ಉಡುಪಿ: ಜೂನ್ 04:ಜಿಲ್ಲೆಯ ಕಾರ್ಕಳ ತಾಲೂಕಿನ ಸಾಣೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಫುಲ್ಕೇರಿ ಬೈಪಾಸ್ ಸರ್ಕಲ್ ನಿಂದ ಮಂಗಳೂರಿನ ಬಿಕರ್ನ ಕಟ್ಟೆಯ ವರೆಗೆ 45 ಕಿ.ಮೀ ರಾಷ್ಟ್ರೀಯ ಹೆದ್ದಾರಿ ನಿರ್ಮಾಣ ಕಾಮಗಾರಿ ಪ್ರಾರಂಭವಾಗಿ 3 ವರ್ಷಗಳು ಕಳೆದಿವೆ.
ಹೆದ್ದಾರಿ ಅಗಲೀಕರಣದ ಸಂದರ್ಭದಲ್ಲಿ ರಸ್ತೆಯ ಎರಡು ಬದಿಗಳಲ್ಲಿದ್ದ ಸಾವಿರಾರು ಮರಗಳನ್ನು ಅರಣ್ಯ ಇಲಾಖೆಯವರ ಮೂಲಕ ರಾಷ್ಟ್ರೀಯ ಹೆದ್ದಾರಿ ಇಲಾಖೆ ಕಡಿದಿದ್ದು, *ಕಳೆದ ಎರಡು ವರ್ಷಗಳಿಂದ ಮರ ಕಡಿದಿರುವುದರಿಂದ ಬೇಸಗೆಯಲ್ಲಿ ತಾಪಮಾನ ಏರಿ ಬಿಸಿಲಿನ ಝಳಕ್ಕೆ ನೆರಳಿಲ್ಲದೆ ರಸ್ತೆಯಲ್ಲಿ ಓಡಾಡಲು ಸಾರ್ವಜನಿಕರು ಹರ ಸಾಹಸ ಪಡುತ್ತಿದ್ದರು.
ರಾಷ್ಟ್ರೀಯ ಹೆದ್ದಾರಿ ಹೋರಾಟ ಸಮಿತಿ ಮತ್ತು ಪರಿಸರವಾದಿಗಳು ಸುಪ್ರೀಂ ಕೋರ್ಟ್ ನಿರ್ದೇಶನದಂತೆ ಕಡಿದಿರುವ ಮರಗಳ 10 ಪಟ್ಟು ಗಿಡಗಳನ್ನು ನೆಡುವಂತೆ ಹೆದ್ದಾರಿ ಮತ್ತು ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಹಲವಾರು ಬಾರಿ ಮನವಿಯನ್ನು ಸಲ್ಲಿಸಿದ್ದರು.
ಕಳೆದ ವರ್ಷ ಜೂನ್ ತಿಂಗಳಿನಲ್ಲಿ ಸಾಣೂರು ಗ್ರಾಮದ ಮಠದ ಬೈಲು ಬಳಿ ರಸ್ತೆ ಬದಿಯಲ್ಲಿ ತೀರಾ ಹತ್ತಿರ ಹತ್ತಿರವಾಗಿ 50 ಕ್ಕೂ ಹೆಚ್ಚು ದೂಪದ ಸಸಿಗಳನ್ನು ನೆಟ್ಟಿದ್ದರು.
ಇದೀಗ ಗಿಡ ನೆಟ್ಟಿರುವ ಜಾಗದ ಪಕ್ಕದಲ್ಲಿಯೇ ರಿಯಲ್ ಎಸ್ಟೇಟ್ ಉದ್ಯಮಿಗಳು ಹತ್ತಾರು ಎಕ್ರೆ ಜಾಗವನ್ನು ಜೆಸಿಬಿ ಯಂತ್ರದ ಮೂಲಕ ಸಮತಟ್ಟು ಮಾಡುವಾಗ 30 ಕ್ಕಿಂತಲೂ ಹೆಚ್ಚಿನ ಸಸಿಗಳು ಕಣ್ಮರೆಯಾಗಿವೆ.
ಅರಣ್ಯ ಇಲಾಖೆಯವರಿಗೆ ಈ ಬಗ್ಗೆ ವಿಚಾರಿಸಿದಾಗ ಅದು ನಮ್ಮ ಇಲಾಖೆಯಿಂದ ನೆಟ್ಟ ಸಸಿಗಳು ಅಲ್ಲ ರಾಷ್ಟ್ರೀಯ ಹೆದ್ದಾರಿಯವರು ನೆಟ್ಟಿರಬೇಕು ಎಂದು ಸಮಜಾಯಿಶಿಕೆ. ನೀಡಿದ್ದರು.
ರಾಷ್ಟ್ರೀಯ ಹೆದ್ದಾರಿಯವರು ಹೊಣೆಗಾರಿಕೆಯಿಂದ ನುಣುಚಿಕೊಳ್ಳುತ್ತಿದ್ದಾರೆ
3 ಸಾವಿರ ಸಾಲುಮರ ಯೋಜನೆ ಸಿದ್ಧ
4 ವರ್ಷಗಳ ಹಿಂದೆ ಹೆದ್ದಾರಿ ಅಗಲೀಕರಣದ ಸಂದರ್ಭದಲ್ಲಿ ಮೂಡಬಿದ್ರೆ ಅರಣ್ಯ ವಲಯಕ್ಕೆ ಸಂಬಂಧಪಟ್ಟಂತೆ ಸಾಣೂರಿನಿಂದ ಅಲಂಗಾರಿ(12 ಕಿ.ಮೀ.)ನವರೆಗೆ 2,200 ಮರಗಳನ್ನು ಕಡಿದಿದ್ದು, ಈ ವರ್ಷ ರಸ್ತೆಯ ಎರಡು ಬದಿಗಳಲ್ಲಿ ಸುಮಾರು 3000 ಗಿಡಗಳನ್ನು ನೆಡುವ ಯೋಜನೆಯನ್ನು ರೂಪಿಸಿರುತ್ತೇವೆ ಎಂದು ತಿಳಿಸಿರುತ್ತಾರೆ.
ಪ್ರತಿ ಕಿ.ಮೀಟರಿಗೆ 3 ಲಕ್ಷ ರೂಪಾಯಿ!
ಹೆದ್ದಾರಿ ಇಲಾಖೆಯವರು ರಸ್ತೆ ಅಗಲೀಕರಣ ಮಾಡುವ ಪ್ರತಿ ಒಂದು ಕಿಲೋಮೀಟರ್ ನಲ್ಲಿ ಎರಡು ಬದಿಗಳಲ್ಲಿ ಗಿಡ ನೆಡಲು 3 ಲಕ್ಷ ರೂಪಾಯಿಗಳನ್ನು ಅರಣ್ಯ ಇಲಾಖೆಗೆ ಕೊಟ್ಟಿರುತ್ತಾರೆ ಎಂದು ತಿಳಿಸಿರುವರು.
ಮೂಡಬಿದ್ರೆ ಕಾರ್ಕಳ ಹೆಬ್ರಿ ಅರಣ್ಯ ವಲಯದಲ್ಲಿ ಪಶು ಪಕ್ಷಿಗಳಿಗೆ ಅನುಕೂಲವಾಗುವ ದೃಷ್ಟಿಯಿಂದ ಆದಷ್ಟು ಹೆಚ್ಚಿನ ಸಂಖ್ಯೆಯಲ್ಲಿ ಹಲಸು, ಮಾವು, ನೇರಳೆ , ಹೆಬ್ಬಲಸು ಮುಂತಾದ ಹಣ್ಣಿನ ಸಸಿಗಳನ್ನು ನೆಡುವುದಾಗಿ ತಿಳಿಸಿರುತ್ತಾರೆ.
ಈಗಾಗಲೇ 1.5 ಕೋಟಿ ರೂಪಾಯಿ ಯೋಜನೆ ಸರಕಾರದಿಂದ ಅನುಮೋದನೆ ಕೊಂಡಿದ್ದು ಜನರ ಸಹಭಾಗಿತ್ವದೊಂದಿಗೆ ಶೀಘ್ರದಲ್ಲಿಯೇ ಹೆದ್ದಾರಿ ಬದಿ ಸಸಿ ನೆಡುವ ಕಾರ್ಯಕ್ರಮವನ್ನು ಪ್ರಾರಂಭಿಸುವುದಾಗಿ ತಿಳಿಸಿರುತ್ತಾರೆ.
ಕಡಿದ ಪ್ರತಿಮರಕ್ಕೆ 10 ಮರಗಳನ್ನು ಬೆಳೆಸಬೇಕು ನೆಡಬೇಕು.!?!?
ಸುಪ್ರೀಂ ಕೋರ್ಟ್ ನಿರ್ದೇಶನದಂತೆ ಕಡಿದಿರುವ ಪ್ರತಿಯೊಂದು ಮರದ ಬದಲಿಗೆ 10 ಸಸಿಗಳನ್ನು ನೆಟ್ಟು ಬೆಳೆಸುವ ಯೋಜನೆಯಡಿಯಲ್ಲಿ ಚೀಂಕ್ರಮಲೈ ಅರಣ್ಯ ವಲಯ”ದಲ್ಲಿ ಈಗಾಗಲೇ7 ಎಕರೆ ಜಾಗದಲ್ಲಿ ಸುಮಾರು ಅರ್ಧದಷ್ಟು ಪ್ಲಾಂಟೇಶನ್ ಕಾರ್ಯ ಮುಗಿದಿದ್ದು, ಆಗಸ್ಟ್ ತಿಂಗಳಲ್ಲಿ ಎಲ್ಲಾ ಸಸಿಗಳನ್ನು ನೆಟ್ಟು ಯೋಜನೆಯನ್ನು ಸಂಪೂರ್ಣಗೊಳಿಸುವುದಾಗಿ ತಿಳಿಸಿದರು.
ಸಾಣೂರಿನಿಂದ ಅಲಂಗಾರು(12ಕಿ.ಮೀ.)ವರೆಗಿನ ಸಾರ್ವಜನಿಕರು ಆಸಕ್ತಿ ತೋರಿಸಿದರೆ ಚಿಂಕ್ರಮಲೈ ಫಾರೆಸ್ಟ್ ವಲಯಕ್ಕೆ ಕರೆದುಕೊಂಡು ಹೋಗಿ ಪ್ಲಾಂಟೇಶನನ್ನು ತೋರಿಸುವುದಾಗಿ ತಿಳಿಸಿರುತ್ತಾರೆ.
1980 ರಿಂದಲೇ” ಜಂಟಿ ಅರಣ್ಯ ಯೋಜನೆ”, ಅರಣ್ಯ ಇಲಾಖೆ ಮತ್ತು ಆಸಕ್ತ ಪರಿಸರ ಪ್ರಿಯ ಸಾರ್ವಜನಿಕರ ನೆರವಿನೊಂದಿಗೆ ಅನುಷ್ಠಾನಗೊಳ್ಳುತ್ತಿದ್ದು,
“ಟ್ರೀ ಪಟ್ಟಾ” ಯೋಜನೆಯನ್ನು ಕೂಡ ಸಾರ್ವಜನಿಕರ ಸಹಭಾಗಿತ್ವದೊಂದಿಗೆ ಅನುಷ್ಠಾನಗೊಳಿಸುವುದಾಗಿ ತಿಳಿಸಿದರು.
ರಸ್ತೆ ಬದಿ ಗಿಡ ನೆಡಲು ಸ್ಥಳಾವಕಾಶದ ಕೊರತೆ
ರಾಷ್ಟ್ರೀಯ ಹೆದ್ದಾರಿ ಇಲಾಖೆಯವರು ಭೂಸ್ವಾಧೀನ ಮಾಡಿಕೊಳ್ಳುವಾಗ ರಸ್ತೆಯ ಎರಡು ಬದಿಗಳಲ್ಲಿ ಗಿಡ ನೆಡಲು ಸಾಕಷ್ಟು ಜಾಗವನ್ನು ಕಾಯ್ದಿರಿಸದೆ ಇರುವುದರಿಂದ ಹೆದ್ದಾರಿ ಕಾಮಗಾರಿ ಮುಗಿದ ಬಳಿಕ ರಸ್ತೆ ಬದಿಯಲ್ಲಿ ಕೇವಲ ಪೈಪ್ ಲೈನ್ , ವಿದ್ಯುತ್ ಕಂಬಗಳಿಗೆ ಇನ್ನಿತರ ಮೂಲಭೂತ ಸೌಕರ್ಯಗಳ ವಿಸ್ತರಣೆಗೆ ಮಾತ್ರ ಸ್ಥಳಾವಕಾಶ ಲಭ್ಯವಿದ್ದು ಸಾಲು ಮರಗಳನ್ನು ನೆಡಲು ಕೆಲವೊಂದು ಕಡೆಗಳಲ್ಲಿ ಸ್ಥಳಾವಕಾಶ ಸಿಗದೇ ಖಾಸಗಿ ವ್ಯಕ್ತಿಗಳಿಂದ, ಸಂಸ್ಥೆಗಳಿಂದ ತಮ್ಮ ಕಟ್ಟಡದ ಎದುರು ಗಿಡ ನೀಡಲು ವಿರೋಧ ವ್ಯಕ್ತವಾಗುತ್ತದೆ.
ಹೆದ್ದಾರಿ ಯೋಜನೆ ರೂಪಿಸುವಾಗಲೇ ಗಿಡ ನೆಡಲು ಬೇಕಾಗುವಷ್ಟು ಭೂಸ್ವಾಧೀನ ಮಾಡಿಕೊಂಡು ಅರಣ್ಯ ಇಲಾಖೆಗೆ ಹಸ್ತಾಂತರಿಸುವಂತಾಗಬೇಕು ಎಂದು ಎಸಿಎಫ್ ಶ್ರೀಧರ್ ರವರು ತಮ್ಮ ಅಭಿಪ್ರಾಯವನ್ನು ತಿಳಿಸಿದರು.
ಟ್ರೀ_ಆಡಿಟ್(TREE AUDIT) ಪ್ರಾರಂಭಿಸಬೇಕು!?!?
ನೆಟ್ಟ ಗಿಡಗಳ ಲೆಕ್ಕ ಕೇವಲ ಅಂಕಿ ಅಂಶಗಳ ದಾಖಲೆಯಲ್ಲಿ ಮಾತ್ರ ಇರದೆ, ಜನರ ಸಹಭಾಗಿತ್ವದೊಂದಿಗೆ ಗಿಡ ನೆಡುವಿಕೆ ,ಪೋಷಣೆ ಮತ್ತು ಮರಗಳ ರಕ್ಷಣಾ ಕಾರ್ಯ ಪರಿಸರ ಅಭಿಯಾನದ ರೂಪದಲ್ಲಿ ನಡೆದರೆ ನೆಟ್ಟ ಹೆಚ್ಚಿನಲ್ಲಾ ಗಿಡಗಳು ಮರಗಳಾಗಿ ಪರಿಸರದ ಆಸ್ತಿಯಾಗುತ್ತದೆ.
ಪಂಚಾಯತ್ ವ್ಯಾಪ್ತಿಯಲ್ಲಿ ನೆಟ್ಟ ಗಿಡಗಳು ಮತ್ತು ಮರಗಳಾಗಿ ಬೆಳೆಯುವವರೆಗೆ ಗಿಡಗಳ ಆರೈಕೆ ಮತ್ತು ರಕ್ಷಣೆಗಾಗಿ ಪ್ರತಿ ಗಿಡದ ಜವಾಬ್ದಾರಿಯನ್ನು ಒಬ್ಬರಿಗೆ ನೀಡಿದರೆ ಪರಿಸರದ ಜನತೆಯ ಸಹಭಾಗಿತ್ವದೊಂದಿಗೆ ಯೋಜನೆ ಯಶಸ್ವಿಯಾಗಬಹುದು.
ಕಾಲ ಕಾಲಕ್ಕೆ ಇಲಾಖೆ ಮತ್ತು ಸಾರ್ವಜನಿಕರ ಸಹಭಾಗಿತ್ವದ ಜಂಟಿ ಸರ್ವೆ ನಡೆಸಿ ನೆಟ್ಟ ಗಿಡಗಳು ಮತ್ತು ಬೆಳೆಯುತ್ತಿರುವ ಮರಗಳ ಟ್ರೀ ಆಡಿಟ್ ನಡೆಸುವಂತಾಹದರೆ ಹೆದ್ದಾರಿ ಬದಿಗಳಲ್ಲಿ ಸಾಲುಮರಗಳು ಬೆಳೆದು ಪ್ರಕೃತಿಯು ನಳನಳಿಸಬಹುದು ಎಂದು ಸಾಣೂರು ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷರಾದ ಸಾಣೂರು ನರಸಿಂಹ ಕಾಮತ್ ರವರು ಮಾಧ್ಯಮಗಳಿಗೆ ತಿಳಿಸಿರುತ್ತಾರೆ.