ಉಡುಪಿ, ಸೆ.16: ಶ್ರೀಕೃಷ್ಣ ಜನ್ಮಾಷ್ಟಮಿ ಸಂದರ್ಭದಲ್ಲಿ ವೇಷಧರಿಸಿ ಸಾರ್ವಜನಿಕ ವಲಯದಲ್ಲಿ ಕಲೆ ಪ್ರದರ್ಶಿಸುವ ಮೂಲಕ ಸಂಗ್ರಹಿಸಿದ ₹5 ಲಕ್ಷ ಹಣವನ್ನು ಕಿಡ್ನಿ ವೈಫಲ್ಯದಿಂದ ಬಳಲುತ್ತಿರುವ ಬಡರೋಗಿಯ ಚಿಕಿತ್ಸೆಗೆ ನೀಡುವ ಮೂಲಕ ಸುಷ್ಮಾ ಎಂ. ಬಂಟ್ವಾಳ್ ಮಾನವೀಯತೆ ಮೆರೆದಿದ್ದಾರೆ.
ಶಿವಳ್ಳಿ ಗ್ರಾಮದ ಪೆರಂಪಳ್ಳಿ ವಾರ್ಡ್ ನಿವಾಸಿ ರಂಜಿತ್ ನಾಯ್ಕ್ ಅವರು ಎರಡೂ ಕಿಡ್ನಿಗಳ ವೈಫಲ್ಯದಿಂದ ಬಳಲುತ್ತಿದ್ದು, ವೈದ್ಯರ ಸಲಹೆಯಂತೆ ಕಿಡ್ನಿ ಕಸಿ ಮಾಡಿಸಬೇಕಾಗಿದೆ. ಚಿಕಿತ್ಸೆಗೆ ಸುಮಾರು ₹25 ಲಕ್ಷ ಹಣದ ಅಗತ್ಯವಿದ್ದು, ಆರ್ಥಿಕ ಸಂಕಷ್ಟದಲ್ಲಿರುವ ಕುಟುಂಬಕ್ಕೆ ಇಷ್ಟೊಂದು ದೊಡ್ಡ ಮೊತ್ತವನ್ನು ಭರಿಸುವುದು ಕಷ್ಟಕರವಾಗಿತ್ತು.
ಈ ಹಿನ್ನೆಲೆಯಲ್ಲಿ ಸುಷ್ಮಾ ಬಂಟ್ವಾಳ್ ಅವರು ಜನ್ಮಾಷ್ಟಮಿ ಸಂದರ್ಭದಲ್ಲಿ ವೇಷಧರಿಸಿ ಕಲೆ ಪ್ರದರ್ಶಿಸುವ ಮೂಲಕ ಸಂಗ್ರಹಿಸಿದ ಹಣದಲ್ಲಿ ₹5 ಲಕ್ಷವನ್ನು ರಂಜಿತ್ ನಾಯ್ಕ್ ಅವರ ಚಿಕಿತ್ಸೆಗೆ ನೆರವಾಗುವ ಉದ್ದೇಶದಿಂದ ಕುಟುಂಬಕ್ಕೆ ಹಸ್ತಾಂತರಿಸಿದರು.
ಪೆರಂಪಳ್ಳಿಯಲ್ಲಿರುವ ರಂಜಿತ್ ನಾಯ್ಕ್ ಅವರ ನಿವಾಸದಲ್ಲಿ ನಡೆದ ಧನಸಹಾಯ ಹಸ್ತಾಂತರ ಕಾರ್ಯಕ್ರಮದಲ್ಲಿ ಸಮಾಜ ಸೇವಕ ನಿತ್ಯಾನಂದ ಒಳಕಾಡು, ಉಡುಪಿ ಮೆಸ್ಕಾಂ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಗಣರಾಜ್ ಭಟ್, ನಗರ ಪೊಲೀಸ್ ಠಾಣೆಯ ಎಸ್ಐ ಭರತೇಶ್, ವಕೀಲ ಶಾಂತರಾಮ ಶೆಟ್ಟಿ, ಜಿ.ಕೆ. ಎಲೆಕ್ಟ್ರಿಕಲ್ಸ್ ಮಾಲಕ ವಿಕ್ರಾಂತ್ ಶೆಟ್ಟಿ ಹಾಗೂ ಸುಷ್ಮಾ ಬಂಟ್ವಾಳ್ ಅವರ ಆಪ್ತರು ಮತ್ತು ಹಿತೈಷಿಗಳು ಉಪಸ್ಥಿತರಿದ್ದರು.






