ಉಡುಪಿ: ಸೆಪ್ಟೆಂಬರ್ 09:ಉಡುಪಿ ಶ್ರೀ ಕೃಷ್ಣ ಮಠ ದ ರಾಜಾಂಗಣದಲ್ಲಿ ಸೆ.12ರಂದು ‘ಭಾರತೀಯ ಜ್ಞಾನ ಪರಂಪರೆ’ ಎನ್ನುವ ಅಂತಾರಾಷ್ಟ್ರೀಯ ಸಮ್ಮೇಳನ ಹಮ್ಮಿಕೊಳ್ಳಲಾಗಿದೆ ಎಂದು ಪರ್ಯಾಯ ಶ್ರೀ ಪುತ್ತಿಗೆ ಮಠಾಧೀ ಶರಾದ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರು ಹೇಳಿದರು.
ಇತ್ತೀಚಿನ ದಿನಗಳಲ್ಲಿ ಮೊಬೈಲ್ ನಿಂದ ಮಾನವನ ಬುದ್ಧಿಶಕ್ತಿ ಕಡಿಮೆ ಬಳಕೆಯಾಗುತ್ತಿದೆ. ಹಾಗಾಗಿ “ಶ್ರೇಷ್ಠ ಭಾರತ ಪುನಃ ಜಾಗೃತ ವಾಗಬೇಕು’ ಎಂಬುದು ನಮ್ಮ ಉದ್ದೇಶ. ಭಾರತೀಯ ಜ್ಞಾನ ಪರಂ ಪರೆಯ ಚರ್ಚೆ, ವಿಷಯ ಮಂಡನೆ ಇತ್ಯಾದಿ ನಡೆಯಲಿದೆ ಎಂದರು.
ಪರ್ಯಾಯ ಶ್ರೀ ಪುತ್ತಿಗೆ ಮಠ ಶ್ರೀಕೃಷ್ಣ ಮಠ, ನಿಟ್ಟೆ ವಿ ವಿ ಯ ಭಾರತೀಯ ಜ್ಞಾನ ವ್ಯವಸ್ಥೆ ವಿಭಾಗ, ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯ ಹಾಗೂ ಶ್ರೀ ವಾದಿರಾಜ ಸಂಶೋಧನ ಪ್ರತಿಷ್ಠಾನದ ಆಶ್ರಯದಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿಯ ಪ್ರಯುಕ್ತ ನಡೆಯುತ್ತಿರುವ ಮಂಡಲೋತ್ಸವದ ಜ್ಞಾನ ಮಂಡಲೋತ್ಸವ ಪ್ರಯುಕ್ತ ಈ ಸಮ್ಮೇಳನ ನಡೆಯುತ್ತಿದೆ.
ಉದ್ಘಾಟನ ಸಮಾರಂಭದಲ್ಲಿ ನಿಟ್ಟೆ ವಿವಿಯ ಕುಲಾಧಿಪತಿ ಎನ್. ವಿನಯ್ ಹೆಗ್ಡೆ ಅಧ್ಯಕ್ಷತೆ ವಹಿ ಸುವರು. ಶ್ರೀಮಠದ ಆಸ್ಥಾನ ವಿದ್ವಾಂಸ ಕೇಶವ ರಾವ್ ತಾಡಪತ್ರಿ ಸಮ್ಮೇಳನಾಧ್ಯಕ್ಷರು. ಸಂಸ್ಕೃತ ವಿವಿ ಕುಲಪತಿ ಪ್ರೊ.ಅಹಲ್ಯಾ ಎಸ್., ಹಿರಿಯ ವಿಜ್ಞಾನಿ ಡಾ. ಪ್ರಹ್ಲಾದ್ ರಾಮ್ರಾವ್, ಸಂಶೋಧಕ ಪ್ರೊ| ಶ್ರೀಪತಿ ತಂತ್ರಿ ಸಹಿತ ವಿವಿಧ ಕ್ಷೇತ್ರದ ಹಲವು ಪಾಲ್ಗೊಳ್ಳುವರು ಎಂದರು.
ಶ್ರೀಮಠದ ಅಂತಾರಾಷ್ಟ್ರೀಯ ಕಾರ್ಯದರ್ಶಿ ವಿ| ಪ್ರಸನ್ನ ಆಚಾರ್ಯ ಮಾತನಾಡಿ, ಸಮ್ಮೇಳನದಲ್ಲಿ ಭಾರತೀಯ ಜ್ಞಾನ ಪರಂಪರೆಯ ಎಲ್ಲ ಆಯಾಮದ ಚರ್ಚೆಯೂ ನಡೆಯಲಿದೆ ಎಂದರು.
ನಿಟ್ಟೆ ವಿವಿ ಭಾರತೀಯ ಜ್ಞಾನ ವ್ಯವಸ್ಥೆ ವಿಭಾಗ ಮುಖ್ಯಸ್ಥ ಡಾ. ಸುಧೀರ್ ರಾಜ್ ಮಾತನಾಡಿ, ರಾಷ್ಟ್ರೀಯ ಶಿಕ್ಷಣ ನೀತಿಯಂತೆ ಸಮ್ಮೇಳನ ರೂಪಿಸಲಾಗಿದೆ. 25 ಪ್ರಬಂಧ ಮಂಡನೆಯಾಗಲಿದೆ ಎಂದರು. ಶ್ರೀ ವಾದಿರಾಜ ಸಂಶೋಧನ ಫೌಂಡೇಶನ್ನ ಡಾ. ಬಿ. ಗೋಪಾಲಾಚಾರ್ಯ ಮಾತನಾಡಿ, ಪರ್ಯಾಯ ಶ್ರೀ ಪುತ್ತಿಗೆ ಮಠದ ಶ್ರೀಪಾದದ್ವಯರ ಉಪಸ್ಥಿತಿಯಲ್ಲಿ ಸಮ್ಮೇಳನ ನಡೆಯಲಿದ್ದು, ಬೆಳಗ್ಗೆ 9.30ಕ್ಕೆ ಉದ್ಘಾಟನೆ, ಅನಂತರ ವಿವಿಧ ಗೋಷ್ಠಿಗಳು, ಸಂಜೆ 5ಕ್ಕೆ ಸಮಾರೋಪ ನಡೆಯಲಿದೆ ಎಂದರು.
ನಿಟ್ಟೆ ವಿವಿ ಎಂಬಿಎ ವಿಭಾಗದ ನಿರ್ದೇಶಕ ಸುಧೀರ್ ಎಂ. ಉಪಸ್ಥಿತರಿದ್ದರು.








