ಶಿರ್ವ: ಮಾನಸಿಕ ಅಸ್ವಸ್ಥತೆ ಹಾಗೂ ವಿಪರೀತ ಕುಡಿತದ ಚಟದಿಂದ ಬಳಲುತ್ತಿದ್ದ 45 ವರ್ಷದ ವ್ಯಕ್ತಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡ ಘಟನೆ ಶಿರ್ವ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಮಟ್ಟಾರು, ಶಿರ್ವ ಗ್ರಾಮದ ಕವಿತಾ (22) ಎಂಬವರು ನೀಡಿದ ದೂರಿನ ಪ್ರಕಾರ, ಅವರ ತಂದೆ ದೇಶ್ರಾಜ್ ಬಾಬು (45) ಅವರು ಕಾಪು ತಾಲೂಕು ಕಳತ್ತೂರು ಗ್ರಾಮದ ಪಾದೂರು ಚಂದ್ರನಗರದಲ್ಲಿ ಉಮರಬ್ಬ ಎಂಬುವರ ಮನೆಯಲ್ಲಿ ಮನೆಕೆಲಸ ಮಾಡಿಕೊಂಡಿದ್ದರು. ಅವರು ವಿಪರೀತ ಕುಡಿತದ ಚಟ ಹೊಂದಿದ್ದು, ಮಾನಸಿಕ ಅಸ್ವಸ್ಥತೆಯಿಂದಲೂ ಬಳಲುತ್ತಿದ್ದರು ಎನ್ನಲಾಗಿದೆ.
ಸೆಪ್ಟೆಂಬರ್ 8ರ ರಾತ್ರಿ 11:45ರಿಂದ ಸೆಪ್ಟೆಂಬರ್ 9ರ ಬೆಳಗ್ಗೆ 7 ಗಂಟೆಯ ನಡುವಿನ ಅವಧಿಯಲ್ಲಿ, ಕುಡಿತದ ಚಟ, ಮಾನಸಿಕ ಅಸ್ವಸ್ಥತೆ ಅಥವಾ ಬೇರೆ ಯಾವುದೋ ಕಾರಣದಿಂದ ಮನನೊಂದು ಮನೆಯ ಬಾವಿಯ ಬಳಿ ಇರುವ ಹಳೆಯ ಶೆಡ್ನ ಹಿಂಬದಿಯ ತೋಟದಲ್ಲಿದ್ದ ಚಿಕ್ಕು ಮರದ ಗೆಲ್ಲಿಗೆ ಹಗ್ಗ ಕಟ್ಟಿ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ.
ಈ ಕುರಿತು ಶಿರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.






