಿಯುತ್ತಿದ್ದಾರೆ. ವಿಶೇಷವೆಂದರೆ ಶನಿ ವಾರ ರವಿವಾರ ಎಸೆಸೆಲ್ಸಿ ಮಕ್ಕಳಿಗೆ ಶಾಲೆ ಯಲ್ಲಿ ಪಾಠವಿದೆ. ರಜೆಯಲ್ಲಿಯೂ ಪಾಠವಿದೆ. ನಿಗದಿತ ಸಮಯದ ಆಟ, ವಿರಾಮದ ಜತೆಗೆ ಪಾಠ ಇರುತ್ತದೆ!
ಹೇಗಿರುತ್ತದೆ ರಾತ್ರಿ ಕಲಿಕೆ?
ಎಸೆಸೆಲ್ಸಿಯಲ್ಲಿ ಉತ್ತಮ ಅಂಕ ಪಡೆಯಬೇಕಾದರೆ ಗಮನವಿಟ್ಟು ಓದಿದರೆ ಸಾಧ್ಯವಾಗುತ್ತದೆ ಎಂಬ ಬಗ್ಗೆ ಶಿಕ್ಷಕರು ಪೋಷಕರ ಗಮನಸೆಳೆಯುತ್ತಿದ್ದರು. ಆದರೆ, ಮನೆಯಲ್ಲಿ ಓದಲು ಬೇಕಾದ ವ್ಯವಸ್ಥೆ ಇಲ್ಲ. ನಾವೂ ಕೆಲಸ ಬಿಟ್ಟು ಬರುವಾಗ ರಾತ್ರಿಯಾಗುತ್ತದೆ ಎಂಬಿತ್ಯಾದಿ ಕಾರಣಗಳನ್ನು ಪೋಷಕರು ನೀಡುತ್ತಿದ್ದರು. ಶಾಲೆಯಲ್ಲಿಯೇ ಒಂದು ವೇಳೆ 9 ಗಂಟೆಯವರೆಗೆ ಕಲಿಕೆಗೆ ಅವಕಾಶ ಇದ್ದರೆ ಅನುಕೂಲ ಎಂಬ ಅಭಿಪ್ರಾಯಕ್ಕೆ ಪೋಷಕರು ಒಪ್ಪಿಗೆ ನೀಡಿದ್ದರು. ಹೀಗಾಗಿ ಕಳೆದ ವರ್ಷ ಈ ಹೊಸ ಯೋಜನೆ ಇಲ್ಲಿ ಜಾರಿಗೆ ಬಂತು.
ಬೆಳಗ್ಗೆ 8.15ಕ್ಕೆ ಶಾಲೆಗೆ ಬರುವ ಮಕ್ಕಳು ಹೆಚ್ಚುವರಿ ಅಭ್ಯಾಸ ಮಾಡುತ್ತಾರೆ. ಬಳಿಕ ಎಂದಿನಂತೆ ಪಾಠ ಇರುತ್ತದೆ. ಸಂಜೆ 6ರಿಂದ ಮತ್ತೆ ರಾತ್ರಿ 9ರವರೆಗೆ ಇಲ್ಲಿ ಕಲಿಕೆ ಜಾರಿಯಲ್ಲಿರುತ್ತದೆ. ಸಂಜೆ ಶಿಕ್ಷಕರು, ಪೋಷಕರು, ಸಂಘ ಸಂಸ್ಥೆ ವತಿಯಿಂದ ಲಘು ಉಪಹಾರ ಇರುತ್ತದೆ. ಶಿಕ್ಷಕರು ವಿಶೇಷ ಆಸಕ್ತಿಯಿಂದ ಮಕ್ಕಳ ಕಾಳಜಿ ವಹಿಸುತ್ತಾರೆ. ಮೊಗವೀರ ಮಹಾಸಭಾ, ಶಾಲಾ ಹಳೆ ವಿದ್ಯಾರ್ಥಿ ಸಂಘ, ಶಾಲಾಭಿವೃದ್ಧಿ ಸಮಿತಿಯ ಸಹಕಾರದಿಂದ ಇದೆಲ್ಲವೂ ಸಾಧ್ಯವಾಗುತ್ತಿದೆ.
ಸರ್ವರ ಸಹಕಾರದಿಂದ ಯಶಸ್ವಿ
ಶಾಲೆಗೆ ಬಂದ ಮಕ್ಕಳು ಅತೀ ಹೆಚ್ಚು ಅಂಕ ಪಡೆಯುವ ಮೂಲಕ ಅವರ ಜೀವನಕ್ಕೆ ಭದ್ರ ಅಡಿಪಾಯ ಗಟ್ಟಿಯಾಗಿರಬೇಕು ಎಂಬ ಆಶಯದಿಂದ ಎಸೆಸೆಲ್ಸಿ ಮಕ್ಕಳಿಗಾಗಿ ವಿಶೇಷ ತರಗತಿಯನ್ನು ಕಳೆದ ವರ್ಷದಿಂದ ಆರಂಭಿಸಲಾಗಿದೆ. ಎಲ್ಲಾ ಶಿಕ್ಷಕರ ಸಹಕಾರದಿಂದ ಮೊಗವೀರ ಮಹಾಸಭಾ, ಶಾಲಾ ಹಳೆ ವಿದ್ಯಾರ್ಥಿ ಸಂಘ, ಶಾಲಾಭಿವೃದ್ದಿ ಸಮಿತಿಯ ಬೆಂಬಲದಿಂದ ಇದು ಯಶಸ್ವಿಯಾಗಿದೆ. ಮಕ್ಕಳು ಕಲಿಕಾ ವಾತಾವರಣದಲ್ಲೇ ಇರಬೇಕು ಎಂಬ ಪರಿಕಲ್ಪನೆಯಲ್ಲಿ ಉತ್ತಮ ಫಲಿತಾಂಶದ ಆಶಯದಿಂದ ಇದು ಸಾಕಾರವಾಗುತ್ತಿದೆ.-ಎನ್.ಡಿ.
ಅಜ್ಜಯ್ಯ, ಮುಖ್ಯೋಪಾಧ್ಯಾಯರು, ಬೈಕಂಪಾಡಿ ಮೀನಕಳಿಯ ಸರಕಾರಿ ಪ್ರೌಢಶಾಲೆ
ಮಕ್ಕಳ ಸೌಭಾಗ್ಯವಿದು
ಶಿಕ್ಷಕರು ಹಾಗೂ ಸರ್ವರ ಸಹಕಾರದಿಂದ ಬೆಳಗ್ಗೆ 8ರಿಂದ ರಾತ್ರಿ 9ರ ವರೆಗೆ ಎಸೆಸೆಲ್ಸಿ ಪಾಠ ಅಭ್ಯಸಿಸಲು ಅವಕಾಶ ನಮಗೆ ದೊರೆತಿರುವುದು ಸೌಭಾಗ್ಯ. ವಿಶೇಷ ತರಗತಿ ಮೂಲಕ ನಮಗೆ ಹೆಚ್ಚು ಅನುಕೂಲ ಆಗುತ್ತಿದೆ. ಚಾ ತಿಂಡಿಯ ವ್ಯವಸ್ಥೆ ಕೂಡ ಇಲ್ಲಿ ಮಾಡಲಾಗುತ್ತಿದೆ. ಎಲ್ಲ ಸೌಕರ್ಯವೂ ಇದೆ. -ಚೈತ್ರಾ
ಎಸೆಸೆಲ್ಸಿ ವಿದ್ಯಾರ್ಥಿನಿ






