ಬೆಂಗಳೂರು, ಮೇ. 22 :ರಾಜ್ಯದ ಪ್ರಭಾರ ಪೊಲೀಸ್ ಮಹಾನಿರ್ದೇಶಕರಾಗಿ ಹಿರಿಯ ಐಪಿಎಸ್ ಅಧಿಕಾರಿ ಡಾ.ಎಂ.ಎ.ಸಲೀಂ ಅವರನ್ನು ನೇಮಕಗೊಳಿಸಿ ರಾಜ್ಯ ಸರ್ಕಾರ ಆದೇಶ ಮಾಡಿದೆ.
ರಾಜ್ಯ ಪೊಲೀಸ್ ಮಹಾನಿರ್ದೇಶಕ ಅಲೋಕ್ ಮೋಹನ್ ಅವರು ಕಳೆದ ಏಪ್ರಿಲ್ 30ರಂದು ನಿವೃತ್ತಿಯಾಗಿದ್ದು, ಅವರ ಸೇವಾವಧಿಯನ್ನು ಎರಡು ವರ್ಷಗಳಿಗೆ ಪೂರ್ತಿಗೊಳಿಸಲು ಮೇ 21ರ ವರೆಗೆ ರಾಜ್ಯ ಸರಕಾರ ವಿಸ್ತರಿಸಿತ್ತು. ಇದೀಗ ಡಾ.ಎಂ.ಎ.ಸಲೀಂ ಅವರನ್ನು ರಾಜ್ಯದ ಪ್ರಭಾರ ಪೊಲೀಸ್ ಮಹಾನಿರ್ದೇಶಕರಾಗಿ ನೇಮಕಗೊಳಿಸಿ ಆದೇಶ ಮಾಡಲಾಗಿದೆ.
ಬೆಂಗಳೂರಿನ ಚಿಕ್ಕಬಾಣಾವರದ ನಿವಾಸಿ ಕನ್ನಡಿಗರೇ ಆಗಿರುವ ಎಂ.ಎ. ಸಲೀಂ 1993ನೇ ಸಾಲಿನ ಕರ್ನಾಟಕ ಕೇಡರ್ ಐಪಿಎಸ್ ಅಧಿಕಾರಿಯಾಗಿದ್ದಾರೆ.
ಸಲೀಂ ಅವರು ಮುಂದಿನ ವರ್ಷ ಜೂನ್ ವೇಳೆಗೆ ನಿವೃತ್ತರಾಗಲಿದ್ದು, 13 ತಿಂಗಳ ಕಾಲ ಡಿಪಿಯಾಗಿ ಕರ್ತವ್ಯದಲ್ಲಿ ಇರಲಿದ್ದಾರೆ. ಕಲಬುರಗಿಯಲ್ಲಿ ಎಎಸ್ಪಿ, ಆ ಬಳಿಕ ಕುಶಾಲನಗರದಲ್ಲಿ ಎಎಸ್ಪಿಯಾಗಿ ಕರ್ತವ್ಯ ಆರಂಭಿಸಿ, 1998ರಲ್ಲಿ ಉಡುಪಿಯಲ್ಲಿ ಎಸ್ಪಿ ಆಗುವ ಮೂಲಕ ಕರ್ನಾಟಕ ಪೊಲೀಸ್ ಇಲಾಖೆಯಲ್ಲಿ 30 ವರ್ಷಗಳ ಕಾಲ ಸೇವಾನುಭವ ಹೊಂದಿದ್ದಾರೆ