ಕಾರ್ಕಳ: ಕೇಂದ್ರ ಸರಕಾರ ಪ್ರವಾಸೋದ್ಯಮಕ್ಕೆ ಹೆಚ್ಚು ಒತ್ತು ನೀಡುತಿದ್ದು, ಕಾರ್ಕಳ ಕ್ಷೇತ್ರದ ಆನೆಕೆರೆ ಬಸದಿ, ರಾಮಸಮುದ್ರ ಹಾಗೂ ವರಂಗ ಬಸದಿ ಇವುಗಳನ್ನು ಸುಮಾರು 116 ಕೋ.ರೂ ವೆಚ್ಚದಲ್ಲಿ ಸಮಗ್ರವಾಗಿ ಅಭಿವೃದ್ದಿ ಪಡಿಸಲು ಸಂಸದ ಕೋಟ ಶ್ರೀನಿವಾಸ ಪೂಜಾರಿ, ಕ್ಷೇತ್ರದ ಶಾಸಕ ವಿ. ಸುನಿಲ್ ಕುಮಾರ್ ಪ್ರಸ್ತಾವನೆ ಸಲ್ಲಿಸಿದ್ದು, ಈ ಕುರಿತು ಪರಿಶೀಲಿಸಿ, ಕೇಂದ್ರ ಸರಕಾರದ ಸ್ವದೇಶಿ ದರ್ಶನ್ ಯೋಜನೆಯಡಿ ಅನುದಾನಕ್ಕೆ ಪ್ರಯತ್ನಿಸಲಾಗುವುದು ಎಂದು ಕೇಂದ್ರ ಪ್ರವಾಸೋದ್ಯಮ ಸಚಿವ ಗಜೇಂದ್ರ ಶೇಖಾವತ್ ಹೇಳಿದರು.
ಆನೆಕೆರೆ ಬಸದಿ, ರಾಮಸಮುದ್ರ ಅನ್ನು ಗುರುವಾರ ಬೆಳಗ್ಗೆ ವೀಕ್ಷಣೆ ನಡೆಸಿ ತಕ್ಷಣಕ್ಕೆ ಪ್ರತಿಕ್ರಿಯಿಸಿ ಮಾತನಾಡಿದರು. ಶಾಸಕ ವಿ. ಸುನಿಲ್ ಕುಮಾರ್ ಅವರು ಸಚಿವರನ್ನು ಸ್ವಾಗತಿಸಿ, ಗಜೇಂದ್ರ ಶೇಖಾವತ್ ಪ್ರವಾಸೋದ್ಯಮ ಸಚಿವರು ಆದಾಗ ಸಂಸದರ ನೇತ್ರತ್ವದಲ್ಲಿ ದೆಹಲಿಯಲ್ಲಿ ಭೇಟಿಯಾಗಿ ಕ್ಷೇತ್ರದ ಎರಡೂ ಪ್ರವಾಸಿ ಕೇಂದ್ರದ ಕುರಿತು ನೀಲಿ ನಕ್ಷೆ ತಯಾರಿಸಿ ನೀಡಲಾಗಿದೆ.
ಕ್ಷೇತ್ರದ ಎರಡೂ ಪ್ರವಾಸಿ ಕೇಂದ್ರವನ್ನು ಬಾಹುಬಲಿ ಕೇಂದ್ರಿಕರಿಸಿ 116 ಕೋ.ರೂ ವೆಚ್ಚದಲ್ಲಿ ಅಭಿವೃದ್ದಿ ಪಡಿಸುವಂತೆ ಪ್ರಸ್ತಾವನೆ ಸಲ್ಲಿಸಲಾಗಿದ್ದು, ಸ್ವತ: ಕೇಂದ್ರ ಸಚಿವರೆ ಖುದ್ದಾಗಿ ವೀಕ್ಷಣೆ ನಡೆಸಲು ಆಗಮಿಸಿರುವುದಾಗಿ ಅವರು ಹೇಳಿದರು. ಸಂಸದ ಕೋಟ ಶ್ರೀನಿವಾಸ ಪೂಜಾರಿ ಅವರ ಸಹಕಾರ ಕೋರಿದರು.
ಸಂಸದ ಕೋಟಾ ಶ್ರೀನಿವಾಸ ಪೂಜಾರಿ, ಜಿಲ್ಲಾ ಬಿಜೆಪಿ ಅಧ್ಯಕ್ಷ ಕಿಶೋರುಕುಮಾರ್, ಕ್ಷೇತ್ರಾಧ್ಯಕ್ಷ ನವೀನ್ ನಾಯಕ್, ಹಿರಿಯ ನ್ಯಾಯವಾಧಿ ಎಂ.ಕೆ ವಿಜಯ ಕುಮಾರ್, ಮಹಾವೀರ ಹೆಗ್ಡೆ, ಪುರಸಭೆ ಅಧ್ಯಕ್ಷ ಯೊಗೀಶ್ ದೇವಾಡಿಗ, ಉಪಾಧ್ಯಕ್ಷ ಪ್ರಶಾಂತ್ ಕೋಟ್ಯಾನ್ ಸಹಿತ ಹಲವು ಮುಖಂಡರು ಹಾಗೂ ಉಡುಪಿ ಜಿಲ್ಲಾಧಿಕಾರಿ ಡಾ. ವಿದ್ಯಾಕುಮಾರಿ, ಕುಂದಾಪುರ ವಿಭಾಗ ಸಹಾಯಕ ಆಯುಕ್ತೆ ರಶ್ಮಿ, ತಹಶೀಲ್ದಾರ್ ಪ್ರದೀಪ್ ಕುಮಾರ್, ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು. ಕೇಂದ್ರ ಸಚಿವರು ಆನೆಕೆರೆ ಬಸದಿ ವೀಕ್ಷಣೆಯಲ್ಲಿ ನಿರತರಾದ ಬಳಿಕ ಪ್ರವಾಸಿ ಕೇಂದ್ರದಲ್ಲಿ ಅಧಿಕಾರಿಗಳ ಸಭೆ ನಡೆಸಿದರು.