ಮೂಡುಬಿದಿರೆ:ಫೆಬ್ರವರಿ 17: ಹಾಡು ಹಗಲಲ್ಲೇ ಮನೆಗೆ ನುಗ್ಗಿದ ಕಳ್ಳರು ಮನೆಯ ಕಪಾಟಿನಲ್ಲಿದ್ದ ಮೂರೂವರೆ ಲಕ್ಷ ರೂ. ನಗದು ಹಾಗೂ 20 ಪವನ್ ಚಿನ್ನಾಭರಣವನ್ನು ದೋಚಿದ ಘಟನೆ ಅಳಿಯೂರಿನಲ್ಲಿ ರವಿವಾರ ನಡೆದಿದೆ.
ಅಳಿಯೂರಿನ ನೇಲಡೆಯ ನಿವಾಸಿ, ಖ್ಯಾತ ಪಾಕತಜ್ಞರಾಗಿರುವ ಪ್ರಶಾಂತ್ ಜೈನ್ ಅವರ ಮನೆಯಲ್ಲಿ ಕಳ್ಳತನ ನಡೆದಿದ್ದು ಈ ಸಂದರ್ಭ ಮನೆಯಲ್ಲಿ ಅವರ ಮಗಳ ಹೊರತಾಗಿ ಬೇರಾರೂ ಇರಲಿಲ್ಲ. ಪ್ರಶಾಂತ್ ಮತ್ತು ಅವರ ಮಗ ಮುಲ್ಕಿಯಲ್ಲಿ ಅಡುಗೆ ಕೆಲಸಕ್ಕೆ ಹೋಗಿದ್ದು ಅವರ ಪತ್ನಿ ಶಿರ್ತಾಡಿಯಲ್ಲಿ ನಡೆದ ಕಾರ್ಯಕ್ರಮವೊಂದಕ್ಕೆ ಹೋಗಿದ್ದರು
ಇದೇ ಸಮಯವನ್ನು ಅರಿತ ಕಳ್ಳರು ಆ ಮನೆಯೊಳಗೆ ನುಗ್ಗಿದ್ದಾರೆ. ಕಪಾಟು ತೆರೆಯುವ ಸದ್ದು ಕೇಳಿ ಯುವತಿ ಬಂದು ನೋಡಿದಾಗ ಬೊಬ್ಬೆ ಹೊಡೆಯದಂತೆ ಬಾಯಿಗೆ ಒತ್ತಿ ಹಿಡಿದರೆನ್ನಲಾಗಿದೆ. ಅಲ್ಲದೆ ಆಕೆಗೆ ಸ್ಪೇ ಹಾಕಿ ಪ್ರಜ್ಞೆ ತಪ್ಪಿಸಿ ನಗದು ಮತ್ತು ಚಿನ್ನಾಭರಣವನ್ನು ದೋಚಿಕೊಂಡು ಹೋಗಿದ್ದಾರೆ ಎಂದು ದೂರಲಾಗಿದೆ.
ಬೆಳಿಗ್ಗೆ ಹತ್ತೂವರೆ ಗಂಟೆ ವೇಳೆಗೆ ಈ ಘಟನೆ ಸಂಭವಿಸಿದ್ದು, ಮಧ್ಯಾಹ್ನ 12.30 ವೇಳೆಗೆ ನೆರೆಮನೆಯಲ್ಲಿರುವ ಸಂಬಂಧಿಕ ಮಹಿಳೆ ಬಂದ ನಂತರವೇ ಆಕೆ ಎಚ್ಚರಗೊಂಡು ನಡೆದ ಘಟನೆಯನ್ನು ಅವರಲ್ಲಿ ವಿವರಿಸಿದ್ದಾರೆಳೆನ್ನಲಾಗಿದೆ.
ಘಟನಾ ಸ್ಥಳಕ್ಕೆ ಪಣಂಬೂರು ಎಸಿಪಿ ಶ್ರೀಕಾಂತ್, ಮೂಡುಬಿದಿರೆ ಇನ್ಸೆಕ್ಟರ್ ಸಂದೇಶ್ ಪಿ.ಜಿ ಭೇಟಿ ನೀಡಿದ್ದು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಶ್ವಾನದಳ, ಪ್ರಾಯೋಗಿಕ ವಿಧಿ ವಿಜ್ಞಾನದವರೂ ಭೇಟಿ ನೀಡಿದ್ದು ತನಿಖೆ ನಡೆಯುತ್ತಿದೆ.
ಮನೆಯೊಳಗಡೆ ನುಗ್ಗಿರುವ ಇಬ್ಬರು ಮುಸುಕುಧಾರಿಗಳು ಎಂದು ತಿಳಿದುಬಂದಿದ್ದು, ಸ್ಥಳೀಯ ಹಾಗೂ ಈ ಮನೆಯನ್ನು ಬಲ್ಲವರೇ ಈ ಕೃತ್ಯವೆಸಗಿರಬಹುದೆಂದು ಪೊಲೀಸರು ಶಂಕಿಸಿದ್ದಾರೆ.